ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷೀಣಿಸಿದ ರಾಗಿ ಇಳುವರಿ: ಶೇ.40ರಷ್ಟು ಫಸಲು ಭೂಮಿ ಪಾಲು!

ಹೈದರ್‌ಸಾಬ್‌ ಕುಂದಾಣ ಬೆಂಗಳೂರು ಗ್ರಾಮಾಂತರ: ಕಳೆದ ವರ್ಷದಲ್ಲಿ ಫಸಲು ಉತ್ತಮವಾಗಿ ಬಂದಿದ್ದು, ಈ ಬಾರಿಯೂ ಸಹ ರಾಗಿ ಫಸಲು ಉತ್ತಮವಾಗಿ ಬಂದಿತ್ತು. ಆದರೆ, ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ಬಹುತೇಕ ರೈತರು ಬೆಳೆದ ರಾಗಿ ಇಳುವರಿ ಶೇ.60ರಷ್ಟು ಮಾತ್ರ ಕೈಸೇರಿದ್ದು, ಶೇ.40ರಷ್ಟು ರಾಗಿ ಫಸಲು ಭೂಮಿ ಪಾಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ರೈತರು ಸಾಕಷ್ಟು ಇದ್ದು, ತಮ್ಮ ಜಮೀನುಗಳಲ್ಲಿ ನಿರೀಕ್ಷೆಯನ್ನಿಟ್ಟುಕೊಂಡು ರಾಗಿ ಚೆಲ್ಲಲಾಗಿತ್ತು. ಆದರೆ, ಸತತ ಮಳೆಯಿಂದಾಗಿ ಹಾಕಿದ್ದ ರಾಗಿ ಫಸಲು ನೆಲಕಚ್ಚಿದ್ದು, ಉಳಿದ ಅಲ್ಪಸ್ಪಲ್ಪ ರಾಗಿ ಬೆಳೆಯನ್ನು ಕಟಾವು ಮಾಡಿಸಿ, ಕಣ ಮಾಡಿ ರಾಗಿ ಪಡೆದಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಮತ್ತು ಹೈನುಗಾರಿಕೆ ಅವಲಂಬಿತ ರೈತರಿದ್ದು, ಈ ಬಾರಿ ಮಳೆಯ ಅವಾಂತರದಿಂದಾಗಿ ರಾಗಿ ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದು ಎಕರೆ ಪ್ರದೇಶದಲ್ಲಿ ರಾಗಿ ಬೆಳೆದರೆ 20 ಪಲ್ಲವಾದರೂ ಸಿಗುತ್ತಿತ್ತು. ಆದರೆ ಈ ಬಾರಿ ಎಕರೆಗೆ 8-9ಪಲ್ಲ ಮಾತ್ರ ರೈತರ ಕೈ ಸೇರಿದೆ. ಇದರಿಂದಾಗಿ ರೈತರ ಜೇಬಿಗೆ ಕತ್ತರಿ ಬಿದ್ದಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಗ್ರಾಮೀಣ ಭಾಗದ ರೈತರು ಕಣ ಮಾಡುವಲ್ಲಿ ತೊಡಗಿಸಿಕೊಂಡಿದ್ದು, ಕಣದಲ್ಲಿ ರಾಗಿಯನ್ನು ಬೇರ್ಪಡಿಸಲು ಯಂತ್ರಗಳನ್ನು ಬಳಸಿಕೊಂಡು ರಾಗಿ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2021-22ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಶೇ.105 ಗುರಿ ಸಾಧಿಸಿದೆ. ದೇವನಹಳ್ಳಿ ತಾಲೂಕಿನಲ್ಲಿ 10800ಹೆ. ಗುರಿಯ ಪೈಕಿ 10842ಹೆ., ದೊಡ್ಡಬಳ್ಳಾಪುರ ತಾಲೂಕಿನಲ್ಲಿ 13793 ಹೆ. ಪೈಕಿ 16710ಹೆ., ನೆಲಮಂಗಲ ತಾಲೂಕಿನಲ್ಲಿ 16175ಹೆ. ಪೈಕಿ 16086ಹೆ., ಹೊಸಕೋಟೆ ತಾಲೂಕಿನಲ್ಲಿ 9700 ಹೆ. ಪೈಕಿ 9712ಹೆ. ಗುರಿ ಸಾಧಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ 50468 ಹೆ. ಗುರಿಯಲ್ಲಿ 53350ಹೆ. ವಿಸ್ತೀರ್ಣದಲ್ಲಿ ರಾಗಿ ಬೆಳೆಯಲಾಗಿದೆ ಎಂದು ಕೃಷಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಲೂಕುವಾರು- ಶೇಕಡವಾರು ರಾಗಿ ಬೆಳೆ
  • ದೇವನಹಳ್ಳಿ | ಶೇ.98.10
  • ದೊಡ್ಡಬಳ್ಳಾಪುರ | ಶೇ.101.03
  • ಹೊಸಕೋಟೆ | ಶೇ.99.73
  • ನೆಲಮಂಗಲ | ಶೇ.99.25
  • ಒಟ್ಟು | ಶೇ. 99.75
ಒಂದು ಕ್ವಿಂಟಾಲ್‌ ರಾಗಿ ಬೆಳೆಯಬೇಕಾದರೆ 5ಸಾವಿರ ರೂ. ಖರ್ಚು ಬರುತ್ತದೆ. ಕಳೆದ ಬಾರಿ ರಾಗಿ ಇಳುವರಿ ಚೆನ್ನಾಗಿ ಬಂದಿತ್ತು. ಈ ಬಾರಿಯ ಫಸಲು ಉತ್ತಮವಾಗಿ ಬಂದಿದೆ ಆದರೆ ಅರ್ಧಕ್ಕೆ ಅರ್ಧದಷ್ಟು ಕೆಲವು ಕಡೆ ಸಂಪೂರ್ಣವಾಗಿ ಮಳೆಯಿಂದಾಗಿ ನೆಲಕಚ್ಚಿರುವುದರಿಂದ ಸಾಕಷ್ಟು ರಾಗಿ ಬೆಳೆದ ರೈತರಿಗೆ ಸಂಕಷ್ಟ ಮತ್ತು ಆರ್ಥಿಕ ಪೆಟ್ಟು ಬಿದ್ದಿದೆ. ಸರಕಾರ ರೈತರಿಗೆ ಬೆಂಬಲ ಬೆಲೆ ಹೆಚ್ಚಿಸಿದರೆ ಅನುಕೂಲವಾಗುತ್ತದೆ. ಜಯರಾಮ್‌ ಕೃಷಿ ಪಂಡಿತ, ಬೈರದೇನಹಳ್ಳಿ


from India & World News in Kannada | VK Polls https://ift.tt/3dqisOx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...