ಬೆಂಗಳೂರು: ರಾಜ್ಯದಲ್ಲೂ ಜೂಜು ಕೇಂದ್ರಗಳನ್ನು ತೆರೆಯುವ ಕುರಿತಾಗಿ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸುತ್ತಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಪರ ಹಾಗೂ ವಿರೋಧ ಚರ್ಚೆಗಗಳಿಗೆ ಕಾರಣವಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಶ್ರೀಲಂಕಾ ಹಾಗೂ ಅಮೆರಿಕಾ ಮಾದರಿಯಲ್ಲಿ ಕ್ಯಾಸಿನೊಗಳನ್ನು ರಾಜ್ಯದಲ್ಲೂ ತೆರೆಯಲು ಸರ್ಕಾರ ಮುಂದಾಗಿದೆ. ರಾಜ್ಯದ ಹಲವರು ಬೇರೆ ದೇಶಗಳಿಗೆ ಹೋಗಿ ಕ್ಯಾಸಿನೊಗಾಗಿ ದುಡ್ಡು ಸುರಿಸುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೇ ಆರಂಭಿಸಿದರೆ ಪ್ರವಾಸೋದ್ಯ ಮವನ್ನು ವೃದ್ದಿಸಬಹುದು ಎಂಬುವುದು ಸರ್ಕಾರದ ಯೋಚನೆ. ಆದರೆ ಈಗಾಗಲೇ ಇದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಈ ವಿಚಾರವಾಗಿ ಪ್ರತಿಕ್ರಿಯಿಸಿ, "ಮಾರ್ಚ್ 5 ರಂದು ಮಂಡನೆಯಾಗಲಿರುವ ಬಜೆಟ್ ಅಧಿವೇಶನದಲ್ಲಿ ಈ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿವರಣೆ ನೀಡಲಿ ಎಂದಿದ್ದಾರೆ. ಕ್ಯಾಸಿನೋದಿಂದ ಏನು ಒಳ್ಳೆಯದಾಗುತ್ತದೆ ಎಂಬುವುದನ್ನು ತಿಳಿಸಲಿ ಬಳಿಕ ಪ್ರತಿಕ್ರಿಯೆ ನೀಡುವೆ" ಎಂದರು. ಮತ್ತೊಂದೆಡೆ ರಾಜ್ಯದಲ್ಲಿ ಕ್ಯಾಸಿನೊ ಸ್ಥಾಪನೆ ಮಾಡುವ ಚಿಂತನೆಯನ್ನು ಸಚಿವ ಬಿ.ಸಿ ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದು, ಸಿಂಗಾಪುರಕ್ಕೆ ಹೋಗುವ ಆದಾಯ ನಮಗೇ ಬಂದರೆ ತಪ್ಪೇನು ಎಂದು ಪ್ರಶ್ನಿಸಿದರು. ಈ ನಡುವೆ ಪ್ರವಾಸೋದ್ಯಮ ಸಚಿವ ಈ ಕುರಿತಾಗಿ ಸ್ಪಷ್ಟೀಕರಣ ನೀಡಿದ್ದು, "ಎಫ್ಕೆಸಿಸಿಐ ಜೊತೆಗಿನ ಸಂವಾದದ ಸಂದರ್ಭದಲ್ಲಿ ಅನೇಕ ದೇಶಗಳು ಕ್ಯಾಸಿನೋಗಳ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿವೆ ಎಂದು ಉಲ್ಲೇಖಿಸಿದ್ದೆ. ಕ್ಯಾಸಿನೊಗಳಲ್ಲಿ ಆಡಲು ಲಕ್ಷಾಂತರ ಭಾರತೀಯರು ವಿದೇಶಕ್ಕೆ ಹೋಗುತ್ತಾರೆ ಎಂಬವುದು ಸತ್ಯವಲ್ಲವೇ? ಅವರನ್ನು ಯಾರಾದರೂ ತಡೆಯಬಹುದೇ? ಎಂದು ಪ್ರಶ್ನಿಸಿದ್ದಾರೆ. ಹೀಗಿದ್ದರೂ, ಕ್ಯಾಸಿನೋಗಳನ್ನು ಸ್ಥಾಪಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕ್ಯಾಸಿನೊ ಸ್ಥಾಪನೆ ಕುರಿತಾಗಿ ಚರ್ಚೆ ನಡೆಯುತ್ತಿದ್ದು ಹಲವರು ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಸಂಸ್ಕೃತಿ, ಪರಂಪರೆಯ ಬಗ್ಗೆ ಮಾತನಾಡುವ ಸಚಿವ ಸಿ. ಟಿ ರವಿ ಕ್ಯಾಸಿನೊ ಪರವಾಗಿ ನಿಂತಿರುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
from India & World News in Kannada | VK Polls https://ift.tt/39VtNlS