ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯಾಣಿಸುತ್ತಿದ್ದ ವಿಮಾನ ಅರ್ಧ ಗಂಟೆ ಸುತ್ತಾಡಿ ಬಳಿಕ ಸೇಫ್ ಆಗಿ ಲ್ಯಾಂಡ್ ಆದ ಘಟನೆ ಇಂದು ಬೆಳಗ್ಗೆ ನಡೆಯಿತು. ವಿಮಾನ ನಿಲ್ದಾಣದ ಸುತ್ತಮುತ್ತ ದಟ್ಟವಾದ ಮಂಜು ಆವರಿಸಿದ್ದು, ಹೀಗಾಗಿ ಸಿಎಂ ಮತ್ತು ಜೋಶಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಲ್ಯಾಂಡ್ ಆಗಲು ಸಮಸ್ಯೆಯಾಗಿದೆ. ಹೀಗಾಗಿ ವಿಮಾನವನ್ನು ಸುಮಾರು ಅರ್ಧ ಗಂಟೆ ಆಕಾಶದಲ್ಲಿ ಸುತ್ತಾಡಿಸಿದ ಪೈಲಟ್ ಕೊನೆಗೂ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಮೂಲಕ ಎಲ್ಲರೂ ನಿಟ್ಟುಸಿರುಬಿಟ್ಟರು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ದಟ್ಟ ಮಂಜು ಅವರಿಸಿದ ಹಿನ್ನೆಲೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಆಗಲು ಸಮಸ್ಯೆಯಾಯಿತು. ಬೆಳಗ್ಗೆ 7.30ಕ್ಕೆ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನ ಅಕಾಶದಲ್ಲೇ 3 ಸುತ್ತುಗಳನ್ನ ಸುತ್ತಿ ಕೆಳಗೆ ಇಳಿಯಿತು. ಬೆಂಗಳೂರಿನಿಂದ 6E7227 ಇಂಡಿಗೋ ವಿಮಾನ ಆಗಮಿಸಿತ್ತು. ಲ್ಯಾಂಡಿಂಗ್ ಆಗಲು ಅವಕಾಶ ಸಿಗದಿದ್ದರೆ ನೇರವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಆದರೆ ಸ್ವಲ್ಪ ಹೊತ್ತಿನ ಬಳಿಕ ಕ್ಲಿಯರೆನ್ಸ್ ಸಿಕ್ಕ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಬಳಿಕ ವಿಮಾನ ತಡವಾಗಿ ಲ್ಯಾಂಡಿಂಗ್ ಆದ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಕೂಲ ಹವಾಮಾನ ಹಿನ್ನೆಲೆ ವಿಮಾನ ಲ್ಯಾಂಡಿಂಗ್ ಆಗೋದು ತಡವಾಯಿತು. ಇವತ್ತು ಪರಿಷತ್ ಚುನಾವಣೆ ಇರೋದ್ರಿಂದ ಮತಹಾಕಲು ಶಿಗ್ಗಾಂವಿಗೆ ತೆರಳುತ್ತಿದ್ದೇನೆ ಎಂದರು. ಸುದ್ದಿಗಾರರ ಪ್ರಶ್ನೆಗೆಳಿಗೆ ಉತ್ತರಿಸಿದ ಅವರು, ಕ್ರಿಸಮಸ್ ಹಾಗೂ ಹೊಸ ವರ್ಷಾಚರಣೆಗೆ ಇನ್ನು ನಿರ್ಭಂಧದ ಬಗ್ಗೆ ಸದ್ಯಕ್ಕೆ ತೀರ್ಮಾನ ಮಾಡಿಲ್ಲ ಎಂದರು. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಪ್ರಶ್ನೆಗೆ ಉತ್ತರಿಸಿ, ಚಳಿಗಾಲದ ಅಧಿವೇಶನದದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆಗೇ ಆಗುತ್ತೆ. ಬೆಳಗಾವಿ ಅಧಿವೇಶನ ಅಂದ್ರೆ ಈ ಭಾಗದ ಸಮಸ್ಯೆ ನೀರಾವರಿ ಯೋಜನೆಗಳ ಚರ್ಚೆ ಆಗುತ್ತೆ ಎಂದರು. ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ ಎಂದ ಸಿಎಂ, ಮಹದಾಯಿ ಕಾಮಗಾರಿ ಆರಂಭಿಸಲು ಏನೂ ಮಾಡಬೇಕು ಅದನ್ನ ಮಾಡುತ್ತೇವೆ ಎಂದರು. ಬೆಳೆ ಹಾನಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಪರಿಹಾರ ವಿತರಣೆ ಆರಂಭವಾಗಿದೆ. ಪರಿಹಾರ ಅನ್ನೋ ಆ್ಯಪ್ ಮೂಲಕ ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ ಎಂದರು.
from India & World News in Kannada | VK Polls https://ift.tt/31LUB9m