ದುಬೈ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯು ತಂಡಕ್ಕೆ ಸವಾಲುದಾಯಕವಾಗಿದೆ ಎಂದು ಎಸ್ಆರ್ಎಚ್ ನಾಯಕ ಪ್ರಸಕ್ತ ಋತುವಿನಲ್ಲಿ 7ನೇ ಸೋಲು ಅನುಭವಿಸಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 134 ರನ್ಗಳಿಗೆ ಸೀಮಿತವಾಯಿತು. ಬಳಿಕ ಸುಲಭ ಗುರಿ ಹಿಂಬಾಲಿಸಿದ ತಂಡ 17.5 ಓವರ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಸುಲಭವಾಗಿ ಗೆಲುವು ಪಡೆಯಿತು. ಆ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಮರಳಿತು. ಆದರೆ, ಸೋಲಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿತು. ಟಾಸ್ ಗೆದ್ದ ಹೊರತಾಗಿಯೂ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಲಭ್ಯವಾಗಿರಲಿಲ್ಲ ಹಾಗೂ ನಮಗೆ 25 ರಿಂದ 30 ರನ್ ಕಡಿಮೆಯಾಗಿದೆ ಎಂದು ಕೇನ್ ವಿಲಿಯಮ್ಸನ್ ತಿಳಿಸಿದರು. 13 ಓವರ್ಗಳಿಗೆ ಕೇವಲ 74 ರನ್ ಗಳಿಸಿದ್ದ ಹೈದರಾಬಾದ್, ತನ್ನ ಪಾಲಿನ 20 ಓವರ್ಗಳ ಮುಕ್ತಾಯಕ್ಕೆ 134 ಗೌರವಯುತ ಮೊತ್ತವನ್ನು ಕಲೆ ಹಾಕಿತ್ತು. ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಕೇನ್, "ನಾವು ಉತ್ತಮ ಆರಂಭ ಕಂಡಿಲ್ಲ ಹಾಗೂ ನಮ್ಮಿಂದ ಯೋಗ್ಯ ಜೊತೆಯಾಟ ಕೂಡ ಮೂಡಿ ಬಂದಿಲ್ಲ. ಆದರೆ, ಕೊನೆಯ ಹಂತದಲ್ಲಿ ನೀಡಿದ ಹೋರಾಟ ಸ್ವಲ್ಪ ಸಮಾಧಾನ ತಂದಿದೆ. ಆದರೆ, ತಂಡದ ಮೊತ್ತದಲ್ಲಿ 25 ರಿಂದ 30 ರನ್ ಕಡಿಮೆ ಇದೆ. ಅಂದಹಾಗೆ ನಾವು ಉತ್ತಮ ಬೌಲ್ ಮಾಡಿದ್ದೇವೆ ಹಾಗೂ ಈ ಹಿಂದೆಯೂ ಇಷ್ಟೇ ಮೊತ್ತಕ್ಕೆ ಎದುರಾಳಿ ತಂಡಗಳನ್ನು ನಿಯಂತ್ರಿಸಿದ್ದೆವು. ಆದರೆ, ಇಂದಿನ ದಿನ ನಮ್ಮದಾಗಿರಲಿಲ್ಲ ಅಷ್ಟೆ. ಇದು ಸ್ವಲ್ಪ ನಾಚಿಕೆಗೇಡಿನ ಸಂಗತಿ," ಎಂದು ಹೇಳಿದ್ದಾರೆ. "ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ನಮಗೆ ಕಠಿಣ ಸವಾಲು ಎದುರಾಗಿದೆ. ಆದರೆ, ನಾವು ಕ್ರಿಕೆಟ್ ಅನ್ನು ಆನಂದಿಸಬೇಕಾಗಿದೆ ಹಾಗೂ ತೀವ್ರ ಒತ್ತಡಕ್ಕೆ ಒಳಗಾಗುವುದನ್ನು ನಾವು ತಡೆಯಬೇಕು. ನಾವು ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಯಾವುದೇ ತಂಡದ ವಿರುದ್ಧ ಬೇಕಾದರೂ ಗೆಲುವು ಪಡೆಯಬಹುದು," ಎಂದು ಸನ್ರೈಸರ್ಸ್ ಹೈದರಾಬಾದ್ ನಾಯಕ ತಿಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅತ್ಯುತ್ತಮ ಬೌಲ್ ಮಾಡಿದ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಹಾಗೂ ಎನ್ರಿಕ್ ನೊರ್ಕಿಯ ಅವರನ್ನು ಇದೇ ವೇಳೆ ಸನ್ರೈಸರ್ಸ್ ಹೈದರಾಬಾದ್ ನಾಯಕ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. "ಈ ಇಬ್ಬರೂ ಬೌಲರ್ಗಳು ಅದ್ಭುತ ಬೌಲ್ ಮಾಡಿದ್ದಾರೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇವರು ಗುಣಮಟ್ಟದ ಬೌಲರ್ಗಳು. ಇಬ್ಬರು ಶ್ರೇಷ್ಠ ವೇಗಿಗಳು ಜೊತೆಯಲ್ಲಿ ಕಣಕ್ಕೆ ಇಳಿದಾಗ ಎದುರಾಳಿ ತಂಡಕ್ಕೆ ಒತ್ತಡ ಹೇರುವುದಲ್ಲಿ ಯಾವುದೇ ಅನುಮಾನವಿಲ್ಲ," ಎಂದು ಕೇನ್ ವಿಲಿಯಮ್ಸನ್ ತಿಳಿಸಿದರು. "ನಮ್ಮನ್ನು ರಬಾಡ ಹಾಗೂ ನೊರ್ಕಿಯ ಕಠಿಣ ಸನ್ನಿವೇಶಕ್ಕೆ ನೂಕಿದರು. ಒಂದು ವೇಳೆ ನಾವು ಆರಂಭದಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳದೆ ಹೋಗಿದ್ದರೆ ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಸ್ಮಾರ್ಟ್ ಕ್ರಿಕೆಟ್ ಆಡಿದೆ. ಮುಂದಿನ ಪಂದ್ಯಗಳಲ್ಲಿ ನಮ್ಮ ಹಾದಿಯನ್ನು ನಾವು ಸರಿ ಮಾಡಿಕೊಳ್ಳಬೇಕು," ಎಂದು ಎಸ್ಆರ್ಎಚ್ ಕ್ಯಾಪ್ಟನ್ ಹೇಳಿದ್ದಾರೆ. ಇಲ್ಲಿಯವರೆಗೂ ಆಡಿರುವ 8 ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ ಮಾತ್ರ. ಇನ್ನು ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನುಳಿದ ಎಲ್ಲಾ 6 ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಗೆಲುವು ಪಡೆಯಬೇಕಾದ ಒತ್ತಡಕ್ಕೆ ಸಿಲುಕಿದೆ. ಅದರಲ್ಲೂ ಆರೂ ಪಂದ್ಯಗಳು ಗೆದ್ದರೂ ಕೂಡ ಪ್ಲೇಆಫ್ಸ್ ತಲುಪುವುದು ಅನುಮಾನ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lNbg2N