ಕೆ.ಎಚ್.ರುದ್ರಯ್ಯ : ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದಾಗಿ , ಪಾಠ ಕಲಿತು ಸಂಭ್ರಮದಿಂದ ಸಂಜೆ ವೇಳೆಗೆ ಮನೆ ಸೇರುತ್ತಿದ್ದ ದಿನವಿಡೀ ನಾಲ್ಕು ಗೋಡೆ ಮಧ್ಯೆ ಉಳಿದು ಪಂಜರದ ಗಿಳಿಯಂತಾಗಿದ್ದಾರೆ. ಶಾಲೆಯಲ್ಲೀಗ ಆಟ, ಪಾಠ, ಪ್ರವಚನಗಳಿಲ್ಲ. ಮನೆಯಿಂದ ಹೊರ ಹೋದರೆ ಕೋವಿಡ್ ಭಯ, ಹೊರಗಿನ ಮಕ್ಕಳ ಜತೆಗೆ ಆಡುವಂತಿಲ್ಲ. ಕುಟುಂಬ ಯೋಜನೆಯಿಂದ ಮನೆಯಲ್ಲಿ ಆಡಲು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಇರುವ ಒಬ್ಬ ಅಥವಾ ಇಬ್ಬರು ಮಕ್ಕಳು ನಾಲ್ಕು ಗೋಡೆ ಮಧ್ಯೆ ಕಳೆದ ಒಂದು ವರ್ಷದಿಂದ ಕಾಲ ಕಳೆಯುತ್ತಿದ್ದಾರೆ. ಬಾಹ್ಯ ಪ್ರಪಂಚದಲ್ಲಿಅರಳಿ ಹೂವಾಗಬೇಕಿದ್ದ ಮಕ್ಕಳ ಮನಸ್ಸು ಮನೆಯೊಳಗೆ ಮುದುಡಿ ಹೋಗುತ್ತಿದೆ. ಒಂದು ವರ್ಷದಿಂದ ಆನ್ಲೈನ್ನಲ್ಲಿ ಓದು, ಬರಹ ಜತೆಗೆ ಪರೀಕ್ಷೆಯೂ ಮುಗಿದಿದೆ. ಶಿಕ್ಷಕರು ಕೊಟ್ಟ ಪ್ರಶ್ನೆಗೆ ನೋಡಿಯೋ ನೋಡದೆಯೋ ಉತ್ತರ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅದು ಒತ್ತಟ್ಟಿಗಿರಲಿ, ಮಕ್ಕಳನ್ನು ಕೊರೊನಾದ ಈ ಸಂದರ್ಭ ಹಿಡಿದಿಟ್ಟುಕೊಳ್ಳುವುದು ಪೋಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾಸ್ಕ್ ಹಾಕದೆಯೇ ಪಕ್ಕದ ಮನೆಗೆ ಹಾರುತ್ತವೆ, ಹೇಳದೆಯೇ ಆಟದ ಮೈದಾನಕ್ಕೆ ಓಡಿರುತ್ತವೆ. ಇಂತಹ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಪೋಷಕರು, ಮನೆಯಿಂದ ಎಲ್ಲೂ ಅಲುಗಾಡದಂತೆ ಹಿಡಿದಿಡುವಷ್ಟು ಕೊರೊನಾ ಮಹಾಮಾರಿ ಎಲ್ಲಡೆ ಈಗ ಆತಂಕ ಹುಟ್ಟಿಸಿದೆ. ದಿನಾ ಗೆಳೆಯರೊಂದಿಗೆ ಕೂಡಿ ಆಡಬೇಕಿದ್ದ ಮಕ್ಕಳು ಈಗ ಮನೆಯಲ್ಲಿ ಬಂಧಿಯಾಗಿದ್ದಾರೆ. ಅವರಿಗೆ ಉಳಿದಿರುವುದು ಎರಡೇ ಮಾರ್ಗೋಪಾಯ. ಒಂದು ಟಿವಿ ಮತ್ತೊಂದು ಮೊಬೈಲ್. ಬೆಳಗ್ಗೆ ಸ್ನಾನ, ತಿಂಡಿ ಮಾಡಿದ ನಂತರ ಪಾಠ, ಹೋಂ ವರ್ಕ್ ನೋಡುವ ನೆಪದಲ್ಲಿ ಮಕ್ಕಳು ಮೊಬೈಲ್ ಹಿಡಿದರೆ ಅಲ್ಲಿ ವಿಡಿಯೋ ಗೇಮ್ಗಳ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದ್ದು, ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಿದೆ. ಇನ್ನು ಕೆಲ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆವರೆಗೂ ಸಿನಿಮಾ ಅಥವಾ ರಿಯಾಲಿಟಿ ಶೋಗಳಲ್ಲಿ ಮುಳುಗುತ್ತಿದ್ದಾರೆ. ಲವಲವಿಕೆಯಿಂದ ಇರಬೇಕಾದ ಮಕ್ಕಳು ಇದೀಗ ಬಾಹ್ಯ ಚಟುವಟಿಕೆಗಳಿಂದ ದೂರವಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಮಾನಸಿಕ ರೋಗ ತಜ್ಞರು ಅಭಿಪ್ರಾಯಪಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ಜೀವಕ್ಕಿಂತ ಜೀವನ ಮುಖ್ಯ. ಆದರೂ ಮಕ್ಕಳ ಮನಸ್ಸನ್ನು ಸದಾ ಲವಲವಿಕೆಯಿಂದ ಇರಿಸಲು ಗಮನ ಹರಿಸುವುದು ಬಹಳ ಮುಖ್ಯ. ಮಕ್ಕಳು ಮೊಬೈಲ್ನಲ್ಲಿ ಪಠ್ಯಕ್ಕೆ ಸಂಬಂಧಿಸಿದನ್ನು ಕಲಿಯುವುದನ್ನು ಪೋಷಕರು ಗಮನಿಸಬೇಕು. ಜತೆಗೆ ಮಕ್ಕಳಿಗೆ ಗ್ರಾಮೀಣ ಒಳಾಂಗಣ ಕ್ರೀಡೆಗಳನ್ನು ಆಡಿಸುವುದರಿಂದ ಕ್ರಿಕೆಟ್, ವಾಲಿಬಾಲ್ಗೆ ಸೀಮಿತವಾಗಿದ್ದ ಮಕ್ಕಳು ಹೊಸ ಆಟವನ್ನು ಕಲಿತು ಸಂಭ್ರಮಿಸುತ್ತಾರೆ. ಇದರಿಂದ ಮಕ್ಕಳ ಮನಸ್ಸು ಉಲ್ಲಸಿತವಾಗುತ್ತದೆ. ಪೋಷಕರಿಗೂ ಮನರಂಜನೆ ದೊರೆಯುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.
from India & World News in Kannada | VK Polls https://ift.tt/3ywTVAB