ಹೊಸದಿಲ್ಲಿ: ಭಾರತ ಹಾಗೂ ನಡುವಿನ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಣಾಹಣಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಉಭಯ ತಂಡಗಳ ನಡುವಿನ ಕಾದಾಟಕ್ಕೆ ಸೌತಾಮ್ಟನ್ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ಪಂದ್ಯದ ಬಗ್ಗೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಲವು ದಿಗ್ಗಜರು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ್ದರು. ಈ ಸಾಲಿಗೆ ಇದೀಗ ಆಸ್ಟ್ರೇಲಿಯಾ ತಂಡದ ಹಿರಿಯ ವೇಗಿ ಸೇರ್ಪಡೆಯಾಗಿದ್ದಾರೆ. ಪ್ಯಾಟ್ ಕಮಿನ್ಸ್ ಇತ್ತೀಚೆಗೆ ಮಾಲ್ಡೀವ್ಸ್ನಿಂದ ತವರಿಗೆ ಬಂದು ಸಿಡ್ನಿಯ ಹೋಟೆಲ್ವೊಂಡದಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪ್ಯಾಟ್ ಕಮಿನ್ಸ್ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಮಾನಿಗಳಿಗೆ ಪ್ರಶ್ನೋತ್ತರ ಅವಧಿಯನ್ನು ಏರ್ಪಡಿಸಿದ್ದರು. ಈ ವಿಡಿಯೋವನ್ನು ಅವರು ಮಂಗಳವಾರ ತಮ್ಮ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಹಣಾಹಣಿಯಲ್ಲಿ ಗೆಲ್ಲುವ ತಂಡ ಯಾವುದೆಂದು ಆಸೀಸ್ ವೇಗಿಗೆ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಪ್ಯಾಟ್ ಕಮಿನ್ಸ್, ಇಂಗ್ಲೆಂಡ್ ವಾತಾವರಣ ನ್ಯೂಜಿಲೆಂಡ್ಗೆ ಸಹಕಾರಿಯಾಗಿದೆ. ಏಕೆಂದರೆ ನ್ಯೂಜಿಲೆಂಡ್ನಲ್ಲಿಯೂ ಹೆಚ್ಚು ಕಡಿಮೆ ಇದೇ ವಾತಾವರಣ ಇರುತ್ತದೆ. ಹಾಗಾಗಿ ಕಿವೀಸ್ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು. ಇದು ಒಂದೇ ಒಂದು ಪಂದ್ಯವಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶ ಏನು ಬೇಕಾದರೂ ಆಗಬಹುದು ಎಂಬ ಅಂಶವನ್ನು ಕಮಿನ್ಸ್ ಹೇಳಿದರು. "ಇದು ಅತ್ಯುತ್ತಮ ಪಂದ್ಯವಾಗಿದೆ. ಇಂಗ್ಲೆಂಡ್ನಲ್ಲಿ ತುಂಬಾ ಮಳೆಯಾಗುತ್ತದೆ ಹಾಗೂ ಇಲ್ಲಿನ ಪರಿಸ್ಥಿತಿ ಬಗ್ಗೆ ಹೇಳುವುದಾದರೆ, ಹೆಚ್ಚು-ಕಡಿಮೆ ನ್ಯೂಜಿಲೆಂಡ್ ಹೊಂದಾಣಿಕೆಯಾಗುತ್ತದೆ. ಕಳೆದ ಹಲವು ತಿಂಗಳಿಂದ ಟೆಸ್ಟ್ ಪಂದ್ಯ ಆಡದೇ ಇರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ನೋಡಲು ತುಂಬಾ ಆಸಕ್ತದಾಯಕವಾಗಿರುತ್ತದೆ. ಇದು ಒಂದೇ ಒಂದು ಪಂದ್ಯವಾಗಿರುವ ಹಿನ್ನೆಲೆಯಲ್ಲಿ ಏನು ಬೇಕಾದರೂ ನಡೆಯಬಹುದು. ಆದರೆ, ಇಲ್ಲಿನ ಪರಿಸ್ಥಿತಿ ಭಾರತಕ್ಕಿಂತ ನ್ಯೂಜಿಲೆಂಡ್ಗೆ ಹೊಂದಾಣಿಕೆಯಾಗುತ್ತದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಕೊನೆಯ ಬಾರಿ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ತೀವ್ರವಾದ ಕಾರಣ ಬಯೋ ಬಬಲ್ ಒಳಗೆ ಹಲವು ಆಟಗಾರರಿಗೆ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಅರ್ನಿಷ್ಟಾವಧಿಗೆ ಮುಂದೂಡಲಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ಪರ ಪ್ಯಾಟ್ ಕಮಿನ್ಸ್ ಆಡಿದ್ದ 7 ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಪಡೆದಿದ್ದರು. ಇದೀಗ ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15ರವರಗೆ ನಡೆಸಲು ಬಿಸಿಸಿಐ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮೇ.29 ರಂದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಗಳು ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಬಹುದು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34k0sk7