ಗಣೇಶ್ ತಮ್ಮಡಿಹಳ್ಳಿ ಶಿವಮೊಗ್ಗ: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೈಟ್ ಎ ಮತ್ತು ಬಿ ಗುಂಪಿನ 7ನೇ ಸುತ್ತಿನ ಸೆಣಸಾಟದಲ್ಲಿ ರೈಲ್ವೇಸ್ ತಂಡವನ್ನು 10 ವಿಕೆಟ್ಗಳ ಅಂತರದಿಂದ ಸದೆಬಡಿದಿದ್ದ ತಂಡಕ್ಕೆ ಇದೀಗ 8ನೇ ಸುತ್ತಿನಲ್ಲಿ ಮಧ್ಯಪ್ರದೇಶ ತಂಡದ ಸವಾಲು ಎದುರಾಗಿದೆ. ಶಿವಮೊಗ್ಗದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಹಣಾಹಣಿ ನಡೆಯಲಿದ್ದು, ಮತ್ತೊಂದು ಭರ್ಜರಿ ಗೆಲುವಿನ ಮೂಲಕ ನಾಕೌಟ್ ಹಾದಿ ಸುಗಮವಾಗಿಸಿಕೊಳ್ಳುವ ಕಾತರದಲ್ಲಿದೆ ಕರುನಾಡ ಬಳಗ. 2019-20ನೇ ಸಾಲಿನ ಮೊದಲ ಪಂದ್ಯದಲ್ಲೇ ಬದ್ಧ ಎದುರಾಳಿ ತಮಿಳುನಾಡು ವಿರುದ್ಧ ಗೆಲುವು ಪಡೆದು ಶುಭಾರಂಭ ಮಾಡಿದ್ದ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ, ಬಳಿಕ ಮುಂಬಯಿ ಹಾಗೂ ರೈಲ್ವೇಸ್ ತಂಡಗಳ ವಿರುದಟಛಿವೂ ಭರ್ಜರಿ ಜಯ ಕಂಡಿತ್ತು. ಜತೆಗೆ ಉತ್ತರಪ್ರದೇಶ, ಹಿಮಾಚಲಪ್ರದೇಶ, ಸೌರಾಷ್ಟ್ರ ತಂಡಗಳ ವಿರುದ್ಧ ಡ್ರಾ ಸಾಧಿಸಿತ್ತು. ಆದರೆ, ಮಧ್ಯಪ್ರದೇಶ ತಂಡ ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಒಂದೂ ಗೆಲುವು ಕಂಡಿಲ್ಲ. ಅದು ಸಾಲದೆಂಬಂತೆ, ಈ ಪಂದ್ಯದಲ್ಲಿ ನಾಯಕ ನಮನ್ ಓಜಾ ಅವರ ಅಲಭ್ಯತೆಯೂ ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ರೋಚಕ ಹಣಾಹಣಿಯ ನಿರೀಕ್ಷೆ: ಸದ್ಯಕ್ಕೆ ಎ ಮತ್ತು ಬಿ ಗುಂಪಿನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕ ತಂಡ, 17ನೇ ಸ್ಥಾನದಲ್ಲಿರುವ ಮಧ್ಯಪ್ರದೇಶ ತಂಡವನ್ನು ಭಾರೀ ಅಂತರದಿಂದ ಸೋಲಿಸಿ ನಾಕೌಟ್ ಹಾದಿ ಸುಗಮಗೊಳಿಸಿಕೊಳ್ಳಲು ಸಜ್ಜಾಗಿದೆ. ಇನ್ನೊಂದೆಡೆ, ಶುಭಂ ಶರ್ಮ ಪಡೆ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಕನಸು ಕಾಣತೊಡಗಿದೆ. ಇತ್ತಂಡಗಳ ಅಭ್ಯಾಸ: ಭಾನುವಾರ ಹಾಗೂ ಸೋಮವಾರ ಇತ್ತಂಡಗಳ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡರು. ಶನಿವಾರವೇ ಶಿವಮೊಗ್ಗಕ್ಕೆ ಆಗಮಿಸಿದ್ದ ಮಧ್ಯಪ್ರದೇಶ ತಂಡದ ಆಟಗಾರರು ಭಾನುವಾರ ಬೆಳಗ್ಗೆಯಿಂದ ಕಠಿಣ ಅಭ್ಯಾಸ ನಡೆಸಿದರು. ತಂಡಗಳು ಇಂತಿದೆ: ಕರ್ನಾಟಕ: ಕರುಣ್ ನಾಯರ್ (ನಾಯಕ), ದೇವದತ್ ಪಡಿಕ್ಕಲ್, ಆರ್.ಸಮರ್ಥ್, ರೋಹನ್ ಕದಂ, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಸಮರ್ಥ್ ಶ್ರೀನಿವಾಸ್, ಬಿ.ಆರ್.ಶರತ್, ಮಿಥುನ್, ವಿ.ಕೌಶಿಕ್, ರೋನಿತ್ ಮೋರೆ, ಪ್ರತಿಕ್ ಜೈನ್, ಕೆ.ವಿ.ಸಿದಾಟಛಿರ್ಥ್, ಪ್ರವೀಣ್ ದುಬೆ, ಕೃಷ್ಣಪ್ಪ ಗೌತಮ್. ಮಧ್ಯ ಪ್ರದೇಶ: ಶುಭಂ ಶರ್ಮ (ನಾಯಕ), ಯಶ್ ದುಬೆ, ರಮೀಜ್ ಖಾನ್, ಗೌತಮ್ ರಘುವಂಶಿ, ಅಜಯ್ ರೊಹೆರಾ (ವಿಕೆಟ್ ಕೀಪರ್), ಆನಂದ್ ಸಿಂಗ್ ಬೈಸ್, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ, ಕುಮಾರ್ ಕಾರ್ತಿಕೇಯ ಸಿಂಗ್, ಮಿಹಿರ್ ಹಿರ್ವಾನಿ, ಗೌರವ್ ಯಾದವ್, ರವಿ ಯಾದವ್, ವೆಂಕಟೇಶ್ ಅಯ್ಯರ್, ಕುಲ್ದೀಪ್ ಸೇನ್, ಹಿಮಾಂಶು ಮಂತ್ರಿ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3b5sbqZ