ಸುನಿಲ್ ಪೊನ್ನೇಟಿ ಮಡಿಕೇರಿ ಕೊಡಗು: ಕನ್ನಡದ ಉಪಭಾಷೆಗಳಲ್ಲಿ ಒಂದಾಗಿರುವ ಅರೆಭಾಷೆಯ 'ಸಾಹೇಬ್ರು ಬಂದವೇ' ನಾಟಕ ಪ್ರದರ್ಶನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಇದಕ್ಕಾಗಿ ಶುಕ್ರವಾರ (ಡಿ.4) ಮತ್ತು ಭಾನುವಾರ (ಡಿ.6)ಕ್ಕೆ ಸುಳ್ಯದ ರಂಗಮನೆಯಲ್ಲಿ ವೇದಿಕೆ ಸಿದ್ಧವಾಗಿದೆ. ಮಾ.14ಕ್ಕೆ ರಂಗದ ಮೇಲೆ ಬರಬೇಕಿದ್ದ ಈ ಬಹುನಿರೀಕ್ಷಿತ ನಾಟಕ ಕೊರೊನಾ ಲಾಕ್ಡೌನ್ ಕಾರಣದಿಂದ ಮುಂದಕ್ಕೆ ಹೋಗಿತ್ತು. ಅರೆಭಾಷೆಯಲ್ಲಿ ನಾಟಕ ಹೊಸದಲ್ಲ. ಈಗಾಗಲೇ ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಆಧರಿತ ಕರ್ವಾಲೋ ನಾಟಕವನ್ನು ಯಶಸ್ವಿಯಾಗಿ ಅರೆಭಾಷೆಯಲ್ಲಿ ರಂಗದ ಮೇಲೆ ತರಲಾಗಿದೆ. ಆದರೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 40 ದಿನಗಳ ಕಾಲ ಊಟ, ವಸತಿ ಸಹಿತ ವ್ಯವಸ್ಥೆ ಮಾಡಿಕೊಂಡು, ಬೆಳಗ್ಗೆ 8ರಿಂದ ರಾತ್ರಿ 8 ಗಂಟೆ ತನಕ ರಂಗಭೂಮಿಯ ವ್ಯಾಕರಣಗಳನ್ನು ಹೇಳಿಕೊಟ್ಟು, ಪೂರ್ಣ ಪ್ರಮಾಣದ ಪ್ರಸಿದ್ಧ ನಾಟಕವೊಂದನ್ನು ಮೂಲತಃ ಅರೆಭಾಷೆಯವರಲ್ಲದವರಿಗೂ ಕಲಿಸಿ, ಅರೆಭಾಷಿಕ ಪ್ರದೇಶದ ಆಚೆಗೂ ಅರೆಭಾಷೆಯ ನಾಟಕ ಪ್ರದರ್ಶನಕ್ಕೆ ಮುಂದಾಗಿರುವುದು ಇದೇ ಪ್ರಥಮ. ರಷ್ಯಾದ ಪ್ರಸಿದ್ಧ ನಾಟಕಕಾರ ನಿಖೋಲಾಯ್ ಗೊಗಲ್ ಅವರ 'ದಿ ಇನ್ಸ್ಪೆಕ್ಟರ್ ಜನರಲ್' ಎನ್ನುವ ನಾಟಕವನ್ನು ಕೆ.ವಿ. ಸುಬ್ಬಣ್ಣ ಮತ್ತು ಕೆ.ವಿ. ಅಕ್ಷರ 'ಸಾಹೇಬರು ಬರುತ್ತಾರೆ' ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದರು. ಇದೇ ನಾಟಕವನ್ನು 'ಸಾಹೇಬ್ರು ಬಂದವೇ' ಹೆಸರಿನಲ್ಲಿ ಜಯಪ್ರಕಾಶ್ ಕುಕ್ಕೇಟಿ ಅರೆಭಾಷೆಗೆ ಅನುವಾದ ಮಾಡಿದ್ದಾರೆ. ಜೀವನ್ರಾಂ ಸುಳ್ಯ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಐದು ದಶಕಗಳ ಹಿಂದಿನ ಕಥಾವಸ್ತುವನ್ನು ಈ ನಾಟಕ ಹೊಂದಿದ್ದರೂ ಪ್ರಸ್ತುತತೆಗೆ ಹೊಂದಿಕೊಳ್ಳುವಂತೆ ನಿರ್ದೇಶನ ಮಾಡಲಾಗಿದೆ. 