ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಬಂತು ಸರಕಾರಿ ಕಿಟ್‌..!

ಎಂ.ಎನ್‌. ಅಹೋಬಳಪತಿ : ಇದೊಂದು ಪಾಸಿಟಿವ್‌ ಪ್ರಕರಣದ ಕತೆ. ಆ ಹೆಣ್ಣು ಮಗಳು ಸರಕಾರಿ ನೌಕರರೊಬ್ಬರ ಪತ್ನಿ. ಹೆಸರು ಕಲಾವತಿ. ನಗರದ ಸರಕಾರಿ ಕ್ವಾಟರ್ಸ್‌ನಲ್ಲಿ ಪತಿ, ಇಬ್ಬರು ಮಕ್ಕಳ ಜತೆ ವಾಸಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸುಸ್ತು, ಸಣ್ಣ ಪ್ರಮಾಣದಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಚಿಕ್ಕ ಮಕ್ಕಳು ಇದ್ದುದರಿಂದ ನಿರ್ಲಕ್ಷಿಸದೇ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಿದ್ದಾರೆ. ಮರುದಿನ ಟೆಸ್ಟ್‌ನ ವರದಿ ಕುರಿತು ಮೆಸೇಜ್‌ ಬಂದಿದೆ. 'ನಿಮ್ಮ ಕೋವಿಡ್‌ ವರದಿಯು ಪಾಸಿಟಿವ್‌ ಇದೆ. ನಿಮಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲು ಆಪ್ತ ಮಿತ್ರ ಸಂಖ್ಯೆಗೆ ಕರೆ ಮಾಡಿ, ಉಸಿರಾಟದ ತೊಂದರೆ ಇದ್ದರೆ 108ಕ್ಕೆ ಕರೆ ಮಾಡಿ' ಎನ್ನುವ ಮೆಸೇಜ್‌ ಬಂದಿದೆ. ಅದರ ಬೆನ್ನಲ್ಲೇ 'ನೀವು ಸೋಂಕಿತರಾಗಿರುವುದರಿಂದ ಮನೆಯಲ್ಲೇ ಇರಿ. ಕುಟುಂಬದ ಸದಸ್ಯರಿಂದ ಪ್ರತ್ಯೇಕವಾಗಿ ಇರಿ' ಎಂದು ತಿಳಿಸಿದೆ. ಆರೋಗ್ಯ ಮಿತ್ರದಿಂದ ಕರೆ ಮಾಡಿ ಸೋಂಕಿತರ ವಿಳಾಸ ಪಡೆದು ನಾಳೆ ಆರೋಗ್ಯ ಸಿಬ್ಬಂದಿ ನಿಮ್ಮನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಆಗ ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಊರಿಗೆ ಕಳುಹಿಸಿದ್ದಾರೆ. ನಿರ್ಲಕ್ಷ್ಯ ಮಾಡೋದು ಬೇಡ ಅಂತ ಪರಿಚಿತರೊಬ್ಬರ ಸಲಹೆ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ, ಐದು ದಿನಗಳ ಮಾತ್ರೆಗಳ ಕೋರ್ಸ್‌ ತೆಗೆದುಕೊಂಡಿದ್ದಾರೆ.ಮನೆಯಲ್ಲೇ ಐಸೋಲೇಟ್‌ ಆಗಿದ್ದಾರೆ. ಅದೃಷ್ಟವಶಾತ್‌, ಬೇರೇನೂ ಗಂಭೀರ ಸಮಸ್ಯೆ ಆಗದೇ ಅವರ ಆರೋಗ್ಯ ಸುಧಾರಿಸಿದೆ. ಪಾಸಿಟಿವ್‌ ಮೆಸೇಜ್‌ ಬಂದು ಐದನೇ ದಿನಕ್ಕೆ ವೈದ್ಯರು, ಸಿಬ್ಬಂದಿ ಜತೆ ಸೋಂಕಿತರ ಮನೆಗೆ ಬಂದಿದ್ದಾರೆ. ಹೊರಗೆ ಬಂದು ನೋಡಿದಾಗ ವೈದ್ಯರು, ಸಿಬ್ಬಂದಿ ಇದ್ದಾರೆ. ಮನೆಯವರು ನೀವು ಬಂದ ಉದ್ದೇಶ ಏನು? ಎಂದು ಕೇಳಿದ್ದಾರೆ. 