ಹೊಸದಿಲ್ಲಿ: ಅಮೆರಿಕದ ನಿರ್ಬಂಧಗಳ ಬೆದರಿಕೆಗಳ ನಡುವೆಯೂ ಕ್ಷಿಪಣಿ ವ್ಯವಸ್ಥೆ ಒಪ್ಪಂದಕ್ಕೆ ಅಚಲವಾಗಿ ನಿಂತಿದ್ದನ್ನು ಶ್ಲಾಘಿಸಿದೆ. 21ನೇ ಭಾರತ- ರಷ್ಯಾ ವಾರ್ಷಿಕ ಸಭೆಯಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅಫ್ಘಾನಿಸ್ತಾನ ನೆಲೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಸೇರಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಗುರುತಿಸಿರುವ ಉಗ್ರ ಸಂಘಟನೆಗಳ ಭಯೋತ್ಪಾದನಾ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವ ಬಗ್ಗೆ ಕೂಡ ಪ್ರಧಾನಿ ಮತ್ತು ಅಧ್ಯಕ್ಷ ನಡುವಿನ ಮಾತುಕತೆಯಲ್ಲಿ ಚರ್ಚಿಸಲಾಗಿದೆ. ಭಾರತ ಮತ್ತು ರಷ್ಯಾಗಳು ಸೋಮವಾರ 28 ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಲ್ಲಿ 9 ಒಪ್ಪಂದಗಳು ಎರಡು ಸರ್ಕಾರಗಳಿಗೆ ಸಂಬಂಧಿಸಿದ್ದಾಗಿದ್ದರೆ, ಉಳಿದ ಒಪ್ಪಂದಗಳು ವ್ಯವಹಾರಗಳ ಕುರಿತಾಗಿ ನಡೆದಿವೆ. ವಾಯು ರಕ್ಷಣಾ ವ್ಯವಸ್ಥೆಯ ಪೂರೈಕೆಯನ್ನು ಖಾತರಿಪಡಿಸುವ 'ಕೊಡುಗೆ ಒಪ್ಪಂದ' ಆರಂಭವಾಗಿದ್ದು, ಇದು ಮುಂದೆಯೂ ಮುಂದುವರಿಯಲಿದೆ. ಭಾರತ ಮತ್ತು ರಷ್ಯಾಗಳು ಸ್ವತಂತ್ರ ವಿದೇಶಾಂಗ ನೀತಿಗಳ ಬಗ್ಗೆ ಚರ್ಚಿಸಿದವು. ಆದರೆ ಅಮೆರಿಕದ ಕಾಟ್ಸಾ ನಿರ್ಬಂಧಗಳ ಬಗ್ಗೆ ಚರ್ಚೆ ನಡೆಯಲಿಲ್ಲ. ಮಾತುಕತೆ ಸಂದರ್ಭದಲ್ಲಿ ಭಯೋತ್ಪಾದನಾ ವಿರೋಧಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶೃಂಗ್ಲಾ ತಿಳಿಸಿದ್ದಾರೆ. ಅಫ್ಘಾನಿಸ್ತಾನದಿಂದ ಎದುರಾಗಲಿರುವ ಭಯೋತ್ಪಾದನೆ ಬೆದರಿಕೆ ಕುರಿತು ಎಲ್ಇಟಿಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವ ಮೂಲಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಎಸ್-400 ಒಪ್ಪಂದ ಜಾರಿಯಾಗುತ್ತಿದೆ ಎಂದಿರುವ ರಷ್ಯಾ ವಿದೇಶಾಂಗ ಸಚಿವ ಸರ್ಜೆ ಲವ್ರೊವ್, ಅಮೆರಿಕದ ಬೆದರಿಕೆಗಳಿಗೆ ಮಣಿಯದ ಭಾರತವನ್ನು ಕೊಂಡಾಡಿದ್ದಾರೆ. 'ಈ ಸಹಕಾರವನ್ನು ಕಡೆಗಣಿಸುವಂತೆ ಹಾಗೂ ತನ್ನ ಆದೇಶಗಳನ್ನು ಪಾಲಿಸುವಂತೆ ಮಾಡಲು ಅಮೆರಿಕ ನಡೆಸಿದ ಪ್ರಯತ್ನಗಳನ್ನು ನಾವು ಕಂಡಿದ್ದೇವೆ. ನಮ್ಮ ಭಾರತೀಯ ಸ್ನೇಹಿತರು ತಮ್ಮದು ಸಾರ್ವಭೌಮ ದೇಶ ಮತ್ತು ಯಾರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಬೇಕು, ಈ ವಿಚಾರದಲ್ಲಿ ಹಾಗೂ ಇತರೆ ವಲಯಗಳಲ್ಲಿ ಭಾರತದ ಪಾಲುದಾರರು ಯಾರು ಎಂಬುದನ್ನು ತಾವೇ ನಿರ್ಧರಿಸುವುದಾಗಿ ಸ್ಪಷ್ಟವಾಗಿ ಹಾಗೂ ದೃಢವಾಗಿ ತಿಳಿಸಿದ್ದಾರೆ' ಎಂದು ಹೇಳಿದ್ದಾರೆ. ಇಂಡೋ ಪೆಸಿಫಿಕ್ ಯೋಜನೆ ಹಾಗೂ ಕ್ವಾಡ್ ದೇಶಗಳ ಒಕ್ಕೂಟದ ಕುರಿತಾಗಿ ಭಾರತ ಮತ್ತು ರಷ್ಯಾ ನಡುವೆ ಇರುವ ಭಿನ್ನಾಭಿಪ್ರಾಯ ಮುಂದುವರಿದಿದೆ. ಅದರ ನಡುವೆಯೂ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಎಲ್ಲರನ್ನೂ ಒಳಗೊಂಡ ಹಾಗೂ ಪ್ರತಿನಿಧಿಸುವ ಸರ್ಕಾರ, ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ, ಕೂಡಲೇ ಮಾನವೀಯ ನೆರವು ಒದಗಿಸುವುದು, ಮಹಿಳೆಯರು, ಮಕ್ಕಳು ಹಾಗೂ ಅಲ್ಪಸಂಖ್ಯಾತರ ರಕ್ಷಣೆ ಕುರಿತಾಗಿ ಆದ್ಯತೆ ನೀಡುವ ಸಲುವಾಗಿ ಇಬ್ಬರೂ ನಾಯಕರು ಚರ್ಚೆ ನಡೆಸಿದರು.
from India & World News in Kannada | VK Polls https://ift.tt/3DycqWF