ಯಶಸ್ವಿನಿ ಯೋಜನೆಗೆ ಮರುಜೀವ: ಗ್ರಾಮೀಣರಿಗೆ ಆಶಾಕಿರಣ, 1.5 ಕೋಟಿ ಜನರಿಗೆ ಉಚಿತ ಚಿಕಿತ್ಸೆ!

ಶಿವಾನಂದ ಹಿರೇಮಠ ಬೆಂಗಳೂರು ಬೆಂಗಳೂರು: ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಜನೋಪಯೋಗಿ 'ಯಶಸ್ವಿನಿ' ಯೋಜನೆಗೆ ಮರುಜೀವ ನೀಡಲು ಸಿದ್ಧತೆ ನಡೆಸಿದೆ. ಸರಕಾರದ ಸೂಚನೆ ಮೇರೆಗೆ ಯೋಜನೆ ಜಾರಿಗಾಗಿ ಪ್ರಸ್ತಾವನೆ ಸಲ್ಲಿಸಿರುವ ಸಹಕಾರ ಇಲಾಖೆಯು, ಮುಂಬರುವ ಬಜೆಟ್‌ನಲ್ಲಿ 300 ಕೋಟಿ ರೂ. ಅನುದಾನ ಮೀಸಲಿಡುವಂತೆ ಮನವಿ ಮಾಡಿಕೊಂಡಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಇಲ್ಲವೇ ಸದ್ಯದಲ್ಲೇ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್‌ ಶಾ ಅವರು 'ಯಶಸ್ವಿನಿ' ಯೋಜನೆಯನ್ನು ಉದ್ಘಾಟಿಸುವ ಸಾಧ್ಯತೆ ಇದೆ. ವಿಶ್ವದ ಬೃಹತ್‌ ಆರೋಗ್ಯ ರಕ್ಷಣಾ ಯೋಜನೆ ಎಂದು ಹೆಗ್ಗಳಿಕೆ ಪಡೆದ 'ಯಶಸ್ವಿನಿ' ಮರು ಜಾರಿಯಿಂದ ಸಹಕಾರ ಕ್ಷೇತ್ರದ 41 ಲಕ್ಷ ಸದಸ್ಯರು ಮತ್ತು ಅವರ ಕುಟುಂಬವನ್ನು ಒಳಗೊಂಡು ರಾಜ್ಯದ 1.5 ಕೋಟಿ ಜನರು ಆರೋಗ್ಯ ರಕ್ಷಣೆಗೆ ಒಳಪಡಲಿದ್ದಾರೆ. ವೈದ್ಯಕೀಯ ಕ್ಷೇತ್ರದ 14 ವಿಭಾಗಗಳಲ್ಲಿ ಗುರುತಿಸಿದ 295 ಕಾಯಿಲೆಗಳ 823 ಶಸ್ತ್ರಚಿಕಿತ್ಸೆಗೆ ನಗದು ರಹಿತ ಸೌಲಭ್ಯ ಪಡೆಯಬಹುದು. ಈ ಮೊದಲಿದ್ದ 905 ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳನ್ನು 1800ಕ್ಕೆ ಹೆಚ್ಚಿಸಲು ಸರಕಾರ ಚಿಂತನೆ ನಡೆಸಿದೆ. ಗ್ರಾಮೀಣ ಯಶಸ್ವಿನಿ ಯೋಜನೆಯಡಿಯಲ್ಲಿ ಒಂದು ಬಾರಿ ಚಿಕಿತ್ಸೆಗೆ ಒಳಗಾದರೆ 1.25 ಲಕ್ಷ ರೂ. ಮಿತಿ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆಗೆ ಒಳಗಾದರೆ 2 ಲಕ್ಷ ರೂ.