ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಒಂದು ಬಾರಿಯೂ ಔಟಾಗದೆ ಇರುವ ಹೊರತಾಗಿಯೂ ಕರ್ನಾಟಕದ ಅವರನ್ನು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಬಳಗದ ಆಯ್ಕೆಗೆ ಪರಿಗಣಿಸಿರಲಿಲ್ಲ. ಇದರ ವಿರುದ್ದ ಅಭಿಮಾನಿಗಳು ಗರಂ ಆಗಿದ್ದಾರೆ. ನ್ಯೂಜಿಲೆಂಡ್ ನೆಲದಲ್ಲಿ ಭಾರತ ಐತಿಹಾಸಿಕ ಹಾಗೂ ಚೊಚ್ಚಲ ಟಿ20 ಸರಣಿ ಗೆಲುವು ದಾಖಲಿಸಿತ್ತು. ಅಲ್ಲದೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 5-0 ಅಂತರದ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಸರಣಿಯಲ್ಲಿ ನಾಲ್ಕು ಬಾರಿ ಬ್ಯಾಟಿಂಗ್ ಮಾಡಿರುವ ಕನ್ನಡಿಗ ಮನೀಶ್ ಪಾಂಡೆ ಒಂದು ಬಾರಿಯೂ ವಿಕೆಟ್ ಒಪ್ಪಿಸದೇ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಒಂದು ಅರ್ಧಶತಕ ಸೇರಿದಂತೆ ನಾಲ್ಕು ಬಾರಿ ಔಟಾಗದೆ ಇರುವ ಹೊರತಾಗಿಯೂ ಮೊದಲ ಏಕದಿನ ಪಂದ್ಯದಿಂದ ಮನೀಶ್ ಪಾಂಡೆ ಅವರನ್ನು ಕಡೆಗಣಿಸಲಾಗಿದೆ. ಇದು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಮನೀಶ್ ಪಾಂಡೆ ಸ್ಥಾನಕ್ಕೆ ಕೇದಾರ್ ಜಾಧವ್ಗೆ ಸ್ಥಾನ ನೀಡಲಾಗಿದೆ. ಇದಕ್ಕೆ ಕಾರಣ ನೀಡಿರುವ ಕೊಹ್ಲಿ, ಜಾಧವ್ ಅರೆಕಾಲಿಕ ಸ್ಪಿನ್ ಬೌಲಿಂಗ್ ಜವಾಬ್ದಾರಿಯನ್ನು ನಿಭಾಯಿಸಬಹುದಾಗಿದೆ. ಇದರಿಂದಾಗಿ ಮನೀಶ್ ಪಾಂಡೆಗೆ ಹಿನ್ನೆಡೆ ಎದುರಾಗಿದೆ. ಕೆಳ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಅದ್ಭುತ ಪೀಲ್ಡರ್ ಆಗಿರುವ ಹೊರತಾಗಿಯೂ ಮನೀಶ್ ಪಾಂಡೆಗೆ ಅವಕಾಶ ದೊರಕಲಿಲ್ಲ. ಮನೀಶ್ ಪಾಂಡೆ ಅವರನ್ನು ಪ್ರತಿ ಬಾರಿಯೂ ಕಡೆಗಣಿಸಲಾಗುತ್ತಿದೆ ಎಂದು ಅಭಿಮಾನಿಗಳು ದೂರಿದ್ದಾರೆ. ಖಂಡಿತವಾಗಿಯೂ ಮನೀಶ್ ಪಾಂಡೆ ಅವಕಾಶಕ್ಕೆ ಅರ್ಹವಾಗಿದ್ದರು. ಹಣೆ ಬರಹಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಲಾಗಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ಅಜೇಯ ಓಟ ಮುಂದುವರಿಸಿದ್ದ ಮನೀಶ್ ಪಾಂಡೆ ಅನುಕ್ರಮವಾಗಿ 14*, 14*, 50*, 11* ರನ್ ಗಳಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2uaLZJa