: ವಿಶ್ವಾದ್ಯಂತ ಓಮಿಕ್ರಾನ್ ಆತಂಕದ ನಡುವೆಯೇ, ಭಾರತದಲ್ಲಿ ಈ ರೂಪಾಂತರಿಯಿಂದ ಸೋಂಕಿಗೆ ಒಳಗಾದವರ ಸಂಖ್ಯೆ ಭಾನುವಾರ ದಿಢೀರನೆ 21ಕ್ಕೆ ಜಿಗಿದಿದೆ. ಭಾನುವಾರ ಒಂದೇ ದಿನ ರಾಜಸ್ಥಾನದ ಜೈಪುರದಲ್ಲಿ 9 ಮಂದಿ, ಮಹಾರಾಷ್ಟ್ರದ ಪುಣೆಯಲ್ಲಿ 7 ಮಂದಿ ಮತ್ತು ದಿಲ್ಲಿಯಲ್ಲಿ ಒಬ್ಬರಿಗೆ 'ಓಮಿಕ್ರಾನ್' ದೃಢಪಟ್ಟಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಇಬ್ಬರಿಗೆ, ಮುಂಬಯಿ ಮತ್ತು ಗುಜರಾತ್ನಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿತ್ತು. ಪುಣೆಯಲ್ಲಿ ಸೋಂಕು ದೃಢಪಟ್ಟವರ ಪೈಕಿ ನಾಲ್ವರು ವಿದೇಶಿ ಪ್ರವಾಸ ಮುಗಿಸಿ ವಾಪಸಾದವರು ಮತ್ತು ಇನ್ನೂ ಮೂವರು ಅವರ ನಿಕಟ ಸಂಪರ್ಕಿತರು. ಜೈಪುರದ ಸೋಂಕಿತರೆಲ್ಲರೂ ಒಂದೇ ಕುಟುಂಬದವರು. ಇತ್ತ ದಿಲ್ಲಿಯ ಸೋಂಕಿತ ತಾಂಜನಿಯಾದಿಂದ ಬಂದಿದ್ದರೆಂದು ತಿಳಿದುಬಂದಿದೆ. ಈ ಮಧ್ಯೆ, ಆಫ್ರಿಕಾದ ವಿವಿಧ ದೇಶಗಳಿಂದ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಗೆ ಆಗಮಿಸಿದ ಐದು ಜನರಿಗೆ ಸೋಂಕು ತಗುಲಿರುವುದು ಆರ್ಟಿ - ಪಿಸಿಆರ್ ಪರೀಕ್ಷೆಯಲ್ಲಿ ಖಾತರಿಯಾಗಿದೆ. ನವೋದಯ ಶಾಲೆಯ 69 ಮಂದಿಗೆ ಸೋಂಕು ಚಿಕ್ಕಮಗಳೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 59 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 69 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎಲ್ಲಾ ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು ಯಾರಲ್ಲೂ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ಎಲ್ಲರನ್ನೂ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ವಸತಿ ಶಾಲೆ, ಧಾರವಾಡದ ನರ್ಸಿಂಗ್ ಕಾಲೇಜು ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಶಾಲೆಗಳು ಕೋವಿಡ್ ಕ್ಲಸ್ಟರ್ಗಳಾಗುತ್ತಿರುವ ಬಗ್ಗೆ ಪೋಷಕರಲ್ಲಿ ಆತಂಕ ವ್ಯಕ್ತವಾಗಿದೆ. ಆದರೆ, ಬಹುತೇಕ ಸೋಂಕಿತರು ಲಕ್ಷಣ ರಹಿತರಾಗಿರುವುದು ಸಮಾಧಾನದ ಸಂಗತಿ. ಆಫ್ರಿಕಾ ಪ್ರಜೆ ಸಂಪರ್ಕಿತರಿಗೆ ಪಾಸಿಟಿವ್ ಬೆಂಗಳೂರಿಗೆ ಭೇಟಿ ನೀಡಿ ಸ್ವದೇಶಕ್ಕೆ ವಾಪಸಾಗಿರುವ ದಕ್ಷಿಣ ಆಫ್ರಿಕಾ ಮೂಲದ ಓಮಿಕ್ರಾನ್ ಸೋಂಕಿತ ಆನೇಕಲ್ ಭಾಗದ ಜನರಲ್ಲಿ ಆತಂಕಕ್ಕೆ ಕಾರಣನಾಗಿದ್ದಾನೆ. ಸೋಂಕಿತನು ಭೇಟಿ ನೀಡಿದ್ದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಆಡ್ಕಾಕ್ ಇನ್ ಗ್ರಾಮ್ ಕಂಪನಿಯ ಮೂವರು ಉದ್ಯೋಗಿಗಳಿಗೆ ಸೋಂಕು ದೃಢಪಟ್ಟಿದೆ. ಈ ಮೂವರೂ ಆಫ್ರಿಕಾ ಪ್ರಜೆಯೊಟ್ಟಿಗೆ ಬೋರ್ಡ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದವರು ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಹೆಚ್ಚಿದ ಕೇಸ್ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಏರಿಳಿತ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 256 ಸೇರಿದಂತೆ 456 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆರು ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,132ಕ್ಕೆ ತಲುಪಿದೆ.
from India & World News in Kannada | VK Polls https://ift.tt/3Gfz3AR