ವರೆಗೆ ನಗದು ರಹಿತ ಶಸ್ತ್ರ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಗ್ರಾಮೀಣ ಜನರಿಗೆ ರಾಜ್ಯದ ಖಾಸಗಿ, ಬೃಹತ್‌ ಆಸ್ಪತ್ರೆಗಳಲ್ಲಿ ಸರಳ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆಯನ್ನು ನಗದು ರಹಿತವಾಗಿ ಒದಗಿಸುವ ಮಹತ್ವದ ಯೋಜನೆಯನ್ನು 2018ರ ಜೂನ್‌ನಲ್ಲಿ 'ಆರೋಗ್ಯ ' ಯೋಜನೆಗೆ ಒಳಪಡಿಸಿ, ಈ ಯೋಜನೆಗೆ ತಿಲಾಂಜಲಿ ಇಡಲಾಗಿತ್ತು. ಆನಂತರ ಖಾಸಗಿ ಆಸ್ಪತ್ರೆಯಲ್ಲಿನ ನಗದು ರಹಿತ ಚಿಕಿತ್ಸಾ ಸೌಲಭ್ಯದಿಂದ ಜನರು ವಂಚಿತರಾದರು. ಸರಕಾರಿ ಆಸ್ಪತ್ರೆಗಳ ಜಿಲ್ಲಾಶಸ್ತ್ರ ಚಿಕಿತ್ಸಕರಿಂದ ಅನುಮತಿ ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಮಾತ್ರ 'ಆರೋಗ್ಯ ಕರ್ನಾಟಕ' ಯೋಜನೆಯಡಿಯಲ್ಲಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಹೊರೆಯಾದರೂ ಅನುಕೂಲ 'ಯಶಸ್ವಿನಿ' ಯೋಜನೆಯಿಂದ ಸಹಕಾರ ಇಲಾಖೆಗೆ ಪ್ರತಿ ವರ್ಷ ಸುಮಾರು 300 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ. ಆದರೂ, ಜನರ ಹಿತದೃಷ್ಟಿಯಿಂದ ಯೋಜನೆ ಜಾರಿಗೆ ಸರಕಾರ ಮುಂದಾಗಿದೆ. ಸರಕಾರ ಪ್ರತಿ ವರ್ಷ ಇಲಾಖೆಗೆ ಅನುದಾನ ನೀಡುತ್ತಿತ್ತು. ರೈತರ ವಂತಿಗೆ ಮತ್ತು ಸರಕಾರದ ಅನುದಾನದಿಂದ ವೆಚ್ಚವನ್ನು ನಿಭಾಯಿಸಲಾಗುತ್ತಿತ್ತು. ವಿಶ್ವದ ಬೃಹತ್‌ ಯೋಜನೆ ಕೇವಲ 300 ರೂ. ವಂತಿಗೆಯಲ್ಲಿ ಹಲವು ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಈ ಯೋಜನೆ ವಿಶ್ವದ ಬೃಹತ್‌ ಆರೋಗ್ಯ ರಕ್ಷಣಾ(ಸೇವಾ ದೃಷ್ಟಿಯಿಂದ) ಯೋಜನೆಯಾಗಿದೆ. ಜಪಾನ್‌ ಮತ್ತು ಇತರೆ ದೇಶಗಳು ಯೋಜನೆ ಬಗ್ಗೆ ಮಾಹಿತಿ ಪಡೆಯಲು ಭಾರತವನ್ನು ಸಂಪರ್ಕಿಸಿದ್ದವು. ಫಿಲಿಪ್ಪಿನ್ಸ್‌ ದೇಶದ ವಿವಿಗಳಲ್ಲಿ'ಯಶಸ್ವಿನಿ' ಬಗ್ಗೆ ಪ್ರಬಂಧ ಕೂಡ ಮಂಡನೆಯಾಗಿದೆ. ಈ ಯೋಜನೆಯಡಿ 2018ವರೆಗೆ 13.64 ಲಕ್ಷ ರೈತರಿಗೆ 1700 ಕೋಟಿ ರೂ. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಹಾಗೂ 24.48 ಲಕ್ಷ ಹೊರರೋಗಿಗಳಿಗೆ ನೀಡಲಾಗಿದೆ. ವಂತಿಗೆ ಹೇಗೆ? ಸಹಕಾರ ಕ್ಷೇತ್ರದಲ್ಲಿ(ಸೊಸೈಟಿ) ನೋಂದಣಿ ಆಗಿರುವ ಗ್ರಾಮೀಣ ಸದಸ್ಯರಿಗೆ ಪ್ರತಿ ವರ್ಷ 300 ರೂ.