ಮಲ್ಪೆ: ಮಲ್ಪೆಯ ಪಡುಕರೆಯಲ್ಲಿ ಅಂತಾರಾಷ್ಟ್ರೀಯ ಹಡಗುಗಳಿಗೆ ನಿಲುಗಡೆ ಒದಗಿಸುವ ನಿರ್ಮಾಣದ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಗೆ 1 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾಡಳಿತ, ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆ ಸೀವಾಕ್ ಬಳಿಯ ಬಯಲು ರಂಗಮಂದಿರ ಹಾಗೂ ಉದ್ಯಾನವನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಮರೀನಾ ಡ್ರೈವ್ ನಿರ್ಮಾಣಕ್ಕೆ ಕೇಂದ್ರದ ಅನುದಾನ ಪಡೆಯುವ ಅವಕಾಶವಿದ್ದು, ವಾಣಿಜ್ಯ ಚಟುವಟಿಕೆಯಿಂದ 2ರಿಂದ 4 ಸಾವಿರ ಕೋಟಿ ರೂ. ವ್ಯವಹಾರ ಗಳಿಸಲು ಸಾಧ್ಯ. 500 ಮೀ. ವ್ಯಾಪ್ತಿಯಲ್ಲಿರುವ ಸಿಆರ್ಝೆಡ್ ಕಾಯಿದೆಗೆ ಗೋವಾ ಮಾದರಿಯಲ್ಲಿ ರಿಯಾಯಿತಿಯ ತಿದ್ದುಪಡಿ ಕರ್ನಾಟಕಕ್ಕೂ ಅನ್ವಯಿಸುವಂತೆ ಕೇಂದ್ರಕ್ಕೆ ಒತ್ತಡ ಹೇರಲಾಗುವುದು ಎಂದರು. ಬಂದರು, ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಉಡುಪಿಯಿಂದ ಮಲ್ಪೆಯನ್ನು ಸುಲಭವಾಗಿ ಸಂಪರ್ಕಿಸಲು 91 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ ಶೀಘ್ರ ಜಾರಿಗೆ ಬರಲಿದೆ. ಕಾರ್ಯಪಡೆ ಸಕ್ರಿಯಗೊಳಿಸಿ, ಪ್ರವಾಸೋದ್ಯಮಕ್ಕೊಂದು ಲಾಂಛನ ಸಿದ್ಧಪಡಿಸಿ, ಪ್ರವಾಸೋದ್ಯಮ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿದರೆ ಹಂತಹಂತವಾಗಿ ಅನುದಾನ ಒದಗಿಸಲು ನೆರವಾಗುವೆ ಎಂದರು. ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಟೆಂಪಲ್ ಟೂರಿಸಂ ಹಾಗೂ ಕೋಸ್ಟಲ್ ಟೂರಿಸಂಗೆ ವಿಪುಲ ಅವಕಾಶವಿದ್ದು, ಪಡುಕರೆಗೆ ಮಲ್ಪೆಯಿಂದ ಸಂಪರ್ಕ ಕಲ್ಪಿಸಲು ರೋಪ್ವೇ ಇಲ್ಲವೇ ಕೇಬಲ್ ಕಾರ್ ವ್ಯವಸ್ಥೆಯಾಗಬೇಕು. ನದಿ ದಂಡೆ ಸಂರಕ್ಷಣೆ 20 ಕೋಟಿ ರೂ. ವೆಚ್ಚದಲ್ಲಾಗುತ್ತಿದ್ದು, 30 ಅಡಿ ಅಗಲದ 5 ಕಿ.ಮೀ. ಉದ್ದದ ವಾಕಿಂಗ್, ಸೈಕಲ್ ಟ್ರ್ಯಾಕ್ ನಿರ್ಮಾಣದಿಂದ ನದಿ ಮತ್ತು ಕಡಲ ಸೌಂದರ್ಯ ಆಸ್ವಾದಿಸಬಹುದು ಎಂದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೇ ಮಂಜುನಾಥ್, ದ.ಕ. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿಪಂ ಸಿಇಒ ಡಾ. ನವೀನ್ ಭಟ್ ವೈ., ನಗರಸಭೆ ಸದಸ್ಯೆ ಎಡ್ಲಿನ್ ಕರ್ಕಡ, ಎಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಾಸ್ತಾವಿಕ ಮಾತನಾಡಿದರು. ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಐರಾ ಆಚಾರ್ಯ ಕನಕ ಸಂಕೀರ್ತನೆ ಹಾಡಿದರು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ವಂದಿಸಿದರು.
from India & World News in Kannada | VK Polls https://ift.tt/3qtTByH