ಕೋಲ್ಕೊತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ವಿಫಲವಾಗಿರುವ ಬಿಜೆಪಿಗೆ ಈಗ ಉತ್ತರ ಪ್ರದೇಶವನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ರಾಷ್ಟ್ರ ರಾಜಕಾರಣದಲ್ಲಿಉತ್ತರ ಪ್ರದೇಶ ನಿರ್ಣಾಯಕ ಪಾತ್ರ ವಹಿಸುತ್ತದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಗಳಿಸಿಕೊಟ್ಟಿರುವುದು ಉತ್ತರ ಪದೇಶ. ಹೀಗಾಗಿ ಮುಂದಿನ ಸಲ ಉತ್ತರ ಪ್ರದೇಶ ಉಳಿಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಬಿಂಬಿಸುವುದು, ಚುನಾವಣೆಗೆ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದು, ಅಭಿವೃದ್ಧಿ ಅಜೆಂಡಾ ಮತ್ತು ಹಿಂದುತ್ವದ ಮತಗಳ ಕ್ರೋಢೀಕರಣ ನೀತಿಯನ್ನು ಈವರೆಗೆ ಅನುಸರಿಸಿಕೊಂಡು ಬಂದಿತ್ತು. ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ತಂತ್ರ ಫಲ ನೀಡಿತ್ತು ಕೂಡ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಬಿಜೆಪಿಯ ಈ ತಂತ್ರ ನಡೆಯಲಿಲ್ಲ. ಮಮತಾ ಬ್ಯಾನರ್ಜಿ ಅವರು ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಜತೆಗೂಡಿ ರಚಿಸಿದ ವ್ಯೂಹವನ್ನು ಭೇದಿಸಲು ಬಿಜೆಪಿಗೆ ಸಾಧ್ಯವಾಗಲೇ ಇಲ್ಲ. ಇಲ್ಲಿ ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಬಿಜೆಪಿಯನ್ನು ಎದುರಿಸಿದವು. ಖುದ್ದು ಮಮತಾ ಬ್ಯಾನರ್ಜಿ ಅವರೇ ಎಲ್ಲ ಪಕ್ಷಗಳಿಗೂ ಪತ್ರ ಬರೆದು ಸಹಕಾರ ಕೋರಿದರು. ಕಾಂಗ್ರೆಸ್, ಎಡರಂಗ ಸಹ ಪರೋಕ್ಷವಾಗಿ ಟಿಎಂಸಿಗೆ ಸಹಕಾರ ನೀಡಿದವು. ಬಿಜೆಪಿ, ಟಿಎಂಸಿ ನಡುವೆ ನೇರ ಹಣಾಹಣಿ ನಡೆಯುವಂತೆ ನೋಡಿಕೊಳ್ಳುವ ತಂತ್ರಗಾರಿಕೆಯಿಂದಾಗಿ ಟಿಎಂಸಿ ಮತ್ತೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಯಿತು. ಉತ್ತರ ಪ್ರದೇಶದಲ್ಲಿಯೂ ಪ್ರತಿಪಕ್ಷಗಳು ಅದೇ ರೀತಿಯ ತಂತ್ರಗಾರಿಕೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಉತ್ತರ ಪ್ರದೇಶದ ಜತೆಯಲ್ಲಿಯೇ ಉತ್ತರಾಖಂಡ ವಿಧಾನಸಭೆಗೂ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಅಲ್ಲಿಯೂ ಸದ್ಯ ಬಿಜೆಪಿ ಆಡಳಿತ ಇದೆಯಾದರೂ, ಪಕ್ಷದ ಸ್ಥಿತಿ ಉತ್ತಮವಾಗಿಯೇನೂ ಇಲ್ಲ. ಹೀಗಾಗಿ ಉತ್ತರಾಖಂಡ ಉಳಿಸಿಕೊಳ್ಳುವುದೂ ಬಿಜೆಪಿಗೆ ಸವಾಲಾಗಿ ಪರಿಣಮಿಸಲಿದೆ. ಬಿಜೆಪಿಗೆ ಎಚ್ಚರಿಕೆ: ಬಿಜೆಪಿಯು 2019ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೂ ಆ ನಂತರ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಇದು ಬಿಜೆಪಿಗೆ ಎಚ್ಚರಿಕೆಯ ಸಂದೇಶವಾಗಿದೆ. 2019ರ ಬಳಿಕ ಬಿಜೆಪಿಯು ಜಾರ್ಖಂಡ್ ಕಳೆದುಕೊಂಡಿತು. ದಿಲ್ಲಿಯಲ್ಲಿಯೂ ಸರಕಾರ ರಚಿಸುವ ಕನಸು ಈಡೇರಲಿಲ್ಲ. ಮಹಾರಾಷ್ಟ್ರದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಅಲ್ಲಿ ಮಾಜಿ ಮಿತ್ರಪಕ್ಷವಾದ ಶಿವಸೇನೆಯು ಬಿಜೆಪಿಗೆ ಮುಟ್ಟಿನೋಡಿಕೊಳ್ಳುವಂತಹ ಏಟು ನೀಡಿತು. ಹರಿಯಾಣದಲ್ಲಿಯೂ ಪಕ್ಷದ ಸಾಧನೆ ಕುಸಿಯಿತು, ಆದರೆ ಜೆಜೆಪಿ ನೆರವಿನಿಂದ ಸರಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಶ್ಚಿಮ ಬಂಗಾಳದಲ್ಲಿಯೂ 2019 ಲೋಕಸಭೆ ಚುನಾವಣೆಯಲ್ಲಿ ಶೇ.40.25ರಷ್ಟು ಮತ ಗಳಿಸಿದ್ದ ಬಿಜೆಪಿಯು, ಈ ವಿಧಾನಸಭೆ ಚುನಾವಣೆಯಲ್ಲಿ ಶೇ.38.05ರಷ್ಟು ಮತ ಗಳಿಸಿದೆ.
from India & World News in Kannada | VK Polls https://ift.tt/3tiRrlz