ಗಿರೀಶ್ ಕೋಟೆ ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಅಧಿಕಾರಿಗಳು ಕೆಎಸ್ಸಿಎ ಆಡಳಿತ ಮಂಡಳಿ ಸದಸ್ಯ ಹಾಗೂ ಸೋಷಿಯಲ್ ಕ್ಲಬ್ ಮಾಲೀಕ ಸುಧೀಂದ್ರ ಶಿಂಧೆಯನ್ನು ಬಂಧಿಸಿದ್ದಾರೆ. ಈತನ ಬಂಧನದ ಬೆನ್ನಲ್ಲೇ ಕೆಎಸ್ಸಿಎನ ಇನ್ನಷ್ಟು ಪ್ರಮುಖರು ಸಿಸಿಬಿ ಬಲೆಗೆ ಬೀಳುವುದರ ಜತೆಗೆ ಕ್ರಿಕೆಟ್ ಜಗತ್ತಿನ ಇನ್ನಷ್ಟು ಹನಿಟ್ರ್ಯಾಪ್ ಪ್ರಕರಣಗಳು ಹೊರಗೆ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ತನಿಖೆ ಕುರಿತ ವಿವರಗಳನ್ನು ನೀಡುವ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ರಾವ್ ವಾರದ ಹಿಂದೆ ಹನಿಟ್ರ್ಯಾಪ್ನ ಸುಳಿವು ನೀಡಿದ್ದರು. ಕ್ರಿಕೆಟ್ ಆಟಗಾರರನ್ನು ಹನಿಟ್ರ್ಯಾಪ್ಗೆ ಒಳಪಡಿಸಿ ಬ್ಲ್ಯಾಕ್ಮೇಲ್ ಮೂಲಕ ಮ್ಯಾಚ್ ಫಿಕ್ಸಿಂಗ್ಗೆ ಒಗ್ಗಿಸಿಕೊಳ್ಳಲಾಗುತ್ತಿತ್ತು ಎನ್ನುವ ಸುಳಿವು ಸಿಕ್ಕಿದೆ ಎಂದು ಆಯುಕ್ತರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ನಡುವೆ, ಇದುವರೆಗೂ ಕೆಪಿಎಲ್ ತಂಡಗಳ ಸುತ್ತಲೇ ನಡೆಯುತ್ತಿದ್ದ ತನಿಖೆ, ಇದೀಗ ಕೆಎಸ್ಸಿಎ ಅಂಗಳಕ್ಕೂ ಪ್ರವೇಶಿಸಿರುವುದು ಹಾಗೂ ಪ್ರತಿಷ್ಠಿತ ಸೋಷಿಯಲ್ ಕ್ಲಬ್ನ ಮಾಲೀಕನೇ ಬಂಧನಕ್ಕೆ ಒಳಗಾಗಿರುವುದರಿಂದ ಕ್ರಿಕೆಟ್ ಜಗತ್ತಿನ ಕೆಲವು ಆಘಾತಕಾರಿ ನಿಗೂಢಗಳು ಬಹಿರಂಗಗೊಳ್ಳಲಿವೆ ಎನ್ನಲಾಗುತ್ತಿದೆ. ಅಷ್ಫಕ್ ಅಲಿ ಪ್ರವೇಶ: ದುಬೈ ಜತೆಗೆ ನಂಟು ಹೊಂದಿರುವ ಅಷ್ಫಕ್ ಅಲಿಗೆ ಕ್ರಿಕೆಟ್ ಜಗತ್ತಿಗೆ ಪ್ರವೇಶ ಕೊಡಿಸಿದ್ದು ಹಾಗೂ ಅಲಿ ಕೆಎಸ್ಸಿಎ ಒಳಗೆ ಪ್ರಭಾವ ಹೆಚ್ಚಿಸಿಕೊಳ್ಳಲು ಕೊಂಡಿಯಾಗಿ ಕೆಲಸ ಮಾಡಿದ್ದೇ ಸುಧೀಂದ್ರ ಶಿಂಧೆ ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ. ಇದುವರೆಗೂ ಪ್ರತಿಷ್ಠಿತ ಎನ್ನುವ ಹಣೆಪಟ್ಟಿ ಅಂಟಿಸಿಕೊಂಡೇ ಇರುವ ಸೋಷಿಯಲ್ ಕ್ಲಬ್ನ ಮಾಲೀಕನಾಗಿ ಶಿಂಧೆ ಇದ್ದರೂ ಈ ಕ್ಲಬ್ಗೆ ಬಂಡವಾಳ ಹೂಡಿರುವುದು ಅಲಿ ಎನ್ನಲಾಗುತ್ತಿದೆ. ಕ್ರಿಕೆಟ್ ಜಗತ್ತಿಗೆ ತೀರಾ ಹೊಸಬನಾಗಿದ್ದ ಅಲಿಗೆ, ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಖರೀದಿ ಮಾಡಲು ತೆರೆ ಹಿಂದೆ ಕೆಲಸ ಮಾಡಿದ್ದು ಇದೇ ಶಿಂಧೆ. ಕೆಎಸ್ಸಿಎ ಜತೆಗೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದ ಶಿಂಧೆ, ಈ ಪ್ರಭಾವವನ್ನೇ ಬಳಸಿ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಅಲಿ ಮಾರಾಟ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈಗ ಅಲಿ ಮತ್ತು ಶಿಂಧೆ ಇಬ್ಬರೂ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿಬಂಧನಕ್ಕೆ ಒಳಗಾಗಿದ್ದಾರೆ. ಹೇಗೆ? ಮ್ಯಾಚ್ ಫಿಕ್ಸಿಂಗ್ಗೆ ಒಗ್ಗಿಕೊಳ್ಳುವ ಆಟಗಾರರು ಮತ್ತು ಕೋಚ್ಗಳನ್ನು ಸ್ಟಾರ್ ಹೋಟೆಲ್ಗಳಲ್ಲಿ ಇರಿಸಿ ಅವರ ಖಾಸಗಿ ಅಗತ್ಯಗಳನ್ನೆಲ್ಲಾ ಈಡೇರಿಸುವುದನ್ನು ಮ್ಯಾಚ್ ಫಿಕ್ಸರ್ಗಳು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಸೋಷಿಯಲ್ ಗ್ಯಾದರಿಂಗ್ ಹೆಸರಿನಲ್ಲಿ ಸುಂದರ ಯುವತಿಯರನ್ನು ಕರೆಸಿ ಖಾಸಗಿ ಪಾರ್ಟಿ ನಡೆಸುವುದೂ ನಡೆಯುತ್ತಿದೆ. ಒಮ್ಮೆ ಈ ಯುವತಿಯರಿಗೆ ಜಾರಿದ ಆಟಗಾರರು ಮಾಫಿಯಾದ ಹಿಡಿತಕ್ಕೆ ಒಳಪಡುತ್ತಿದ್ದರು. ಮಧ್ಯದಲ್ಲಿ ಮನಸ್ಸು ಬದಲಾಯಿಸಿ ವಾಪಸ್ ಬರಲೂ ಸಾಧಅಯವಿಲ್ಲ. ಅವರನ್ನು ಹನಿಟ್ರ್ಯಾಪ್ಗೆ ಒಳಪಡಿಸಲಾಗುತ್ತಿತ್ತು ಎನ್ನುವ ಬಗ್ಗೆ ಸಿಸಿಬಿಗೆ ಸುಳಿವು ಸಿಕ್ಕಿದೆ. ಈ ಸುಳಿವಿನ ಆಧಾರದಲ್ಲೇ ಕಮಿಷನರ್ ಭಾಸ್ಕರ್ರಾವ್ ಹನಿಟ್ರ್ಯಾಪ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲೇ ಮಾಹಿತಿ ನೀಡಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2rU5kMU