ಬೆಂಗಳೂರು: ಕೊರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದು ಅಗತ್ಯ ಸಾಮಾಗ್ರಿಗಳ ಖರೀದಿಗೆ ಜನರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು ತೆರೆದಿದ್ದು ಖರೀದಿಗೆ ಜನರು ಗುಂಪು ಗುಂಪಾಗಿ ಸೇರುತ್ತಿರುವುದನ್ನು ತಪ್ಪಿಸುವುದು ಪೊಲೀಸರಿಗೂ ತಲೆನೋವಾಗಿದೆ. ಪೊಲೀಸರ ಲಾಠಿ ಏಟು ಭಯದಿಂದ ಕೆಲವು ಜನರು ಹೊರಗಡೆ ಬರಲು ಭಯಪಡುತ್ತಿದ್ದಾರೆ. ಲಾಕ್ ಡೌನ್ 21 ದಿನಗಳ ಕಾಲ ಜಾರಿಯಲ್ಲಿರುವುದರಿಂದ ಜನರ ಸಮಸ್ಯೆಗೂ ಸರ್ಕಾರ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆನ್ಲೈನ್ ಮೂಲಕ ಸಾಮಾಗ್ರಿಗಳನ್ನು ವಿತರಣೆ ಮಾಡುವ ಕಂಪನಿಗಳ ಏಜೆನ್ಸಿಗಳ ಸಭೆಯನ್ನು ಕರೆದಿದ್ದಾರೆ. ಬುಧವಾರ ಸಂಜೆ 7 ಗಂಟೆಗೆ ಸಭೆ ನಡೆಯಲಿದ್ದು ಪ್ರತಿ ಏಜೆನ್ಸಿಗಳ ಓರ್ವ ಪ್ರತಿನಿಧಿ ಸಭೆಯಲ್ಲಿ ಭಾಗಿಯಾಗುವಂತೆ ವಿನಂತಿಸಿದ್ದಾರೆ. ಆನ್ಲೈನ್ ಆಹಾರ ಪೂರೈಕೆ, ದಿನಸಿ, ತರಕಾರಿ, ಮಾಂಸ ಪೂರೈಕೆ ಮಾಡುವ ಕಂಪನಿಗಳ ಜೊತೆಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ ನಡೆಸಲಿದ್ದಾರೆ. ಜನರು ಅಗತ್ಯ ಸಾಮಾಗ್ರಿಗಳ ಖರೀದಿಗೆ ಹೊರಗಡೆ ಬರುವುದನ್ನು ತಪ್ಪಿಸಲು ಆನ್ಲೈನ್ ಖರೀದಿಗೆ ಹೆಚ್ಚಿನ ಒತ್ತು ನೀಡುವುದು ಇದರ ಉದ್ದೇಶವಾಗಿದೆ. ಆದರೆ ಈ ನಿಟ್ಟಿನಲ್ಲಿ ಆನ್ಲೈನ್ ಕಂಪನಿಗಳು ಯಾವ ರೀತಿಯಲ್ಲಿ ಸಹಕಾರ ನೀಡಬೇಕು ಎಂಬ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಣ ಮಾಡುವುದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ. ಕಡ್ಡಾಯವಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚನೆಯನ್ನು ನೀಡಿದೆ. ಹೀಗಿದ್ದರೂ ಜನರು ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಬರಲೇ ಬೇಕಾಗಿದೆ. ಎಲ್ಲಾ ಹೋಟೆಲ್ಗಳುಮುಚ್ಚಿರುವುದರಿಂದ ಆನ್ಲೈನ್ನಲ್ಲಿ ಆಹಾರಗಳನ್ನು ತರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಆನ್ಲೈನ್ ಮಾರಾಟಗಾರರ ಜೊತೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಭೆ ಮಹತ್ವ ಪಡೆದುಕೊಂಡಿದೆ.
from India & World News in Kannada | VK Polls https://ift.tt/2xqKAiU