ಗಳನ್ನು 2018ರಲ್ಲಿ ವಂತಿಗೆ ರೂಪದಲ್ಲಿ ಪಡೆಯಲಾಗಿದೆ. ಈ ವಂತಿಗೆಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ 250 ರೂ. ಹಾಗೂ ಇತರೆ ವರ್ಗಗಳಿಗೆ 50 ರೂ.ಗಳನ್ನು ಸರಕಾರ ಸಬ್ಸಿಡಿ ನೀಡುತ್ತಿದೆ. ಈಗ ಸಬ್ಸಿಡಿ ಮೊತ್ತವನ್ನು 360ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಸದಸ್ಯರು ಮತ್ತು ಅವರ ಕುಟುಂಬಸ್ಥರೆಲ್ಲರೂ ಯೋಜನೆಗೆ ಒಳಪಡುವುದರಿಂದ ವಾರ್ಷಿಕವಾಗಿ ವಂತಿಗೆ ಮೊತ್ತ ತೀರಾ ಕಡಿಮೆ ಎಂಬ ಅಭಿಪ್ರಾಯವಿದೆ. 2003ರಲ್ಲಿ ಯೋಜನೆ ಆರಂಭವಾದಾಗ ವಾರ್ಷಿಕವಾಗಿ ಕೇವಲ 60 ರೂ. ವಂತಿಗೆ ಪಡೆದು ಲಕ್ಷಕ್ಕೂ ಅಧಿಕ ಮೊತ್ತದ ನಗದು ರಹಿತ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ವಿಮೆ ಅಲ್ಲ, ರಕ್ಷಣಾ ಯೋಜನೆಖಾಸಗಿ ವಿಮಾ ಕಂಪನಿಗಳು ಆರೋಗ್ಯ ವಿಮೆ ಅನುಸರಿಸುತ್ತಿವೆ. ಪ್ರತಿ ತಿಂಗಳು ಸಾವಿರದಿಂದ ಲಕ್ಷದವರೆಗೂ ವಂತಿಗೆ ಪಡೆದು ನಗದು ರಹಿತ ಚಿಕಿತ್ಸೆ ನೀಡುತ್ತವೆ. ಅದರಲ್ಲೂ ವಯಸ್ಸಿನ ಮಿತಿ, ಚಿಕಿತ್ಸಾ ವೆಚ್ಚದ ಮಿತಿ, ಕಾಯಿಲೆಗಳ ಮಿತಿ ಸೇರಿ ನಾನಾ ಇತಿಮಿತಿಗಳಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸುತ್ತವೆ. ಆದರೆ, ಯಶಸ್ವಿನಿ ವಿಮೆಯಷ್ಟೇ ಅಲ್ಲ, 'ರಕ್ಷಣಾ' ಯೋಜನೆ ಆಗಿದೆ. ಇಲ್ಲಿ ಯಾವುದೇ ಇತಿಮಿತಿಗಳು ಇಲ್ಲದಿರುವುದರಿಂದ ಗ್ರಾಮೀಣ ಜನರಿಗೆ ಸುಲಭವಾಗಿ ಚಿಕಿತ್ಸೆ ದೊರಕಲಿದೆ. ರೈತರಿಗೆ ಹೇಗೆ ಅನುಕೂಲ?
  • ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರಕಾರಿ ಆಸ್ಪತ್ರೆಯ ಅನುಮತಿ ಅಗತ್ಯವಿಲ್ಲ
  • ಸಮಯದ ಉಳಿತಾಯ, ಪರಿಣಾಮಕಾರಿ ಶಸ್ತ್ರ ಚಿಕಿತ್ಸೆ
  • ರಾಜ್ಯದ ಬೃಹತ್‌ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ
  • ಗಂಭೀರ ಕಾಯಿಲೆಗಳಿಗೆ ನಗದು ಹೊಂದಿಸುವ ಕಷ್ಟದಿಂದ ಮುಕ್ತಿ


from India & World News in Kannada | VK Polls https://ift.tt/3DlA9Jy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...