ಪ್ರಕಾಶ್ ಜಿ.,ಹಾಸನಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿಯಾವುದೇ ಪಕ್ಷ ಎಷ್ಟೇ ಶ್ರಮ ಹಾಕಲಿ ಗೆಲುವು ನಿರ್ಧಾರ ವಾಗುವುದು ಮತದಾರರಿಂದ ಮಾಡಿಸಿಕೊಳ್ಳುವ ಆಣೆ, ಪ್ರಮಾಣ. ಅದಕ್ಕೆ ಹೊಸ ಸೇರ್ಪಡೆ ಅಮೃತಕ್ಕೆ ಸಮಾನ ಎಂದೇ ಭಾವಿಸಲಾದ ಹಾಲಿನ ಮೇಲಾಣೆ. ಚುನಾವಣೆ ಎಂದರೆ ರಾಜಕೀಯ ಪಕ್ಷಗಳು ನಾನಾ ತಂತ್ರಗಾರಿಕೆ ರೂಪಿಸುವುದು ಹೊಸತಲ್ಲ ಹಾಗೂ ಗುಪ್ತವಾಗಿಯೂ ಉಳಿದಿಲ್ಲ. ಮತಕ್ಕಿಷ್ಟು ಹಣ, ಉಡುಗೊರೆ ಜತೆಗೆ ಇತ್ತೀಚಿನ ವರ್ಷದಲ್ಲಿ ದೇವರ ಫೋಟೊಗಳನ್ನು ಮುಟ್ಟಿಸಿ ಆಣೆ ಮಾಡಿಸುತ್ತಾರೆ ಎಂಬುದನ್ನು ಕೇಳಿದ್ದೇವೆ. ಈ ಬಾರಿ ಅದಕ್ಕೂ ಮಿಗಿಲಾಗಿ ಕ್ಷೀರದ ಮೇಲಾಣೆ ಮಾಡಿಸುತ್ತಿರುವ ಸಂಗತಿ ಕೂಡ ಚರ್ಚೆಗೀಡಾಗಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಹಗಲಿನಲ್ಲಿ ಪ್ರಚಾರ ಸಭೆ, ಕಾರ್ಯಕರ್ತರ ಸಭೆ ಎಂದು ಓಡಾಡಿ, ಉದ್ದುದ್ದ ಭಾಷಣ ಮಾಡಿ, ಎದುರಾಳಿಯನ್ನು ಟೀಕಿಸುವುದು, ತನ್ನ ಬಣ್ಣಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದಾರೆ. ಆದರೆ ಹೊರ ಪ್ರಪಂಚಕ್ಕೆ ಕಾಣುವ ಈ ಬೆಂಬಲ ಮತಗಳಾಗಿ ಪರಿವರ್ತನೆಗಳಾಗುವುದಿಲ್ಲ ಎಂಬ ಸತ್ಯ ಎಲ್ಲ ಪಕ್ಷಗಳಿಗೂ ಗೊತ್ತು. ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿ ಚಿಹ್ನೆ ಮೇಲೆ ಗೆಲ್ಲದ ಕಾರಣ ರಾತ್ರಿ ಹಳ್ಳಿಗಳಲ್ಲಿ ಗ್ರಾಪಂ ಸದಸ್ಯರನ್ನು ಒಗ್ಗೂಡಿಸಿ ಅವರ ಬೆಂಬಲ ಕೋರುವ, ಅನ್ಯ ಪಕ್ಷದವರಾದರೆ ಅವರನ್ನು ಸೆಳೆಯುವ ಕಸರತ್ತು ನಡೆಸುವುದು ಮಾಮೂಲಾಗಿದೆ. ಕಾಂಚಾಣವೂ ಸದ್ದುಒಂದು ಬಾರಿ ಸದಸ್ಯರ 'ನಿರೀಕ್ಷೆ' ಈಡೇರಿಸಿದ ಕಾರಣಕ್ಕಾಗಿ ಅವರ ತಮಗೆ ಶೇ.100 ಪಕ್ಕಾ ಎಂದು ಯಾರೂ ನೆಮ್ಮದಿಯಾಗಿರುವಂತಿಲ್ಲ. ಯಾವುದೇ ಊರಲ್ಲಿ ಒಂದು ಪಕ್ಷದವರು ಮತದಾರರ ಸಭೆ ನಡೆಸಿದ್ದಾರೆಂದು ಗೊತ್ತಾದರೆ ಮರುದಿನವೇ ಎದುರಾಳಿಗಳೂ ಒಂದು ಸಭೆ ಮಾಡುತ್ತಾರೆ. ಅವರ ಹಣದ ಥೈಲಿಯೂ ಸದ್ದು ಮಾಡುತ್ತದೆ. ಹೀಗಾಗಿ ತಮ್ಮ ವ್ಯಾಪ್ತಿಯೊಳಗೆ ಬಂದ ಮತದಾರನ ನಿಷ್ಠೆ ಕಾಪಾಡಿಕೊಳ್ಳಲು ಅಭ್ಯರ್ಥಿಗಳು ಕಂಡುಕೊಂಡಿರುವುದೇ 'ಕ್ಷೀರ ಮಾರ್ಗ'. ಹಿಂದೆಲ್ಲ ವಿವಾದಗಳು ಪಂಚಾಯಿತಿ ಕಟ್ಟೆ ಏರಿದಾಗ ಹಿರಿಯರು ಕ್ಷೀರ ತುಂಬಿದ ಚೊಂಬು ಮುಟ್ಟಿಸಿ ಆಣೆ ಮಾಡಿಸಿ ಸತ್ಯ ಹೊರಗೆಳೆಯುವ ದಾರಿ ಕಂಡುಕೊಂಡಿದ್ದರು. ಆಧುನಿಕತೆಯ ಕಾರಣಕ್ಕಾಗಿ ಈಗ ಪ್ಯಾಕೇಟ್ನ ಹಾಲನ್ನು ರಾಜಕಾರಣಿಗಳು ತಮ್ಮಪರ ಮತದಾರರ ನಿಷ್ಠೆ ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಸದಸ್ಯರನ್ನು ಒಗ್ಗೂಡಿಸುವ ಸಭೆಗೆ ಹಣದ ಥೈಲಿ ಜತೆಗೆ ಅರ್ಧ ಲೀ. ಹಾಲಿನ ಪ್ಯಾಕೆಟ್ ಸಹ ಒಳ ಹೋಗುತ್ತದೆ. ಅಲ್ಲಿ ಮತ ಹಾಕಲು ಒಪ್ಪುವ ಮತದಾರರು ಅಭ್ಯರ್ಥಿ ಕಡೆಯವರ ಉಡುಗೊರೆ ಸ್ವೀಕರಿಸಿ ಹಾಲಿನ ಪ್ಯಾಕೆಟ್ ಮೇಲೆ ಕೈ ಇಟ್ಟು ಮಾತು ಕೊಡಬೇಕು. ಆಗಲೇ ಅವರ ಒಪ್ಪಂದ ಪಕ್ಕಾ ಎಂದೂ ಅವರು ನಾಳೆ ಬೇರೆ ಅಭ್ಯರ್ಥಿಯ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಸ್ಪರ್ಧಿ ನಿರಾಳವಾಗುತ್ತಾರೆ. 'ನೋಡು ಅಮೃತ ಮುಟ್ಟಿ ಮಾತು ಕೊಟ್ಟಿದ್ದೀಯ... ನಾಳೆ ಹೆಚ್ಚು ಕಡಿಮೆ ಆಗಬಾರ್ದು' ಎನ್ನುವ ಎಚ್ಚರಿಕೆಯನ್ನು ಮತದಾರ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾನೆ ಮತ್ತು ಆತ ಧಾರ್ಮಿಕ ಭಾವನೆಗಳಿಗೆ ಎಷ್ಟು ಗಟ್ಟಿಯಾಗಿ ಕಟ್ಟು ಬೀಳುತ್ತಾನೆ ಎನ್ನುವುದು ಆತನ ನಿಷ್ಠೆಯನ್ನು ನಿರ್ಧರಿಸುತ್ತದೆ. ಇದಕ್ಕೆ ಒಬ್ಬಿಬ್ಬರು ಸಾಕ್ಷಿಯೂ ಇರುತ್ತಾರೆ ಎಂಬುದು ಗಮನಾರ್ಹ ಸಂಗತಿ. ಹಾಲಿನ ಮೇಲೆ ಆಣೆಯಿಟ್ಟೂ ಮಾತು ತಪ್ಪುವ ಸಾಧ್ಯತೆಯಿರುವವರ ಬಗ್ಗೆ ಹೆಚ್ಚಿನ ನಿಗಾವಹಿಸುವ ಅನಿವಾರ್ಯತೆಯನ್ನು ಅಭ್ಯರ್ಥಿಗಳ ಪ್ರತಿನಿಧಿಗಳು ಎದುರಿಸಬೇಕಾಗುತ್ತದೆ.
from India & World News in Kannada | VK Polls https://ift.tt/2ZZV4nN