ಕಾಂಗ್ರೆಸ್‌ನ ವರಿಷ್ಠ ನಾಯಕರಿಗೆ ಸಲಹೆ ನೀಡುವುದೇ ಅಪರಾಧ..! ಗುಲಾಂ ನಬಿ ಆಜಾದ್‌ ಬೇಸರ

: 'ಕಾಂಗ್ರೆಸ್‌ನಲ್ಲಿ ಹಿಂದೆ ಇದ್ದ ಪ್ರಬುದ್ಧ ಸ್ಥಿತಿ ಈಗ ಉಳಿದಿಲ್ಲ. ಮುಕ್ತತೆಗೆ ತೆರೆದುಕೊಳ್ಳದೇ ಮುಚ್ಚಿದ ಮನಸ್ಥಿತಿಯ ಸಂಕುಚಿತ ನಾಯಕರು ಪಕ್ಷದ ಮುಂಚೂಣಿಯಲ್ಲಿದ್ದಾರೆ. ಅವರಿಗೆ ನೀಡುವುದೇ ಅಪರಾಧವಾಗಿದೆ' ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 45 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ಇರುವ ಆಜಾದ್‌, ವಿವಾದಗಳಿಂದ ದೂರ ಉಳಿದವರು. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ ನಾಯಕತ್ವದ ದೌರ್ಬಲ್ಯ ಹಾಗೂ ವೈಫಲ್ಯದ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಬಣ 'ಜಿ-23' ಗುಂಪಿನ ಜತೆ ಗುರುತಿಸಿಕೊಂಡಿರುವ ಜಮ್ಮು - ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆಜಾದ್‌, ಭಾನುವಾರ ರಾಮ್‌ಬನ್‌ ಪ್ರದೇಶದಲ್ಲಿ ಸಮಾವೇಶ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಈ ವೇಳೆ, ತಮ್ಮದೇ ಪಕ್ಷದ ನಾಯಕತ್ವದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 'ಕಾಂಗ್ರೆಸ್‌ ಸದ್ಯ ಬಿಕ್ಕಟ್ಟಿನಲ್ಲಿದೆ. ಪಕ್ಷಕ್ಕೆ ಈಗ ಉತ್ತಮ ಐಡಿಯಾಗಳ ಸಾಥ್‌ ಬೇಕು. ಹಾಗೆಂದು ನಾವು ಸಲಹೆ ನೀಡಲು ಹೋದರೆ ಪ್ರಯೋಜನ ಇಲ್ಲ. ಈಗಿನ ನಾಯಕತ್ವಕ್ಕೆ ಸಲಹೆಗಳನ್ನು ಸ್ವೀಕರಿಸುವ ದೊಡ್ಡ ಗುಣವೇ ಇಲ್ಲ. ಬಲವಂತದಿಂದ ಏನಾದರೂ ಸಲಹೆ ನೀಡಿದರೆ, ಅಂತಹವರನ್ನು ಅಪರಾಧಿಗಳಂತೆ ನೋಡಲಾಗುತ್ತದೆ. ಭಿನ್ನಮತೀಯರು ಎಂದು ಹಣೆಪಟ್ಟಿ ಅಂಟಿಸಿ ಸುಮ್ಮನಿರಿಸಲಾಗುತ್ತಿದೆ. ಇದರ ಕೆಟ್ಟ ಪರಿಣಾಮ ಪಕ್ಷದ ಮೇಲೆ ಉಂಟಾಗುತ್ತಿದೆ' ಎಂದರು. 