ಮಳೆಯಿಂದ ಬೆಳೆಗಳಿಗೆ ರೋಗಾತಂಕ: ಮುಂದಿನ ವರ್ಷದ ಇಳುವರಿಗೂ ಪೆಟ್ಟು , ದರ ಏರಿಕೆ ಸಾಧ್ಯತೆ!

ಶಶಿಧರ್‌ ಎಸ್‌. ದೋಣಿಹಕ್ಲು, ತುಮಕೂರು ಬೆಂಗಳೂರು: ಹವಾಮಾನ ವೈಪರೀತ್ಯದಿಂದ ಆಗುತ್ತಿರುವ ಅಕಾಲಿಕ ಅತಿವೃಷ್ಟಿ ಪ್ರಸಕ್ತ ವರ್ಷದ ಇಳುವರಿಗೆ ಮಾತ್ರವಲ್ಲದೆ ಮುಂದಿನ ವರ್ಷದ ಇಳುವರಿಗೂ ಭಾರಿ ಹೊಡೆತ ನೀಡುವ ಆತಂಕ ಎದುರಾಗಿದೆ. ದೀರ್ಘಾವಧಿ ಬೆಳೆಗಳು ನಾನಾ ರೀತಿಯ ರೋಗಾತಂಕ ಎದುರಿಸುತ್ತಿವೆ. ಮುಂದಿನ ವರ್ಷ ನಾನಾ ಕಾರಣಗಳಿಂದ ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಕುಂಠಿತವಾಗುವುದು ನಿಶ್ಚಿತ. ಉತ್ಪಾದನೆ ಹಾಗೂ ಬೆಲೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ಉತ್ಪಾದನೆ ಕುಂಠಿತದಿಂದಾಗಿ ಸಹಜವಾಗಿ ಬೆಲೆ ಏರಿಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ತುಮಕೂರು, ರಾಮನಗರ, ಕೋಲಾರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ ಕೆಲವು ಕಡೆಗಳಲ್ಲಿ ಮಾವು ಪ್ರಧಾನ ಬೆಳೆಗಳಲ್ಲೊಂದಾಗಿದೆ. ಏಪ್ರಿಲ್‌-ಮೇನಲ್ಲಿ ಮಳೆಯಾಗಿದ್ದರಿಂದ ಶಿಲೀಂಧ್ರ ರೋಗ ಕಾಣಿಸಿಕೊಂಡು ಶೇ.40ರಷ್ಟು ಕಡಿಮೆಯಾಗಿತ್ತು. ಮುಂದಿನ ಮೂರು ತಿಂಗಳು, ಅಂದರೆ 2022ರ ಫೆಬ್ರವರಿವರೆಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಫೆಬ್ರವರಿಯಲ್ಲಿ ಮಳೆಯಾದರೆ ಮುಂದಿನ ವರ್ಷದ ಮಾವು ಇಳುವರಿ ಸಂಪೂರ್ಣ ನಾಶವಾದಂತೆಯೇ ಎಂದು ಕೃಷಿ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ತೆಂಗಿನ ಮೇಲೂ ಪರಿಣಾಮ ತೆಂಗು ಪ್ರದೇಶದ ವಿಸ್ತರಣೆ ಬಗ್ಗೆಯೇ ಕೃಷಿ ಅಧಿಕಾರಿಗಳು ಮಾತನಾಡುತ್ತಾರೆ. ಆದರೆ ಪ್ರದೇಶ ವಿಸ್ತರಣೆಗೆ ತಕ್ಕಂತೆ ಇಳುವರಿಯೂ ಹೆಚ್ಚಳವಾಗುತ್ತಿದೆಯೇ ಎಂಬುದರ ಬಗ್ಗೆ ಗಮನ ಕೊಡುತ್ತಿಲ್ಲ. ತುಮಕೂರು, ತಿಪಟೂರು, ಚಿಕ್ಕನಾಯಕನಹಳ್ಳಿ, ಹಾಸನ, ಅರಸೀಕೆರೆ ಮೊದಲಾದ 'ತೆಂಗು ಸಾಮ್ರಾಜ್ಯಗಳು' ಹವಾಮಾನದ ವೈಪರೀತ್ಯದಿಂದಾಗಿ ಕೀಟಬಾಧೆಗೆ ತತ್ತರಿಸಿವೆ. 15-20 ವರ್ಷಗಳ ಹಿಂದೆ ಒಂದು ಮರದಲ್ಲಿ 180-200 ಮಾರಾಟ ಯೋಗ್ಯ ಕಾಯಿಗಳನ್ನು ಕೀಳುತ್ತಿದ್ದ ರೈತರು ಇವತ್ತು ಒಂದು ಮರದಿಂದ 25-30 ಮಾರಾಟ ಯೋಗ್ಯ ಕಾಯಿಗಳನ್ನು ಕೀಳುತ್ತಿದ್ದಾರೆ. ವಾಯುಗುಣ ವೈಪರೀತ್ಯದಿಂದ ಉಂಟಾಗುವ ಅಕಾಲಿಕ ಮಳೆಯಿಂದ ಬಿಳಿನೊಣ ಕಾಟ, ಕೀಟಬಾಧೆ ಬಳಿಕ ಶಿಲೀಂಧ್ರ, ನಂತರ ನುಸಿಪೀಡಿಯಿಂದಾಗಿ ಸಂಪೂರ್ಣ ನಾಶವಾಗುತ್ತದೆ. ಅಡಕೆ ಕಥೆಯೂ ಅಷ್ಟೇ ಮಲೆನಾಡು, ಕರಾವಳಿ, ಬಯಲು ಸೀಮೆ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಅಡಕೆಯನ್ನು ಬೆಳೆಯಲಾಗುತ್ತಿದೆ. ಅಡಕೆಗೆ ಬೆಲೆ ಇದೆಯಾದರೂ ಈ ಬಾರಿ ಅಡಕೆ ತೆಗೆದು, ಸಂಸ್ಕರಣೆ ಮಾಡಲು ಬಿಡುತ್ತಿಲ್ಲ. ಜತೆಗೆ ಸಿಂಗಾರಕ್ಕೂ (ಹರಳು) ತೊಂದರೆ. ಆದ್ದರಿಂದ ಸಹಜವಾಗಿ ಮುಂದಿನ ವರ್ಷದ ಇಳುವರಿ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಸದಾ ಮೋಡ ಮುಸುಕಿದ ವಾತಾವರಣ, ಮಳೆಯಿಂದ ಹೊಂಬಾಳೆಗೆ ಶಿಲೀಂಧ್ರ ತಗುಲಿ ಹರಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಮುಂದಿನ ವರ್ಷ ಖಂಡಿತಾ ನಿರೀಕ್ಷಿತ ಇಳುವರಿ ಸಾಧ್ಯವಿಲ್ಲ. ಈ ಬೆಳೆಗಳು ಕೇವಲ ಉದಾಹರಣೆಯಷ್ಟೇ. ಕಾಫಿ, ಏಲಕ್ಕಿ, ಭತ್ತ, ಶೇಂಗಾ, ತೊಗರಿ ಸೇರಿದಂತೆ ಬಹುತೇಕ ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಅಕಾಲಿಕ ಅತಿವೃಷ್ಟಿ ಚಿಂತೆಯನ್ನು ತಂದೊಡ್ಡಿದೆ. ಗುಣಮಟ್ಟದ ಬಿತ್ತನೆ ಬೀಜ ಕೊರತೆ ಆತಂಕ ಮಳೆಯಿಂದ ನಷ್ಟದ ಜತೆಗೆ ನಾನಾ ಬೆಳೆಗಳು ಕೀಟಬಾಧೆಯಿಂದ ಬಳಲುತ್ತಿವೆ. ಪರಿಣಾಮವಾಗಿ ಮುಂದಿನ ವರ್ಷ ಮುಂಗಾರಿಗೆ ಗುಣಮಟ್ಟದ ಬಿತ್ತನೆ ಬೀಜ ಕೊರತೆ ಎದುರಾಗುವ ಸಾಧ್ಯತೆಯಿದೆ. ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಅಕಾಲಿಕ ವರುಣಾರ್ಭಟ ಬಹುತೇಕ ಎಲ್ಲಾ ಬೆಳೆಗಳ ಇಳುವರಿ ಮೇಲೆ ದುಷ್ಪರಿಣಾಮ ಬೀರಿದೆ. ಉದಾಹರಣೆಗೆ ಶೇಂಗಾ ಶೇ.90ರಷ್ಟು ಬೆಳೆನಾಶವಾಗಿದ್ದರೆ, ಬಾಕಿ ಶೇ.10ರಷ್ಟು ಬೆಳೆಗೆ ಹಾಗೂ ಬಿತ್ತನೆಗೆ ಎತ್ತಿಡಬಹುದಾದ ಬಲಿತ ಬೀಜಗಳಲ್ಲಿ ಶಿಲೀಂಧ್ರ ಸಮಸ್ಯೆ ಕಂಡುಬಂದಿದೆ. ಎಲೆಚುಕ್ಕೆ ರೋಗದಿಂದ ಶೇಂಗಾ ನರಳುತ್ತಿದೆ. ಭತ್ತದ ವಿಚಾರಕ್ಕೆ ಬಂದರೆ ಕಂದು ಜಿಗಿಹುಳದ ಆತಂಕ. ನೂರಾರು ಹೆಕ್ಟೇರ್‌ ವ್ಯಾಪ್ತಿಯಲ್ಲಿ ರಾಗಿ ಫಸಲು ಹೊಲದಲ್ಲೇ ಮೊಳಕೆಯೊಡೆದಿದೆ. ಹೀಗೆ ಪ್ರತಿಯೊಂದು ಕೃಷಿ ಬೆಳೆಗಳಿಗೆ ಒಂದಿಲ್ಲೊಂದು ಕೀಟಬಾಧೆ, ಶಿಲೀಂಧ್ರ ಸಮಸ್ಯೆ ಕಾಡುತ್ತಿದೆ. ಗುಣಮಟ್ಟ ಬೀಜದ ಕೊರತೆ ನೋಡಲು ಗಟ್ಟಿಯಾಗಿರುವ ಬೀಜಗಳಿದ್ದರೂ ಈ ವರ್ಷದ ಫಸಲಲ್ಲಿ ಗುಣಮಟ್ಟದ ಬೀಜ ನಿರೀಕ್ಷಿಸುವುದು ಕಷ್ಟವಿದೆ. ಶೇಂಗಾ, ರಾಗಿ, ತೊಗರಿ, ಹರಳು, ಸಾಸಿವೆ. ಉಚ್ಚೆಳ್ಳು ಮೊದಲಾದ ಬೆಳೆಗಳ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸುವ ಸವಾಲು ಸರಕಾರಕ್ಕಿದೆ. ಈ ವರ್ಷ ನಾನಾ ಬೆಳೆಗಳು ಕೀಟಬಾಧೆ, ಶಿಲೀಂಧ್ರ ಬಾಧೆ, ನುಸಿಕಾಟದಿಂದ ಬಳಲುತ್ತಿವೆ. ಹೀಗಾಗಿ ಮುಂದಿನ ವರ್ಷಕ್ಕೆ ಗುಣಮಟ್ಟದ ಬಿತ್ತನೆ ಬೀಜ ಅನುಮಾನ. ಇದಲ್ಲದೆ ದೀರ್ಘಕಾಲಿಕ ಬೆಳೆಗಳ ಪ್ರಸಕ್ತ ವರ್ಷದ ಪರಿಣಾಮ ಮುಂದಿನ ವರ್ಷಕ್ಕೂ ಮುಂದುವರಿಯಲಿದೆ. ಡಾ. ಮಂಜುನಾಥ್‌ ಎಚ್‌. ಕೃಷಿ ವಿಜ್ಞಾನಿ, ಗಾಂಧೀಜಿ ಸಹಜ ಬೇಸಾಯ ಶಾಲೆ ಅಕಾಲಿಕ ಮಳೆಯಿಂದ ಅಡಕೆ, ತೆಂಗು ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳಿಗೂ ಹಾನಿಯುಂಟಾಗಿದೆ. ಮುಂದಿನ ವರ್ಷದ ಫಸಲಿಗೂ ಇದು ತೊಂದರೆಯಾಗಲಿದೆ. ಇಳುವರಿ ಕುಂಠಿತಗೊಳ್ಳುವುದು ಸಹಜ. ರವೀಶ್‌ ಎಲ್‌, ವಿಕ ಸೂಪರ್‌ ಸ್ಟಾರ್‌ ರೈತ , ತುಮಕೂರು


from India & World News in Kannada | VK Polls https://ift.tt/3divoGg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...