ಹೊಸದಿಲ್ಲಿ: ಟೀಮ್ ಇಂಡಿಯಾದ ಸ್ಪರ್ಧಾತ್ಮಕತೆ ಹಾಗೂ ಜಾಗತಿಕ ಕ್ರಿಕೆಟ್ನ ಅತ್ಯುತ್ತಮ ತಂಡಗಳಲ್ಲಿ ಭಾರತ ಒಂದಾಗಲು ನಾಯಕ ವಿರಾಟ್ ಕೊಹ್ಲಿಯೇ ಪ್ರಮುಖ ಕಾರಣ ಎಂದು ಮಾಜಿ ವೇಗಿ ರಿಚರ್ಡ್ ಹ್ಯಾಡ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು 'ಭಾವೋದ್ರಿಕ್ತ ಮತ್ತು ಸ್ಪರ್ಧಾತ್ಮಕ' ಕ್ರಿಕೆಟಿಗ ಎಂದು ಕರೆದ ಹ್ಯಾಡ್ಲಿ, ಟೀಮ್ ಇಂಡಿಯಾ ನಾಯಕ ತಮ್ಮ ಮತ್ತು ತಮ್ಮ ತಂಡಕ್ಕೆ ಯಶಸ್ಸನ್ನು ತಂದುಕೊಡುವ 'ಬಲವಾದ ಇಂಗಿತ'ವನ್ನು ಹೊಂದಿದ್ದಾರೆ ಎಂದು ಹೇಳಿದರು. "ವಿರಾಟ್ ಕೊಹ್ಲಿಯು ತಮ್ಮ ಮತ್ತು ತಂಡದ ಯಶಸ್ಸನ್ನು ಸಾಧಿಸಬೇಕೆಂಬ ಬಲವಾದ ಇಂಗಿತವನ್ನು ಹೊಂದಿರುವ ಅತ್ಯಂತ ಭಾವೋದ್ರಿಕ್ತ ಮತ್ತು ಸ್ಪರ್ಧಾತ್ಮಕ ಕ್ರಿಕೆಟಿಗ ಎಂದು ನಾನು ಭಾವಿಸುತ್ತೇನೆ. ಅವರು ಹೆಮ್ಮೆಯ ವ್ಯಕ್ತಿ ಮತ್ತು ವಿಶ್ವ ದರ್ಜೆಯ ಆಟಗಾರರಾಗಿದ್ದು, ಅವರನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ಭಾರತ ತಂಡ ಗೆಲುವಿಗಾಗಿ ಅವರ ಮೇಲೆ ಒತ್ತಡ ಮತ್ತು ನಿರೀಕ್ಷೆಗಳು ಅಗಾಧವಾಗಿವೆ," ಎಂದು ತಿಳಿಸಿದರು. "ಅವರನ್ನು(ಕೊಹ್ಲಿ) ಆರಾಧಿಸುವ ಕೋಟ್ಯಾಂತರ ಭಾರತೀಯ ಅಭಿಮಾನಿಗಳು ಇದ್ದಾರೆ, ಇದು ಅವರ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಭಾರತೀಯ ಕ್ರಿಕೆಟ್ ಸ್ಪರ್ಧಾತ್ಮಕವಾಗಿ ಉಳಿದಿದೆ ಮತ್ತು ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ವಿರಾಟ್ ಕೊಹ್ಲಿ ಮೇಲಿದೆ," ಎಂದರು. ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಕೆಟ್ಟ ಗಳಿಗೆ ಇದ್ದೇ ಇರುತ್ತದೆ. ಹಾಗಾಗಿ, ಅಭಿಮಾನಿಗಳು ತಮ್ಮ-ತಮ್ಮ ಹೀರೋಗಳನ್ನು ಬೆಂಬಲಿಸಬೇಕೆಂದು 431 ಟೆಸ್ಟ್ ಹಾಗೂ 158 ಓಡಿಐ ವಿಕೆಟ್ಗಳನ್ನು ಪಡೆದಿರುವ ನ್ಯೂಜಿಲೆಂಡ್ ಮಾಜಿ ವೇಗಿ ಹೇಳಿದರು. "ಚಾಂಪಿಯನ್ ಕೂಡ ಸಮಯ ಬಂದಾಗ ವೈಫಲ್ಯ ಅನುಭವಿಸುತ್ತಾರೆ ಹಾಗೂ ನಾವೆಲ್ಲರೂ ಮನುಷ್ಯರು ಎಂಬುದನ್ನು ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ವಿಶ್ವದ ಯಾವುದೇ ಕ್ರಿಕೆಟಿಗ ಶೂನ್ಯಕ್ಕೆ ಔಟ್ ಆಗಬಹುದು ಹಾಗೂ ವಿಕೆಟ್ ಪಡೆಯದೇ ಇರಬಹುದು. ಇದನ್ನು ನಾವು ವೈಫಲ್ಯ ಎಂದು ಕರೆಯುತ್ತೇವೆ. ಆದರೆ, ಆಟಗಾರ ಯಶಸ್ವಿಯಾದಾಗ ಎದುರಾಳಿ ತಂಡವನ್ನು ಹೊರತುಪಡಿಸಿ ಪ್ರತಿಯೊಬ್ಬರು ಖುಷಿಯಾಗಿರುತ್ತಾರೆ," ಎಂದು ಹ್ಯಾಡ್ಲಿ ತಿಳಿಸಿದರು. ಈಗಾಗಲೇ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ ಹಾಗೂ ನಾಯಕನಾಗಿ ಮೊದಲನೇ ಐಸಿಸಿ ಪ್ರಶಸ್ತಿ ಗೆಲುವಿಗಾಗಿ ಎದುರು ನೋಡುತ್ತಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿತ್ತು. "ಉನ್ನತ ಮಟ್ಟದ ಎಲ್ಲಾ ಕ್ರೀಡೆಗಳು ಸ್ಪರ್ಧಿಸುವ ಬಗ್ಗೆಯೇ ಇದೆ. ಇದು ಪಂದ್ಯವನ್ನು ಗೆಲ್ಲಲು ಮತ್ತು ಎದುರಾಳಿಯ ಮೇಲೆ ಲಾಭವನ್ನು ಗಳಿಸುವ ಮಾರ್ಗವನ್ನು ಕಂಡುಕೊಳ್ಳುತ್ತದೆ. ಆಟಗಾರ ಅಥವಾ ತಂಡದಿಂದ ಆಟವಾಡುವಿಕೆ ಎಲ್ಲೆಯ ರೇಖೆ ಇರುತ್ತದೆ. ಅಂಪೈರ್ಗಳು ಮತ್ತು ಮ್ಯಾಚ್ ರೆಫರಿಗಳು ಈ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ ಮತ್ತು ಏನಾದರೂ ಸ್ವೀಕಾರಾರ್ಹವಲ್ಲದಿದ್ದರೆ ದಂಡ ವಿಧಿಸುತ್ತಾರೆ, " ಎಂದು ರಿಚರ್ಡ್ ಹ್ಯಾಡ್ಲಿ ತಿಳಿಸಿದರು. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಜೂನ್ 18 ರಿಂದ 22ರವರೆಗೆ ಇಂಗ್ಲೆಂಡ್ನ ಸೌತಾಮ್ಟನ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಣಾಹಣಿಯಲ್ಲಿ ಸೆಣಸಲಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ತಂಡ, ಇಂಗ್ಲೆಂಡ್ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fnNyYE