'ನಾವು ನೀಡುವ ಸಲಹೆಗೆ ಬೆಲೆ ಇಲ್ಲ ಎನ್ನಿಸಿದಾಗ ನೋವಾಗುವುದು ಸಹಜ. ಪಕ್ಷದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ಸಲಹೆ ನೀಡುತ್ತೇವೆ. ನಮಗಾರಿಗೂ ಅಧಿಕಾರದ ಹಪಾಹಪಿ ಇಲ್ಲ. ಹುದ್ದೆಗಳು ಬೇಕಿಲ್ಲ. ಪಕ್ಷ ಬೆಳೆದರೆ ಸಾಕು. ಚುನಾವಣೆಗಳಲ್ಲಿ ಅದರ ಸಾಧನೆ ಸುಧಾರಿಸಬೇಕು. ಆದರೆ ಈಗಿನ ನಾಯಕತ್ವದಡಿ ಅದು ಹೇಗೆ ಸಾಧ್ಯವಾಗುತ್ತದೆ ಎನ್ನುವುದು ಯಕ್ಷ ಪ್ರಶ್ನೆ' ಎಂದು ಆಜಾದ್‌ ಹೇಳಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 300 ಸೀಟು ಮುಟ್ಟುವುದಿಲ್ಲ ಎನ್ನುವ ತಮ್ಮ ಹೇಳಿಕೆ ಕುರಿತೂ ಆಜಾದ್‌ ಸಮರ್ಥನೆ ನೀಡಿದರು. 'ಕಾಂಗ್ರೆಸ್‌ 300 ಸೀಟು ಗೆಲ್ಲುವ ಸಾಧನೆ ಮಾಡಿರುವುದು ಇಡೀ ಇತಿಹಾಸದಲ್ಲಿ ಒಂದು ಬಾರಿ ಮಾತ್ರ. ಅದು ಇಂದಿರಾ ಗಾಂಧಿ ನಾಯಕತ್ವದಲ್ಲಿ ಅಂತಹದ್ದೊಂದು ಸಾಧನೆ ಸಾಧ್ಯವಾಗಿತ್ತು. ನಂತರ ಮತ್ತೊಮ್ಮೆ 250 ಸೀಟು ದಾಟಿದಾಗ ನರಸಿಂಹ ರಾವ್‌ ಪ್ರಧಾನಿಯಾದರು. ಉಳಿದಂತೆ ಕಾಂಗ್ರೆಸ್‌ ಸಾಧನೆ ಮುನ್ನೂರರ ಗಡಿಯನ್ನು ಎಂದೂ ಮುಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಮುಂದಿನ ಬಾರಿಯೂ 300 ಸೀಟು ಗೆಲ್ಲುವುದು ದುಸ್ತರ. ಭ್ರಮೆ ಕಳಚಿ ನೋಡಿದಾಗ ಅಂತಹದ್ದೊಂದು ಲೆಕ್ಕ ಹೊಳೆಯುತ್ತದೆ' ಎಂದರು. ಮಮತಾ ಉದ್ದೇಶ ಪ್ರಶ್ನಿಸಿದ ಬಘೇಲ್‌ 'ಯುಪಿಎ ಅಸ್ಥಿತ್ವದಲ್ಲಿಯೇ ಇಲ್ಲ. ಅದರ ಹೆಸರು ಪ್ರಸ್ತಾಪಿಸುವುದೇ ಅಪ್ರಸ್ತುತ' ಎನ್ನುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಟಿಎಂಸಿಯನ್ನು ಪ್ರಧಾನ ಪ್ರತಿಪಕ್ಷವಾಗಿಸಲು ಹೊರಟಿರುವ ಮಮತಾ ಬ್ಯಾನರ್ಜಿಯವರ ನಿಜವಾದ ಉದ್ದೇಶ ಏನು? ಅಧಿಕಾರದಲ್ಲಿರುವವರ ವಿರುದ್ಧ ಹೋರಾಡಿ ಅಂತಹದ್ದೊಂದು ಸ್ಥಾನ ಗಿಟ್ಟಿಸಲು ಹೊರಟಿದ್ದೀರಾ ಅಥವಾ ಪ್ರತಿಪಕ್ಷಗಳನ್ನೇ ಮುಗಿಸಿ ಪ್ರಧಾನ ಪ್ರತಿಪಕ್ಷ ಆಗಲು ಹವಣಿಸುತ್ತಿದ್ದೀರಾ ತಿಳಿಸಿ' ಎಂದು ಮಮತಾ ಅವರನ್ನು ಬಘೇಲ್‌ ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/3GkBSkl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...