ಕೊರೊನಾ ಸೋಂಕು ತರುವ ಸಾರ್ಸ್-ಸಿಒವಿ-2 ವೈರಾಣು ಹೆಚ್ಚಾಗಿ ಗಾಳಿಯ ಮೂಲಕವೇ ಪಸರಿಸುತ್ತದೆ. ಹೀಗಾಗಿ ವೇಗವಾಗಿ ಹಬ್ಬುತ್ತಿರುವ ವೈರಾಣು ನಿಯಂತ್ರಿಸಿ, ಜನರನ್ನು ರಕ್ಷಿಸುವಲ್ಲಿ ನಿರ್ಬಂಧಗಳು, ಮುನ್ನೆಚ್ಚರಿಕಾ ಕ್ರಮಗಳು ವಿಫಲಗೊಳ್ಳುತ್ತಿವೆ ಎಂದು ಖ್ಯಾತ ವೈದ್ಯಕೀಯ ಜರ್ನಲ್ 'ಲ್ಯಾನ್ಸೆಟ್' ತನ್ನ ವರದಿಯಲ್ಲಿ ಹೇಳಿದೆ. ಬ್ರಿಟನ್, ಅಮೆರಿಕ ಮತ್ತು ಕೆನಡಾದ ಆರು ತಜ್ಞ ವೈದ್ಯರು ಕೊರೊನಾ ಪ್ರಸರಣ ಬಗ್ಗೆ ಆಳವಾದ ನಡೆಸಿ, ಗಾಳಿಯಿಂದಲೇ ವೈರಾಣು ಹೆಚ್ಚಾಗಿ ಹರಡುತ್ತಿರುವ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಾಕ್ಷತ್ರ್ಯಗಳನ್ನು ಸಂಗ್ರಹಿಸಿದ್ದಾರೆ. ಒಂದೇ ದೊಡ್ಡ ಸೋಂಕಿನ ಹನಿಯಾಗಿ ವೈರಾಣು ಸಮೂಹ ಹರಡುತ್ತದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಆದರೆ ಸಣ್ಣ ಸಣ್ಣ ಕಣಗಳಾಗಿ ವೈರಾಣುಗಳು ಗಾಳಿಯಲ್ಲಿ ತೇಲುವ ಬಗ್ಗೆ ಸಾಕ್ಷ್ಯಗಳಿವೆ ಎಂದು ಕೊಲೊರಾಡೊ ಬೌಲ್ಡರ್ ವಿಶ್ವವಿದ್ಯಾಲಯದ ರಾಸಾಯನಿಕ ತಜ್ಞ ಜೋಸ್-ಲುಯಿಸ್ ಜಿಮಿನೆಜ್ ಹೇಳಿದ್ದಾರೆ. ತಜ್ಞ ಜಿಮಿನೆಜ್ ಅವರ ಅಧ್ಯಯನವನ್ನು ಪರಿಶೀಲಿಸಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ತಜ್ಞ ವೈದ್ಯರ ತಂಡವೊಂದು ಕೂಡ ಗಾಳಿಯೇ ಕೊರೊನಾ ವೈರಾಣು ಹರಡಲು ಮುಖ್ಯ ಮಾಧ್ಯಮ ಎಂದಿದೆ. ''ಸಾಮೂಹಿಕ ಕಾರ್ಯಕ್ರಮಗಳಲ್ಲಿ ಒಬ್ಬರನ್ನು ಮತ್ತೊಬ್ಬರು ಮುಟ್ಟುವುದರಿಂದ ಅಥವಾ ಹತ್ತಿರದಲ್ಲಿನಿಂತುಕೊಳ್ಳುವುದರಿಂದ ಮಾತ್ರವೇ ಕೊರೊನಾ ಪ್ರಸರಣವಾಗುತ್ತಿದೆ ಎಂದು ಹೇಳಲಾಗಲ್ಲ. ತೀವ್ರಗತಿ ಅಥವಾ ಎರಡನೇ ಅಲೆಯ ಕೊರೊನಾ ಕ್ಷಿಪ್ರ ಪ್ರಸರಣಕ್ಕೆ ಗಾಳಿಯೇ ವಾಹಕವಾಗಿದೆ,'' ಎಂದು ಈ ತಂಡ ತಿಳಿಸಿದೆ. ಗಾಳಿಯೇ ಮಾಧ್ಯಮ ಎಂಬುದಕ್ಕೆ ಪುರಾವೆಗಳು 1. ಮನೆ ಅಥವಾ ನಾಲ್ಕು ಗೋಡೆಗಳ ನಡುವೆ ಇರುವವರಲ್ಲಿ ಸೋಂಕು ಹರಡುತ್ತಿರುವುದು ಕಡಿಮೆ ಪ್ರಮಾಣದಲ್ಲಿದೆ. 2. ಹೊರಗಿನ ವಾತಾವರಣಕ್ಕೆ ಹೆಚ್ಚು ಭೇಟಿ ಕೊಟ್ಟವರಲ್ಲಿ ಪ್ರಸರಣ ಪ್ರಮಾಣ ಅಧಿಕವಾಗಿದೆ. 3. ಸೀನುವಿಕೆ, ಕೆಮ್ಮುವಿಕೆ ಇಲ್ಲದ ಕಡೆಯಲ್ಲಿ ಕೂಡ ