: ಇದೊಂದು ಕೊರೊನಾ ಕಾಲಘಟ್ಟದ ಅತಿ ಭೀಕರ ದುರಂತವೇ ಸರಿ. ತಂದೆ, ತಾಯಿಗೆ ಕೊರೊನಾ ಆಗಿದೆ ಎಂದು ಆರೈಕೆ ಮಾಡುವ ಹಂಬಲದಿಂದ ಹೆಂಡತಿ, ಮಕ್ಕಳನ್ನು ಮಹಾರಾಷ್ಟ್ರದಲ್ಲಿ ಬಿಟ್ಟು ಓಡೋಡಿ ಬಂದಿದ್ದ ಪುತ್ರನಿಗೂ ಸೋಂಕು ತಗುಲಿ ಇಡೀ ಬಲಿಯಾಗಿದೆ. ಈ ಘಟನೆ ನಡೆದದ್ದು ಕಲಬುರಗಿಯ ಮಹಾದೇವ ನಗರದಲ್ಲಿ. ಅಲ್ಲಿನ ನಿವಾಸಿಗಳಾದ ಶ್ರೀಪತಿರಾವ್ ಬಡಿಗೇರ್ (66), ಅವರ ಪತ್ನಿ ಮಹಾದೇವಿ ಬಡಿಗೇರ(58) ಮತ್ತು ಅವರ ಒಬ್ಬನೇ ಪುತ್ರ ಮೌನೇಶಕುಮಾರ(42) ಮೂವರೂ ಕೊರೊನಾಕ್ಕೆ ಬಲಿಯಾಗಿದ್ದಾರೆ. ದೂರದಲ್ಲಿದ್ದು ದೇವರಿಗೆ ಕೈ ಮುಗಿದು ಪತಿ, ಅತ್ತೆ, ಮಾವನನ್ನು ಪಾರು ಮಾಡು ಎಂದು ಬೇಡಿಕೊಂಡಿದ್ದ ಮೌನೇಶ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರು ಮಾತ್ರ ಜೀವಂತ ಉಳಿದಿದ್ದಾರೆ. ಅವರು ಕಲಬುರಗಿಗೆ ಬಂದಿದ್ದರೆ ಅವರೂ ಉಳಿಯುತ್ತಿರಲಿಲ್ಲ ಎನ್ನುವ ಸಂಬಂಧಿಕರ ಮಾತು ಕೊರೊನಾ ಸೋಂಕಿನ ಭೀಕರತೆ ಅರಿವು ಮಾಡಿಕೊಟ್ಟಂತಿತ್ತು. ಮೊದಲಿಗೆ ಮೌನೇಶ ಅವರ ತಾಯಿ ಮಹಾದೇವಿಗೆ ಸೋಂಕು ತಗುಲಿದಾಗ ತಂದೆಯಿಂದ ಆರೈಕೆ ಮಾಡುವುದು ಮತ್ತು ಓಡಾಡುವುದು ಕಷ್ಟ ಎಂದು ಭಾವಿಸಿ ಮಹಾರಾಷ್ಟ್ರದ ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತ ಪತ್ನಿ, ಮಕ್ಕಳೊಂದಿಗೆ ಜೀವಿಸುತಿದ್ದ ಪುತ್ರ ಮೌನೇಶ ಕಲಬುರಗಿಗೆ ಬಂದಿದ್ದಾರೆ. ಅಮ್ಮನ ಆರೈಕೆ ಮಾಡುತ್ತಿರುವಾಗಲೇ ಅಪ್ಪನಿಗೂ ಕೊರೊನಾ ಕಾಣಿಸಿಕೊಂಡಿದೆ. ಅವರನ್ನು ಜಿಮ್ಸ್ ದಾಖಲಿಸಿ ಚಿಕಿತ್ಸೆ ಕೊಡಿಸುವ ಗದ್ದಲದಲ್ಲಿ ಗೊತ್ತಿಲ್ಲದಂತೆ ಕೊರೊನಾ ಮೌನೇಶಗೂ ವಕ್ಕರಿಸಿದೆ. ಈಗ 15 ದಿನಗಳ ಹಿಂದೆ ಮೊದಲು ತಾಯಿ, ಬಳಿಕ ತಂದೆ, ಮಗ ಏಕಕಾಲಕ್ಕೆ ಮೃತ ಪಟ್ಟಿದ್ದಾರೆ. ಇದರಿಂದ ಇಡೀ ಕುಟುಂಬವೇ ಕೊರೊನಾಕ್ಕೆ ಬಲಿಯಾಗಿದೆ.
from India & World News in Kannada | VK Polls https://ift.tt/2RwV62v