'ನಿಮಗೆ ಚಿಕಿತ್ಸೆ ಕೊಡಬೇಕು. ಮನೆಯೊಳಗೆ ಬರಲು ಆಗಲ್ಲ. ಏಕೆಂದರೆ, ಪಿಪಿಇ ಕಿಟ್‌ ತಂದಿಲ್ಲ. ಹಾಗಾಗಿ, ನಾಲ್ಕು ಥರದ ಮಾತ್ರೆ ಇರುವ ಕಿಟ್‌ ಕೊಡುತ್ತೇವೆ' ಎಂದು ಹೇಳಿದ್ದಾರೆ. 'ನಾವು ಚಿಕಿತ್ಸೆ ಪಡೆದಿದ್ದೇವೆ. ಅದೃಷ್ಟವಶಾತ್‌ ಏನೂ ಸಮಸ್ಯೆ ಆಗಿಲ್ಲ' ಎಂದು ಚಿಕಿತ್ಸೆ ಪಡೆದ ವಿವರ ತಿಳಿಸಿದ್ದಾರೆ. ಆರೋಗ್ಯ ಸಿಬ್ಬಂದಿ ನಾವು ಬಂದ ಕೆಲಸ ಮುಗಿಯಿತು ಎಂದು ವಾಪಸಾಗಿದ್ದಾರೆ. ಖುದ್ದು ವಿಕ ಕಚೇರಿಗೆ ಫೋನ್‌ ಮಾಡಿ ತಮ್ಮ ಕತೆ ಹೇಳಿದ ಸೋಂಕಿತ ಮಹಿಳೆಯ ಪತಿ ಕರಿಸಿದ್ದಪ್ಪ ಮಾತನಾಡಿ, 'ಸೋಂಕಿತರನ್ನು ಇವರು ಹೇಗೆ ಟ್ರೀಟ್‌ ಮಾಡ್ತಾರೆ ಅನ್ನೋದಕ್ಕೆ ಇದು ಉದಾಹರಣೆ. ಇವರು ಒಂದು ಮಾತ್ರೆ ಕಿಟ್‌ ಕೊಡೋಕೆ ಐದು ದಿನ ಬೇಕಾಯ್ತಾ? ಕನಿಷ್ಟ ಇಂತಿಂತಹ ಮಾತ್ರೆ ತಗೊಳ್ಳಿ ಅಂತ ಜತೆಗೆ ಮೆಸೇಜ್‌ ಹಾಕಿದ್ರೂ ನಾವು ಖರೀದಿ ಮಾಡ್ತಿದ್ವಿ. ಇನ್ನು ಮುಂದಾದರೂ ಪಾಸಿಟಿವ್‌ ಮೆಸೇಜ್‌ ಜತೆ ಮಾತ್ರೆ ವಿವರನಾದ್ರೂ ತಿಳಿಸಿದರೆ, ಕನಿಷ್ಟ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಲು ಅನುಕೂಲ ಆಗುತ್ತದೆ' ಎಂದು ಹೇಳಿದರು. ಇದು ಒಂದು ಉದಾಹರಣೆ ಮಾತ್ರ. ಬಹಳಷ್ಟು ಕಡೆ ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರ ಪರಿಸ್ಥಿತಿ ಹೀಗಿದೆ. ಚಿತ್ರದುರ್ಗ ನಗರದ ಹೊರ ವಲಯದ ಗ್ರಾಮದ ಶಾರದಮ್ಮ 'ಪಾಸಿಟಿವ್‌ ವರದಿ ಬಂದ ನಂತರ ಆಶಾ ಕಾರ್ಯಕತೆ ಭೇಟಿ ಮಾಡಿ, ಮಾತ್ರೆ ಕೊಟ್ಟು ಬಂದಿದ್ದಾರೆ. ದೇಹಾರೋಗ್ಯದ ಸ್ಥಿತಿ ಪರಿಶೀಲನೆ ಒಮ್ಮೆಯೂ ಮಾಡಲಿಲ್ಲ. ನನಗಿನ್ನೂ ಸುಸ್ತು ಕಡಿಮೆಯಾಗಿಲ್ಲ. ವೈದ್ಯರು ಒಮ್ಮೆಯೂ ಭೇಟಿ ನೀಡಿಲ್ಲ' ಎಂದು ಹೇಳುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಸೋಂಕಿನ ತೀವ್ರತೆ ಏಕೆ ಹೆಚ್ಚುತ್ತಿದೆ ಎಂಬುದಕ್ಕೆ ಇಂತಹ ಹಲವಾರು ನಿದರ್ಶನ ಸಿಗುತ್ತಿವೆ.


from India & World News in Kannada | VK Polls https://ift.tt/3fcVax7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...