ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದಿದ್ದ ಕೃಷಿ ಸಚಿವ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ವಿಪಕ್ಷ ನಾಯಕ ಬಿಸಿ ಪಾಟೀಲ್ ನೀಡಿರುವ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವಿನಾಶಕಾರಿ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಆತ್ಮಹತ್ಯೆಗೆ ದೂಡಲು ಹೊರಟಿರುವವರು ಯಾರು? ನ್ಯಾಯಕ್ಕಾಗಿ ಹೋರಾಡುತ್ತಿರುವ ಸ್ವಾಭಿಮಾನಿ ರೈತರ ಮೇಲೆ ಲಾಠಿಯೇಟು, ಅಶ್ರುವಾಯು, ಜಲಫಿರಂಗಿಗಳ ಮೂಲಕ ದೌರ್ಜನ್ಯವೆಸಗುತ್ತಿರುವ ಕೊಲೆಗಡುಕ ಮನಸ್ಸು ಯಾರದು ಬಿ.ಸಿ ಪಾಟೀಲ್? ಎಂದು ಪ್ರಶ್ನಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ಬಿಸಿ ಪಾಟೀಲ್ರನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಮಳೆ ಮತ್ತು ಪ್ರವಾಹದಿಂದ ಸರ್ವಸ್ವವನ್ನು ಕಳೆದುಕೊಂಡು ಬೀದಿಪಾಲಾಗಿರುವ ರೈತರಿಗೆ ಪರಿಹಾರ ಕೊಟ್ಟು ನೆರವಾಗುವ ಯೋಗ್ಯತೆ ನಿಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಇಲ್ಲ. ಗಾಯದ ಮೇಲೆ ಬರ ಎಳೆದಂತೆ ಅದೇ ರೈತರನ್ನು ಹೇಡಿಗಳೆಂದು ಜರಿಯುತ್ತೀರಾ? ಹೊಟ್ಟೆಗೆ ಏನು ತಿನ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳಲ್ಲ ಬಿ.ಸಿ.ಪಾಟೀಲ್ ಅವರೇ, ಹಣ-ಅಧಿಕಾರಕ್ಕಾಗಿ ಆತ್ಮವನ್ನು ಮಾರಿಕೊಂಡವರು ಹೇಡಿಗಳು. ಅನ್ನ ಕೊಡುವ ರೈತರನ್ನು ನಿಂದಿಸಿ ಉಂಡಮನೆಗೆ ದ್ರೋಹ ಬಗೆಯುವ ನಿಮಗೆ ಒಂದು ಕ್ಷಣವೂ ಕೃಷಿಖಾತೆಯಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.
from India & World News in Kannada | VK Polls https://ift.tt/2JsBSHg