ಕರಿ ವಿರೂಪಾಕ್ಷಿ ಬಳ್ಳಾರಿ: ಬೆಳೆದು ಬಾಳನ್ನು ಹಸನು ಮಾಡಿಕೊಳ್ಳೊಣ ಎಂದು ಭಾವಿಸಿದ ರೈತರಿಗೆ, ಕಳೆದ ಎರಡೂ ವರ್ಷಗಳಿಂದ ಸುಗಂಧಿ ಬಾಳೆಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇಲ್ಲಿನ ಕೋಟೆ ಪ್ರದೇಶ, ರಾಮಸಾಗರ, ಬೆಳೆಗೋಡುಹಾಳ್, ನಂ.10 ಮುದ್ದಾಪುರ, ಸಣಾಪುರದ ಹಳೆ ಮಾಗಾಣಿ(ನೀರಾವರಿ)ಯ ನೂರಾರು ಎಕರೆ ಪ್ರದೇಶದಲ್ಲಿ ಹಾಗೂ ತುಂಗಭದ್ರಾ ಬಲದಂಡೆ ಕೆಳಮಟ್ಟದ ಹಾಗೂ ಮೇಲ್ಮಟ್ಟದ ಕಾಲುವೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ 560 ಎಕರೆ ಸುಗಂಧಿ, 100 ಎಕರೆ ಏಲಕ್ಕಿ ಹಾಗೂ 150 ಎಕರೆ ಪಚ್ಚೆ ಬಾಳೆ ಬೆಳೆಸಿದ್ದಾರೆ. ಈ ಪೈಕಿ ರೈತರು ಸುಗಂಧಿ ಬಾಳೆ ಅಧಿಕ ಪ್ರಮಾಣದಲ್ಲಿ ಬೆಳೆಸಿದ್ದಾರೆ. ನಾನಾ ಕಡೆ ಸಾಗಣೆ ಇಲ್ಲಿನ ತೋಟದಲ್ಲಿ ಬೆಳೆಸಿದ ಬಾಳೆಗೊನೆಗಳನ್ನು, ಇಲ್ಲಿನ ಮಾರಾಟಗಾರರು ರೈತರಿಂದ ಖರೀದಿಸಿ, ಬೆಂಗಳೂರು, ಮೈಸೂರು, ದೂರದ ಆಂಧ್ರಾದ ವಿಜಯವಾಡ, ಪತ್ತನಪಲ್ಲಿ, ಪಿಡುಗುರಾಳು, ತೆಲಂಗಾಣ ಒಳಗೊಂಡಂತೆ ಓರಿಸ್ಸಾ, ಬಿಹಾರದ ಗಡಿ ಭಾಗಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಕಾರಣ ಸಾಗಣೆಗೆ ನಾನಾ ತೊಂದರೆ ಉಂಟಾಗಿದೆ. ಕಡಿಮೆ 2019ರಲ್ಲಿ ಸುಗಂಧಿ ಬಾಳೆ ಟನ್ ಒಂದಕ್ಕೆ 1200ರೂಗಳಿಂದ 1300ರೂಗಳಿಗೆ ಮಾರಾಟವಾಗುತ್ತಿತ್ತು. ಆದರೀಗ 700ರೂ. ದರವಿದೆ. ಕೊರೊನಾ 1ನೇ ಮತ್ತು 2ನೇ ಅಲೆಯಲ್ಲಿ ಸಾರಿಗೆ ವ್ಯವಸ್ಥೆ ಸರ್ಮಪಕವಾಗಿಲ್ಲದೆ ಬೆಲೆ ಕಡಿಮೆಯಾಗಿರುವುದು ಒಂದೆಡೆಯಾದರೆ, ಇಲ್ಲಿನ ಬಾಳೆ ಸಾಗಣೆ ಮಾಡುವ ಪ್ರದೇಶಗಳಲ್ಲಿ, ಅಲ್ಲಿನ ರೈತರು ಬಾಳೆ ಬೆಳೆಯಲು ಆರಂಭಿಸಿದ್ದರಿಂದ ಬೆಲೆ ಕಡಿಮೆಯಾಗಲು ಕಾರಣ ಎನ್ನಲಾಗುತ್ತದೆ. ವೆಚ್ಚವು ಗಿಟ್ಟುತ್ತಿಲ್ಲ ರೈತರು ತೋಟಗಳನ್ನು ಸಮೃದ್ಧವಾಗಿ ಬೆಳೆಸಲು ಕೃಷಿ ಚಟುವಟಿಕೆ, ಗೊಬ್ಬರ ಸೇರಿ ನಿರ್ವಹಣೆ ಮಾಡಲು ಎಕರೆಗೆ ಸಾವಿರಾರು ರೂ. ವೆಚ್ಚ ಮಾಡುತ್ತಾರೆ. ಆದರೆ ಇಲ್ಲಿನ ಮಾರುಕಟ್ಟೆಯಲ್ಲಿ ಸುಗಂಧಿ ಬಾಳೆ ಟನ್ ಒಂದಕ್ಕೆ 700ರೂ ಬೆಲೆಯಿದ್ದು, ಇದರಲ್ಲಿ ನಿರ್ವಹಣೆ ಸೇರಿ ಎಲ್ಲ ವೆಚ್ಚ ತೆಗೆದರೆ ನಮಗೆ ಲಾಭವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಇಲ್ಲಿನ ಕೋಟೆ ಪ್ರದೇಶದ ಬಾಳೆ ಬೆಳೆಗಾರ ಕಟ್ಟೆ ದುರುಗಪ್ಪ ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಸುಗಂಧಿ ಬೆಲೆ ಕಡಿಮೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಸರಕಾರ ಸೂಕ್ತ ಬೆಲೆ ಕಲ್ಪಿಸಬೇಕು. ಅಲ್ಲದೆ ಮಾರಾಟಕ್ಕೆ ಪೂರಕ ವ್ಯವಸ್ಥೆ ಮಾಡಬೇಕು. ಬಿ.ನಾರಾಯಣಪ್ಪ, ರಾಮಸಾಗರ. ಬಾಳೆ ಬೆಳೆಗಾರ ಸುಗಂಧಿ ಬೆಳೆದ ರೈತರಿಗೆ ಕೊರೊನಾ 1ನೇ ಮತ್ತು 2ನೇ ಅಲೆಯಲ್ಲಿ ಬೆಳೆಗೆ ತಕ್ಕಂತೆ ಬೆಲೆ ಸಿಗಲಿಲ್ಲ. ಬೆಂಗಳೂರು ಬಿನ್ನಿ ಮಿಲ್ ಮಾರುಕಟ್ಟೆ(ಹಣ್ಣು, ತರಕಾರಿ), ಹಾಪ್ಕಾಮ್ಸ್ನಲ್ಲಿ ಬೆಲೆ ಯಥಾರೀತಿಯಾಗಿದೆ. ರೈತರು ಸ್ವಲ್ಪ ದೂರದ ನಗರ, ಪಟ್ಟಣಗಳಿಗೆ ಸಾಗಣೆ ಮಾಡಿ, ಸೂಕ್ತ ಬೆಲೆ ಪಡೆಯಬಹುದು. ಜೆ.ಶಂಕರ್, ಹಿರಿಯ ಸಹಾಯಕ ನಿರ್ದೇಶಕರು. ತೋಟಗಾರಿಕೆ ಇಲಾಖೆ. ಹೊಸಪೇಟೆ
from India & World News in Kannada | VK Polls https://ift.tt/3pvdKo3