ಮುಂಬಯಿ: 51 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದ ಆಜಾದ್ ಮೈದಾನದಲ್ಲಿ ಸಮಾವೇಶಗೊಂಡಿದ್ದ ಪ್ರತಿಭಟನಾಕಾರರು, ಜೆಎನ್ಯು ವಿದ್ಯಾರ್ಥಿ ಪರ ಕೂಗಿದ್ದರು. ಇದೇ ಕಾರಣಕ್ಕಾಗಿ ಪ್ರತಿಭಟನಾಕಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಆಜಾದ್ ಮೈದಾನ ಪೊಲೀಸ್ ಠಾಣೆಯ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ಧಾರೆ. ಸಾವಿರಾರು ಜನ ಭಾಗವಹಿಸಿದ್ದ ಈ ಸಮಾವೇಶದಲ್ಲಿ 51 ಜನರು ಶಾರ್ಜಿಲ್ ಪರ ಘೋಷಣೆ ಕೂಗಿದ್ದರು ಎಂದು ತಿಳಿದುಬಂದಿದೆ. ಹಮ್ಸಫರ್ ಟ್ರಸ್ಟ್ನಿಂದ ಶನಿವಾರ ಸಂಜೆ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮ ಆಯೋಜಕರು, ಪ್ರತಿಭಟನೆ ವೇಳೆ ಶಾರ್ಜಿಲ್ ಪರ ಘೋಷಣೆ ಕೂಗುವವರು ನಮ್ಮೊಂದಿಗೆ ಬಂದು ಸೇರಿಕೊಂಡರು. ಆದ್ರೆ, ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಈ ಸಂಬಂಧ ವಿಡಿಯೋ ಕೂಡಾ ವೈರಲ್ ಆಗಿದ್ದು, ಶಾರ್ಜಿಲ್ ಘೋಷಣೆ ಕೂಗೋದು ಆಡಿಯೋ ಕೂಡಾ ದಾಖಲಾಗಿದೆ. ಶಾರ್ಜಿಲ್ ಪರ ಘೋಷಣೆ ಕೂಗುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತು. ಈ ಸಂಬಂಧ ಹಿರಿಯ ಬಿಜೆಪಿ ನಾಯಕರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರನ್ನೂ ನೀಡಿದ್ದರು. ಮಹಾರಾಷ್ಟ್ರ ಸರ್ಕಾರ ಈ ಪ್ರಕರಣದ ವಿಚಾರದಲ್ಲಿ ಏಕೆ ಮೌನ ತಾಳಿದೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ದೇಶದ್ರೋಹ ಪ್ರಕರಣದ ಅಡಿ ಬಂಧಿತರಾದ 51 ಮಂದಿ ಪ್ರತಿಭಟನಾಕಾರರ ಪೈಕಿ ಯುವತಿಯರೂ ಇದ್ದಾರೆ. ಆದ್ರೆ, ಇವರೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ ಎಂದು ಕಾರ್ಯಕ್ರಮ ಆಯೋಜಕರು ಸ್ಪಷ್ಟವಾಗಿ ಹೇಳಿದ್ದಾರೆ. ಇದೀಗ ಬಂಧಿತರಾಗಿರುವ ಆರೋಪಿಗಳು ತಮ್ಮ ಕೈಯ್ಯಲ್ಲಿ ಶಾರ್ಜಿಲ್ ಇಮಾಮ್ ಭಾವಚಿತ್ರವನ್ನೂ ಪೋಸ್ಟರ್ ರೂಪದಲ್ಲಿ ಹಿಡಿದುಕೊಂಡಿದ್ದರು. ಅದರ ಮೇಲೆ ಘೋಷಣೆಗಳನ್ನೂ ಬರೆಯಲಾಗಿತ್ತು.
from India & World News in Kannada | VK Polls https://ift.tt/2v4bgo8