105 ನಿಮಿಷಗಳ ನಾಟಕದಲ್ಲಿ ಈಗಿನ ರಾಜಕೀಯ, ಸಾಮಾಜಿಕ ವ್ಯವಸ್ಥೆ, ಸಾಮಾಜಿಕ ಜಾಲತಾಣಗಳ ಬಳಕೆಯ ಸ್ವಾರಸ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಕಾಡೆಮಿ ಸಹಕಾರಜೀವನ್ರಾಂ ಸುಳ್ಯ ನಿರ್ದೇಶನದ ನಾಟಕಕ್ಕೆ ಬೆಂಗಳೂರು ರಂಗಮಂಟಪದ ಪ್ರಕಾಶ್ ಪಿ. ಶೆಟ್ಟಿ ರಂಗವಿನ್ಯಾಸ ಮಾಡಿದ್ದು, ಗುರುಮೂರ್ತಿ ವರದಾಮೂಲ ವಸ್ತ್ರ ವಿನ್ಯಾಸ ಪ್ರಸಾಧನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶಿಶಿರ ಕಲ್ಕೂರ ಬೆಳಕು ವಿನ್ಯಾಸ ಹಾಗೂ ಉಡುಪಿಯ ಗೀತಂ ಗಿರೀಶ್ ಸಂಗೀತ ನೀಡಿದ್ದಾರೆ. ಬೆಂಗಳೂರಿನ ನಾಟಕ ಅಕಾಡೆಮಿ ಸಹಕಾರದಲ್ಲಿ ಈ ಪ್ರಯೋಗ ನಡೆಯುತ್ತಿದೆ. 15ಕ್ಕೂ ಹೆಚ್ಚು ಕಲಾವಿದರು ಕಲಾವಿದರಾದ ಹಾರಂಬಿ ಯತೀನ್ ವೆಂಕಪ್ಪ, ವಿನೋದ್ ಮೂಡಗದ್ದೆ, ಪಟ್ಟಮಾಡ ರಾಜ್ ಮುಖೇಶ್, ದೀಪಕ್ ಮಜಿಕೋಡಿ, ಮಮತಾ ಕಲ್ಮಕಾರು, ಸುಜಿತ್ ಕಾಯರಕಟ್ಟೆಮನೆ, ಕುಸುಮಾಧರ ಎ.ಟಿ., ಸುಶ್ಮಿತಾ ಪೊಯ್ಯಮಜಲು, ಶ್ರುತಿ ಮೆದು, ಅಶ್ವಿನ್ ಕೆ.ಎಸ್., ಬಂಗಾರಕೋಡಿ ಯೋಗಿತಾ, ನಿತ್ಯಾನಂದ ಮಳೆಯಾಳ, ಬಂಗಾರಕೋಡಿ ಶಿವಗಣೇಶ್, ಬಂಗಾರಕೋಡಿ ಚೇತಸ್, ಭುವನ್ ಕುಂಬಳಚೇರಿ, ವಿಲಾಸ್ ರಾವ್ ತಾನಾಜಿ, ಅಮೃತ್ ಕುಕ್ಕೇಟಿ ನಾಟಕದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣದಿಂದ ಮುಂದಕ್ಕೆ ಹೋಗಿದ್ದ ನಾಟಕ ಪ್ರದರ್ಶನಕ್ಕೆ ಮತ್ತೆ ವೇದಿಕೆ ಸಿದ್ಧವಾಗಿದೆ. ಆರಂಭದಲ್ಲಿ ಈಗ 2 ಪ್ರದರ್ಶನದ ವ್ಯವಸ್ಥೆ ಆಗಿದೆ. ನಂತರ ರಾಜ್ಯದ ಬೇರೆ ಬೇರೆ ಭಾಗಕ್ಕೂ ಕೊಂಡೊಯ್ಯವ ಯೋಜನೆ ಇದೆ. -ಲಕ್ಷ್ಮೀನಾರಯಣ ಕಜೆಗದ್ದೆ
from India & World News in Kannada | VK Polls https://ift.tt/3lB1IWg