'ಮುಂಬೈ ತಂಡದ ನಂಟು ಮುಗಿದಿದೆ', ಭಾವನಾತ್ಮಕ ಸಂದೇಶ ಬರೆದ ಪಾಂಡ್ಯ!

ಬೆಂಗಳೂರು: ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡದಿಂದ ಬಿಡುಗಡೆಯಾಗಿರುವ ಸ್ಟಾರ್‌ ಆಲ್‌ರೌಂಡರ್‌ ಭಾವನಾತ್ಮಕ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮುಂಬೈ ತಂಡಕ್ಕೆ ತಮ್ಮ ಕಮ್‌ಬ್ಯಾಕ್‌ ಇಲ್ಲವೆಂದು ಪರೋಕ್ಷವಾಗಿ ಸುಳಿವುಕೊಟ್ಟಿದ್ದು, ಮಾಜಿ ಚಾಂಪಿಯನ್ಸ್‌ ಜೊತೆಗಿನ ನಂಟು ಮುಗಿದೆ ಎಂದಿದ್ದಾರೆ. ಹದಿನೈದನೇ ಆವೃತ್ತಿಯ ಟೂರ್ನಿಯಲ್ಲಿ ಎರಡು ಹೊಸ ತಂಡಗಳು ಕಣಕ್ಕಿಳಿಯಲಿವೆ. ಈ ಸಲುವಾಗಿ ಬಿಸಿಸಿಐ ದೊಡ್ಡ ಮಟ್ಟದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಯೋಜನೆ ರೂಪಿಸಿದ್ದು, ಹಾಲಿ 8 ತಂಡಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ಬಿಟ್ಟುಕೊಡುವಂತೆ ನವೆಂಬರ್‌ 30ರ ಗಡುವು ನೀಡಿತ್ತು. ಅದರಂತೆಯೇ ಎಲ್ಲಾ ತಂಡಗಳು ತಮ್ಮ ಅಂತಿಮ ಪಟ್ಟಿ ಪ್ರಕಟ ಮಾಡಿವೆ. ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ (16 ಕೋಟಿ ರೂ.), ಜಸ್‌ಪ್ರೀತ್‌ ಬುಮ್ರಾ (12 ಕೋಟಿ ರೂ.), ಸೂರ್ಯಕುಮಾರ್‌ ಯಾದವ್ (8 ಕೋಟಿ ರೂ.) ಮತ್ತು ಕೈರೊನ್ ಪೊಲಾರ್ಡ್‌ (6 ಕೋಟಿ ರೂ.) ಅವರನ್ನು ಉಳಿಸಿಕೊಂಡಿದೆ. ಈ ಮೂಲಕ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಆಟಗಾರರಾದ ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ಹಾರ್ದಿಕ್‌ ಪಾಂಡ್ಯ ಮತ್ತು ಟ್ರೆಂಟ್‌ ಬೌಲ್ಟ್‌ ಅವರಂತಹ ಸ್ಟಾರ್‌ಗಳನ್ನು ಅನಿವಾರ್ಯವಾಗಿ ಹರಾಜಿಗೆ ಬಿಟ್ಟುಕೊಡುವಂತ್ತಾಗಿದೆ. ಮೆಗಾ ಆಕ್ಷನ್‌ಗೂ ಮೊದಲೇ ಹಾರ್ದಿಕ್‌ ಹೊಸ ತಂಡಕ್ಕೆ? ಈ ನಡುವೆ ನೂತನ ಫ್ರಾಂಚೈಸಿಗಳಾದ ಅಹ್ಮದಾಬಾದ್‌ ಮತ್ತು ಲಖನೌ ಮೂಲದ ತಂಡಗಳು ಹರಾಜಿಗೆ ಬಿಡುಗಡೆ ಆಗಿರುವ ಆಟಗಾರರ ಪೈಕಿ ಗರಿಷ್ಠ ಮೂವರ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಬಿಸಿಸಿಐ ಡಿಸೆಂಬರ್‌ 25ರವರೆಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೆಗಾ ಆಕ್ಷನ್‌ಗೂ ಮೊದಲೇ ಹಾರ್ದಿಕ್‌ ಹೊಸ ತಂಡದ ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆ ಮೂಲಕ ಈ ಬಗ್ಗೆ ಪರೋಕ್ಷವಾಗಿ ಹಾರ್ದಿಕ್‌ ಸುಳಿವನ್ನು ನೀಡಿದ್ದಾರೆ. ಮುಂಬೈ ತಂಡದ ಜೊತೆಗಿನ ತಮ್ಮ ನಂಟು ಕೊನೆಗೊಂಡಿದೆ ಎಂದು ಬರೆಯುವ ಮೂಲಕ, ಮತ್ತೆ ಮುಂಬೈ ತಂಡ ಸೇರದೇ ಇರುವ ಸುಳಿವುಕೊಟ್ಟಿದ್ದಾರೆ. ಐಪಿಎಲ್ 2021 ಟೂರ್ನಿಯಲ್ಲಿ ಹಾರ್ದಿಕ್‌ 12 ಪಂದ್ಯಗಳಿಂದ ಕೇವಲ 127 ರನ್‌ಗಳನ್ನು ಮಾತ್ರ ಗಳಿಸಿದರೆ, ಬೌಲಿಂಗ್‌ ಮಾಡಲೇ ಇಲ್ಲ. ಆದರೆ ಒಟ್ಟಾರೆ 92 ಐಪಿಎಲ್‌ ಪಂದ್ಯಗಳಲ್ಲಿ 153.91ರ ಸ್ಟ್ರೈಕ್‌ರೇಟ್‌ನಲ್ಲಿ 1476 ರನ್‌ಗಳನ್ನು ಗಳಿಸಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. "ಮುಂಬೈ ಇಂಡಿಯನ್ಸ್‌ ತಂಡದ ಜೊತೆಗಿನ ನನ್ನ ಪಯಣ, ಎಲ್ಲಾ ನೆನಪುಗಳನ್ನು ನನ್ನ ಜೀವನದುದ್ದಕ್ಕೂ ಜೊತೆಗೆ ಕೊಂಡೊಯ್ಯುತ್ತೇನೆ. ಇಲ್ಲಿ ಬೆಳೆಸಿದ ಸ್ನೇಹ, ಬಾಂಧವ್ಯ, ಸಂಪಾದಿಸಿರುವ ಜನ, ಅಭಿಮಾನಿಗಳು ಎಲ್ಲದಕ್ಕೂ ನಾನು ಆಭಾರಿ. ಇಲ್ಲಿ ಒಬ್ಬ ಆಟಗಾರನಾಗಿ ಮಾತ್ರವಲ್ಲ ಒಬ್ಬ ವ್ಯಕ್ತಿಯಾಗಿಯೂ ಬೆಳೆದಿದ್ದೇನೆ. ಒಬ್ಬ ಯುವ ಆಟಗಾರನಾಗಿ ಇಲ್ಲಿಗೆ ಬಂದೆ. ಒಂದು ತಂಡವಾಗಿ ಗೆದ್ದಿದ್ದೇವೆ, ಒಂದು ತಂಡವಾಗಿ ಸೋತಿದ್ದೇವೆ, ಒಂದು ತಂಡವಾಗಿ ಹೋರಾಡಿದ್ದೇವೆ. ಈ ತಂಡದೊಂದಿಗಿನ ಪ್ರತಿ ಕ್ಷಣವೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಎಲ್ಲ ಒಳ್ಳೆ ಸಂಗತಿಗಳಿಗೂ ಕೊನೆಯಿದೆ ಎನ್ನುತ್ತಾರೆ. ಆದರೆ ಮುಂಬೈ ಇಂಡಿಯನ್ಸ್‌ ನನ್ನ ಹೃದಯದಲ್ಲಿ ಅಜರಾಮರ," ಎಂದು ಹಾರ್ದಿಕ್‌ ತಮ್ಮ ಟ್ವಿಟರ್‌ ಗೋಡೆ ಮೇಲೆ ಭಾವನಾತ್ಮ ಸಂದೇಶ ಬರೆದಿದ್ದಾರೆ. ವರದಿಗಳ ಪ್ರಕಾರ ಹಾರ್ದಿಕ್‌ ಪಾಂಡ್ಯ ಮತ್ತು ಕೃಣಾಲ್‌ ಪಾಂಡ್ಯ ಇಬ್ಬರನ್ನೂ ಅಹ್ಮದಾಬಾದ್‌ ತಂಡ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್‌ ಕೊನೇ ವಾರದಲ್ಲಿ ಐಪಿಎಲ್‌ 2022 ಸಲುವಾಗಿ ಆಟಗಾರರ ಮೆಗಾ ಆಕ್ಷನ್‌ ನಡೆಯುವ ಸಾಧ್ಯತೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Ey0BBj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...