ಕೊಹಿಮಾ: ಈಶಾನ್ಯ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ ಜನತೆಯಲ್ಲಿ ಉದ್ವೇಗ ಮನೆಮಾಡಿದೆ. ಮಾನ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 13 ನಾಗರಿಕರನ್ನು ಹತ್ಯೆ ಮಾಡಿದೆ. ಶನಿವಾರ ಈ ಘಟನೆ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ. ಮಾನ್ ಜಿಲ್ಲೆಯ ತಿರು ಗ್ರಾಮದಲ್ಲಿ ಭದ್ರತಾ ಪಡೆಗಳು ಎನ್ಎಸ್ಸಿಎನ್ ಉಗ್ರರು ಎಂದು ಭಾವಿಸಿ ನಡೆಸಿದ್ದಾರೆ. ಇದರಲ್ಲಿ ಕೆಲವು ನಾಗಾ ಯುವಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಪ್ಯಾರಾ ಕಮಾಂಡೋಗಳು ಎನ್ನಲಾಗಿರುವ ಭದ್ರತಾ ಸಿಬ್ಬಂದಿ, ನಾಗರಿಕರನ್ನು ಉಗ್ರರು ಎಂದು ತಪ್ಪಾಗಿ ಭಾವಿಸಿ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತರೆಲ್ಲ ಕೊನ್ಯಾಕ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಶನಿವಾರ ಸಂಜೆ (ಡಿ. 4) ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತ್ರಸ್ತರು ಕಲ್ಲಿದ್ದಲು ಗಣಿಯಿಂದ ಪಿಕ್ ಅಪ್ ಟ್ರಕ್ ಒಂದರಲ್ಲಿ ಮನೆಗೆ ಮರಳುತ್ತಿದ್ದರು. ಮೃತರೆಲ್ಲರೂ ಕಲ್ಲಿದ್ದಲು ಗಣಿಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದರು ಎಂದು ಹೇಳಲಾಗಿದೆ. ಈ ಅನಿರೀಕ್ಷಿತ ಹತ್ಯೆ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕುಪಿತ ಗ್ರಾಮಸ್ಥರಿಂದ ಹಲವು ಭದ್ರತಾ ವಾಹನಗಳಿಗೆ ಹಾನಿಯಾಗಿದೆ. ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಆಕ್ರೋಶಗೊಂಡ ಜನರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದಾಗ ಅವರು ಜನರನ್ನು ನಿಯಂತ್ರಿಸಲು ಮತ್ತೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಸಂಜೆ ನಡೆದ ಘಟನೆಯಲ್ಲಿ ಆರು ಮಂದಿ ಜೀವ ಕಳೆದುಕೊಂಡಿದ್ದರೆ, ಗಾಯಗೊಂಡ ಇತರೆ ಏಳು ಮಂದಿ ಭಾನುವಾರ ಬೆಳಗಿನ ವೇಳೆಗೆ ಮೃತಪಟ್ಟಿದ್ದಾರೆ. ಅಮಿತ್ ಶಾ ದುಃಖ 'ನಾಗಾಲ್ಯಾಂಡ್ನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ತೀವ್ರ ನೋವಾಗಿದೆ. ತಮ್ಮ ಜೀವಗಳನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಅತೀವ ಸಂತಾಪಗಳು. ರಾಜ್ಯ ಸರ್ಕಾರವು ಉನ್ನತ ಮಟ್ಟದ ಎಸ್ಐಟಿ ರಚಿಸಿದ್ದು, ಈ ಘಟನೆ ಬಗ್ಗೆ ಅದು ಕೂಲಂಕಷ ತನಿಖೆ ನಡೆಸಲಿದೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗಲಿದೆ' ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮುಖ್ಯಮಂತ್ರಿ ಖಂಡನೆ 'ಮಾನ್ನ ಒಟಿಂಗ್ನಲ್ಲಿ ನಾಗರಿಕರ ಹತ್ಯೆಗೆ ಕಾರಣವಾದ ದುರದೃಷ್ಟಕರ ಘಟನೆ ತೀವ್ರ ಖಂಡನಾರ್ಹ. ಸಂತ್ರಸ್ತರ ಕುಟುಂಬದವರಿಗೆ ಸಂತಾಪಗಳು. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಉನ್ನತ ಮಟ್ಟದ ಎಸ್ಐಟಿ ತನಿಖೆ ನಡೆಸಲಿದೆ. ನೆಲದ ಕಾನೂನಿಗೆ ಅನುಗುಣವಾಗಿ ನ್ಯಾಯ ಸಿಗಲಿದೆ. ಎಲ್ಲ ವರ್ಗದವರಿಗೂ ಶಾಂತಿ ಕಾಪಾಡಲು ಮನವಿ ಮಾಡುತ್ತೇನೆ' ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೊ ಹೇಳಿದ್ದಾರೆ. ಹಾರ್ನ್ಬಿಲ್ ಉತ್ಸವ ರದ್ದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಾನ್ಗೆ ಕರೆತರಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಲ್ಲಿದ್ದಲು ಗಣಿಯು ಗ್ರಾಮದಿಂದ 15 ಕಿಮೀ ದೂರದಲ್ಲಿದೆ. ಅವರು ಗಣಿಯಲ್ಲಿ ಕೆಲಸ ಮಾಡಿ, ಪ್ರತಿ ಶನಿವಾರ ಸಂಜೆ ಹಳ್ಳಿಗೆ ಮರಳುತ್ತಿದ್ದು, ಭಾನುವಾರದಂದು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ಗಣಿಗೆ ತೆರಳುತ್ತಿದ್ದರು. ರಾಜ್ಯ ರಾಜಧಾನಿ ಕೊಹಿಮಾ ಸಮೀಪದ ಕಿಸಾಮಾದಲ್ಲಿ ನಡೆಯುತ್ತಿರುವ ವಾರ್ಷಿಕ ಹಾರ್ನ್ಬಿಲ್ ಉತ್ಸವವನ್ನು ರದ್ದುಗೊಳಿಸಲು ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ENPO) ನಿರ್ಧರಿಸಿದೆ. ಇಎನ್ಪಿಒ ಆರು ಬುಡಕಟ್ಟುಗಳನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶದಲ್ಲಿ ರಕ್ತಪಾತ ನಡೆಸದಂತೆ ಈ ಬುಡಕಟ್ಟುಗಳು ನಿರ್ಣಯ ಕೈಗೊಂಡಿದ್ದವು.
from India & World News in Kannada | VK Polls https://ift.tt/3oxdkP7