ಪಾಕಿಸ್ತಾನದಲ್ಲಿ ಶ್ರೀಲಂಕಾದ ಫ್ಯಾಕ್ಟರಿ ಮ್ಯಾನೇಜರ್‌ನನ್ನು ಥಳಿಸಿ, ಬೆಂಕಿ ಹಚ್ಚಿ ಭೀಕರ ಹತ್ಯೆ

ಇಸ್ಲಾಮಾಬಾದ್: ಮೂಲದ ಫ್ಯಾಕ್ಟರಿ ಮ್ಯಾನೇಜರ್ ಒಬ್ಬನನ್ನು ಪಾಕಿಸ್ತಾನದಲ್ಲಿ ಶುಕ್ರವಾರ ಥಳಿಸಿ ಕೊಂದು, ಬಳಿಕ ಬೆಂಕಿ ಹಚ್ಚಿ ಸುಟ್ಟಿರುವ ಅಮಾನುಷ ಘಟನೆ ನಡೆದಿದೆ. ಈ ಕೃತ್ಯದ ಎದೆನಡುಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಧರ್ಮನಿಂದನೆ ಆರೋಪಕ್ಕೆ ಸಂಬಂಧಿಸಿದ ಗುಂಪು ಹತ್ಯೆ ಘಟನೆ ಇರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್ ಜಿಲ್ಲೆಯ ಗಾರ್ಮೆಂಟ್ ಫ್ಯಾಕ್ಟರಿ ಒಂದರಲ್ಲಿ ಸುಮಾರು 40 ವರ್ಷದ ಪ್ರಿಯಾಂತ ಕುಮಾರ್ ಎಂಬಾತ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆತ ಇಸ್ಲಾಂ ಧರ್ಮನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಘಟಕಕ್ಕೆ ಮುತ್ತಿಗೆ ಹಾಗಿದ ಕಟ್ಟರ್ ಇಸ್ಲಾಮಿಕ್ ಗುಂಪುಗಳು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ತೆಹ್ರೀಕ್-ಎ- ಲಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಅಂಟಿಸಿದ್ದ ಬಿತ್ತಿಪತ್ರ ಒಂದನ್ನು ಪ್ರಿಯಾಂತ ಹರಿದು ಹಾಕಿದ್ದ ಎನ್ನಲಾಗಿದೆ. ಇದರಲ್ಲಿ ಕುರಾನಿನ ಸಾಲುಗಳು ಇದ್ದವು. ಅದನ್ನು ಹರಿದು ಕಸದ ಬುಟ್ಟಿಗೆ ಎಸೆದಿದ್ದ ಎಂದು ಆರೋಪಿಸಲಾಗಿದೆ. ಪ್ರಿಯಾಂತ ಕೆಲಸ ಮಾಡುತ್ತಿದ್ದ ಕಚೇರಿಯ ಪಕ್ಕಕ್ಕೆ ಇರುವ ಗೋಡೆಗೆ ಇಸ್ಲಾಮಿಸ್ಟ್ ಪಾರ್ಟಿಯ ಈ ಪೋಸ್ಟರ್ ಅಂಟಿಸಲಾಗಿತ್ತು. ಆತ ಪೋಸ್ಟರ್ ಹರಿದು ಎಸೆಯುವುದನ್ನು ಕೆಲವು ಫ್ಯಾಕ್ಟರಿ ಕೆಲಸಗಾರರು ನೋಡಿ, ಅದನ್ನು ಇತರರಿಗೆ ತಿಳಿಸಿದ್ದರು ಎನ್ನಲಾಗಿದೆ. ಇದರ ಬಗ್ಗೆ ಎಲ್ಲ ಕಡೆ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಫ್ಯಾಕ್ಟರಿ ಮುಂದೆ ನೂರಾರು ಮಂದಿ ಸೇರಿಕೊಂಡರು. ಇವರಲ್ಲಿ ಹೆಚ್ಚಿನವರು ಟಿಎಲ್‌ಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಸೇರಿದ್ದರು. ಶಂಕಿತನನ್ನು ಫ್ಯಾಕ್ಟರಿ ಒಳಗಿನಿಂದ ಹೊರಗೆ ಎಳೆದುಕೊಂಡು ಹೋದ ಗುಂಪು, ತೀವ್ರವಾಗಿ ಚಿತ್ರ ಹಿಂಸೆ ನೀಡಿತು. ವಿಪರೀತ ಗಾಯಗಳಿಂದ ಆತ ಅಲ್ಲಿಯೇ ಮೃತಪಟ್ಟಿದ್ದ. ಅಷ್ಟಕ್ಕೆ ಸುಮ್ಮನಾಗದ ಗುಂಪು, ಆತನ ಮೃತದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಇದೆಲ್ಲ ನಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಖಂಡನೆಈ ಹತ್ಯೆಯನ್ನು ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ. ಈ ಬಗ್ಗೆ ವೈಯಕ್ತಿಕವಾಗಿ ತನಿಖೆ ಮೇಲೆ ಗಮನ ಹರಿಸಿರುವುದಾಗಿ ತಿಳಿಸಿರುವ ಅವರು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. 'ಸಿಯಾಲ್‌ಕೋಟ್‌ನ ಕಾರ್ಖಾನೆಯ ಮೇಲೆ ನಡೆದ ಭಯಾನಕ ದಾಳಿ ಮತ್ತು ಶ್ರೀಲಂಕಾದ ಮ್ಯಾನೇಜರ್‌ನನ್ನು ಸುಟ್ಟು ಹಾಕಿರುವುದು ಪಾಕಿಸ್ತಾನಕ್ಕೆ ನಾಚಿಕೆಗೇಡಿನ ದಿನ' ಎಂದು ಹೇಳಿದ್ದಾರೆ. ಘಟನೆ ಕುರಿತಾದ ವಿವರಗಳನ್ನು ಪಾಕಿಸ್ತಾನದಲ್ಲಿನ ಶ್ರೀಲಂಕಾದ ರಾಯಭಾರಿ ಕಚೇರಿ ಪರಿಶೀಲಿಸುತ್ತಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಟಿಎಲ್‌ಪಿ ಮೇಲಿನ ನಿಷೇಧವನ್ನು ಇತ್ತೀಚೆಗಷ್ಟೇ ಇಮ್ರಾನ್ ಖಾನ್ ಸರ್ಕಾರ ತೆರವುಗೊಳಿಸಿತ್ತು. ಟಿಎಲ್‌ಪಿ ಮುಖ್ಯಸ್ಥ ಸಾದ್ ರಿಜ್ವಿ ಜತೆಗೆ ಗೋಪ್ಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರ ಪ್ರಕಾರ ಭಯೋತ್ಪಾದನೆ ಆರೋಪದಡಿ ಜೈಲಿನಲ್ಲಿದ್ದ 1500ಕ್ಕೂ ಅಧಿಕ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿತ್ತು.


from India & World News in Kannada | VK Polls https://ift.tt/3olRVbe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...