ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಜುಲೈ 26 ಕ್ಕೆ ರಾಜ್ಯದಲ್ಲಿ ಬಿಎಸ್ವೈ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಮುಕ್ತಾಯಗೊಳ್ಳಲಿದೆ. ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಕೂಗು ಪಕ್ಷದ ಆಂತರಿಕ ವಲಯದಿಂದ ಕೇಳಿಬರುತ್ತಿದೆ. ಈ ಕುರಿತು ಪರ ಹಾಗೂ ವಿರೋಧ ಅಭಿಪ್ರಾಯಗಳು ಕಮಲ ಪಾಳಯದಲ್ಲಿದ್ದು ಅಂತಿಮ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ. ಒಂದು ವೇಳೆ ನಾಯಕತ್ವ ಬದಲಾವಣೆ ಆದಲ್ಲಿ ಹೈಕಮಾಂಡ್ ಮುಂದಿರುವ ಆಯ್ಕೆ ಯಾರು ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಆ ಆಯ್ಕೆಗಳು ಯಾವುವು? ಈ ಬಗ್ಗೆ ಮಾಹಿತಿ ಇಲ್ಲಿದೆ. ಪ್ರಹ್ಲಾದ್ ಜೋಷಿ ಪ್ರಹ್ಲಾದ್ ಜೋಷಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಬಿಜೆಪಿ ನಾಯಕರು. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿಗೂ ಪ್ರಧಾನಿ ನರೇಂದ್ರ ಮೋದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ, ಪಕ್ಷದ ಸಂಘಟನೆಯ ಹಿಡಿಯ ಹೊಂದಿರುವ ನಾಯಕರಾಗಿದ್ದಾರೆ. ಆರ್ಎಸ್ಎಸ್ ಹಿನ್ನಲೆ, ಪ್ರಬಲ ಹಿಂದುತ್ವದ ಹಿನ್ನಲೆಯನ್ನು ಇವರು ಹೊಂದಿದ್ದಾರೆ. ಪಕ್ಷ ಸಂಘಟನೆಯಲ್ಲಿ ಹಿಡಿತ ಹಾಗೂ ಹೈ ಕಮಾಂಡ್ ಜೊತೆ ಉತ್ತಮ ಭಾಂಧವ್ಯವನ್ನು ಜೋಷಿ ಹೊಂದಿದ್ದಾರೆ. ಇದೀಗ ಇವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಬಸವರಾಜ ಬೊಮ್ಮಾಯಿ ಬಸವರಾಜ ಬೊಮ್ಮಾಯಿ ರಾಜ್ಯ ಗೃಹ ಸಚಿವರು. ಬಿಜೆಪಿಯಲ್ಲಿ ಪ್ರಭಾವಿ ನಾಯಕರೂ ಹೌದು. ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಕಟ್ಟರ್ ಹಿಂದುತ್ವವಾದಿಯಲ್ಲ. ಆರ್ಎಸ್ಎಸ್ ಹಿನ್ನೆಲೆಯನ್ನು ಹೊಂದಿಲ್ಲ. ಹೀಗಿದ್ದರೂ ಆಪ್ತ ವಯಲದಲ್ಲಿದ್ದಾರೆ. ಆದರೆ ಇತರ ನಾಯಕರ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಸೌಮ್ಯ ಸ್ವಭಾವದ ಬಸವರಾಜ ಬೊಮ್ಮಾಯಿ ಸಹಕಾರಿ ಸಚಿವ, ನಿರಾವರಿ ಸಚಿವರಾಗಿಯೂ ಬಿಎಸ್ವೈ ಸಂಪುಟದಲ್ಲಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಅನಂತ್ ಕುಮಾರ್ ಹೆಗ್ಡೆ ಅನಂತ್ ಕುಮಾರ್ ಹೆಗ್ಡೆ ಮೂಲತಃ ಆರ್ಎಸ್ಎಸ್ ಹಿನ್ನೆಲೆಯನ್ನು ಹೊಂದಿರುವ ನಾಯಕ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡವರು. ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿರದಿದ್ದರೂ ತಮ್ಮ ಹೇಳಿಕೆಗಳಿಂದ ಹಾಗೂ ವಿವಾದಾತ್ಮಕ ನಡೆಗಳಿಂದ ಸುದ್ದಿಯಲ್ಲಿರುತ್ತಾರೆ. ಹೈಕಮಾಂಡ್ ಜತೆಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯವಾಗಿದ್ದು, ಬ್ರಾಹ್ಮಣರಾಗಿರುವ ಅನಂತ್ ಕುಮಾರ್ ಕಟ್ಟರ್ ಹಿಂದುತ್ವವಾದಿಯೂ ಹೌದು. ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕ ಲಿಂಗಾಯತ ಸಮುದಾಯದ ನಾಯಕರು. ರಾಜ್ಯ ಬಿಜೆಪಿಯಲ್ಲಿ ಉಂಟಾದ ರಾಜಕೀಯ ಪಲ್ಲಟದ ಸಂದರ್ಭದಲ್ಲಿ 2012 ರಿಂದ ಮೇ 2013 ರ ವರೆಗೆ ಮುಖ್ಯಮಂತ್ರಿಗಳಾಗಿದ್ದರು. 1999 ರಿಂದ 2004 ರ ವರೆಗೆ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದರು. ಮೃದು ವ್ಯಕ್ತಿತ್ವ ಹೊಂದಿರುವ ಶೆಟ್ಟರ್ ಹೈಕಮಾಂಡ್ ಜೊತೆಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಕೈಗಾರಿಕಾ ಸಚಿವರಾಗಿರುವ ಅವರು ಬಿಜೆಪಿಯಲ್ಲಿ ಪ್ರಮುಖ ಸ್ಥಾನಮಾನಗಳನ್ನು ಹೊಂದಿದ್ದಾರೆ. ಡಾ. ಸಿ.ಎನ್ ಅಶ್ವತ್ಥ ನಾರಾಯಣ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಒಕ್ಕಲಿಗ ಸಮುದಾಯದವರು. ತಮ್ಮ ಸೌಮ್ಯ ಸ್ವಭಾವದಿಂದ ಗುರುತಿಸಿಕೊಂಡವರು. ಶಾಸಕರಾಗಿದ್ದ ಅಶ್ವತ್ಥ ನಾರಾಯಣ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಬಿಎಸ್ವೈ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಆಗಿರುವ ಅವರು ಪಕ್ಷದಲ್ಲೂ ಉತ್ತಮ ವರ್ಚಸ್ಸು ಹೊಂದಿದ್ದಾರೆ. ಜೊತೆಗೆ ಹೈಕಮಾಂಡ್ ಜೊತೆಗೆ ಉತ್ತಮ ಸಂಪರ್ಕ ಹೊಂದಿರುತ್ತಾರೆ. ಸದ್ಯ ಈ ಎಲ್ಲಾ ಹೆಸರುಗಳು ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಆದರೆ ಒಂದು ವೇಳೆ ನಾಯಕತ್ವ ಬದಲಾವಣೆ ಆದರೆ ಈ ಪೈಕಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬವುದು ಸದ್ಯದ ಕುತೂಹಲ.
from India & World News in Kannada | VK Polls https://ift.tt/3wAxJnu