ಬೆಂಗಳೂರು: ತನಗೇ ಸವಾಲು ಹಾಕಿದ ವಕೀಲರೊಬ್ಬರಿಗೆ ಹೈ ಕೋರ್ಟ್ ₹ 50,000 ದಂಡ ವಿಧಿಸಿರುವ ಅಪರೂಪದ ಘಟನೆ ನಡೆದಿದೆ. ವಕೀಲ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ ಹೈ ಕೋರ್ಟ್ ಈ ದಂಡ ವಿಧಿಸಿದೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ನೆಲಮಂಗಲದಿಂದ ತುಮಕೂರು ನಡುವಿನ 32 ಕಿ.ಮಿ ಉದ್ದದ ರಸ್ತೆಯಲ್ಲಿ ಬೀದಿ ದೀಪಪಗಳನ್ನು ಅಳವಡಿಸಿಲ್ಲ ಎಂದು ಆಕ್ಷೇಪಿಸಿ ವಕೀಲ ರಮೇಶ್ ಎಲ್ ನಾಯ್ಕ್ ಎಂಬವರು ಹೈ ಕೋರ್ಟ್ನಲ್ಲಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಸಿ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿಯನ್ನು ಅಮಾನ್ಯಗೊಳಿಸಿ ಐವತ್ತು ಸಾವಿರ ದಂದ ವಿಧಿಸಿದೆ. ಘಟನೆಯ ಹಿನ್ನೆಲೆ ನೆಲಮಂಗಲದಿಂದ ತುಮಕೂರು ನಡುವಿನ 32 ಕಿ.ಮಿ ಉದ್ದದ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ಹೈ ಕೋರ್ಟ್ ಮುಂದೆ ವಕೀಲರು ವಾದ ಮಂಡಿಸಿದ್ದರು. ಈ ವಾದವನ್ನು ಪ್ರಶ್ನೆ ಮಾಡಿದ್ದ ಹೈ ಕೋರ್ಟ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ಯಾವ ಕಾನೂನು ಹೇಳುತ್ತದೆ ಎಂದು ಕೇಳಿತ್ತು. ಇದಕ್ಕೆ ಉತ್ತರಿಸಿದ ರಮೇಶ್ ನಾಯ್ಕ್, 'ಈ ರಾಷ್ಟ್ರೀಯ ಹೆದ್ದಾರಿಯನ್ನು 18 ವರ್ಷಗಳ ಕಾಲ ನಿರ್ವಹಿಸಲು ಜೆಎಸ್ಎಸ್ ಟೋಲ್ ಕಂಪನಿ ಲಿಮಿಟೆಡ್ಗೆ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆ ಒಪ್ಪಂದದಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ಹೇಳಲಾಗಿದೆ. ಆದರೇ, ಈ ಒಪ್ಪಂದದ ಪ್ರತಿಯನ್ನು ನಮಗೆ ನೀಡುತ್ತಿಲ್ಲ. ಅವಕಾಶ ನೀಡಿದರೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಎಂದು ತಿಳಿಸಿದರು. ಈ ವೇಳೆ ಅರ್ಜಿಯ ಅಂಶಗಳನ್ನು ಪರಿಶೀಲನೆ ನಡೆಸಿದ ನ್ಯಾಯಪೀಠ, ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಯಾವ ನಿಯಮದಲ್ಲಿದೆ ಎಂದು ಹೇಳಲು ಹಾಗೂ ಆ ಬಗ್ಗೆ ಸಾಕ್ಷ್ಯಾಧಾರಗಳನ್ನು ಒದಗಿಸಲು ಅರ್ಜಿದಾರರು ವಿಫಲರಾಗಿದ್ದಾರೆ. ಹೆದ್ದಾರಿಯಲ್ಲಿ ಬೀದಿ ದೀಪಗಗಳನ್ನು ಅಳವಡಿಸುವುದು ಕಡ್ಡಾಯ ಎಂದು ಯಾವುದೇ ನಿಯಮಗಳು ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ವಕೀಲರು ಹೇಳಿದ್ದಾರೆ ಎಂದು ನುಡಿಯಿತು. ಅಲ್ಲದೇ, ಅರ್ಜಿದಾರರು ಈ ರಸ್ತೆಯಲ್ಲಿ ಟೋಲ್ ಪಾವತಿಯಿಂದ ವಿನಾಯಿತಿ ನೀಡುವಂತೆ ಖುದ್ದು ಟೋಲ್ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ₹ 20 ಟೋಲ್ ಕಟ್ಟುವ ವಿಚಾರದಲ್ಲಿ ಗಲಾಟೆ ಮಾಡಿ ಟೋಲ್ ಬೂತ್ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ಕೂಡ ನೀಡಿದ್ದಾರೆ. ಈ ಕುರಿತು ಎಫ್ಐಆರ್ ಕೂಡ ದಾಖಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಈ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಿದ್ದಾಗಿ ಕಂಡು ಬರುತ್ತಿಲ್ಲ. ದ್ವೇಷದಿಂದ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಕಂಡು ಬರುತ್ತದೆ. ಇದು ಕಾನೂನಿನ ದುರ್ಬಳಕೆ ಎಂದು ಆರ್ಜಿಯನ್ನು ವಜಾಗೊಳಿಸಿ, ಅರ್ಜಿದಾರರಿಗೆ ₹ 25,000 ದಂಡ ವಿಧಿಸಿತ್ತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ರಮೇಶ್ ನಾಯಕ್, ಸ್ವ-ಹಿತಾಸಕ್ತಿಯಿಂದ ತಾನು ಅರ್ಜಿ ಸಲ್ಲಿಸಿಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದಲೇ ಈ ಅರ್ಜಿ ಸಲ್ಲಿಸಿದ್ದೇನೆ. ಅಗತ್ಯ ಬಿದ್ದರೆ ಈ ಬಗ್ಗೆ ತನಿಖೆ ಮಾಡಬಹುದು. ಸ್ವ-ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸುವುದು ಸಾಬೀತಾದರೆ ₹ 50,000 ದಂಡ ಪಾವತಿಸಲಾಗುತ್ತದೆ ಎಂದು ಹೇಳಿದ್ದರು. ಇದಾದ ಬಳಿಕ ನ್ಯಾಯಪೀಠ, ಅರ್ಜಿದಾರರೇ ₹ 50,000 ದಂಡ ಪಾವತಿ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ದಂಡದ ಮೊತ್ತವನ್ನು ₹ 25,000 ದಿಂದ ₹ 50,000 ಹೆಚ್ಚಿಸಲಾಗುತ್ತದೆ ಎಂದು ತೀರ್ಪು ನೀಡಿದೆ. ಅಲ್ಲದೇ ಈ ದಂಡದ ಮೊತ್ತವನ್ನು 30 ದಿನದ ಒಳಗಾಗಿ ಕರ್ನಾಟಕ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಪಾವತಿ ಮಾಡುವಂತೆ ಸೂಚನೆ ನೀಡಿತು.
from India & World News in Kannada | VK Polls https://ift.tt/39sMNtV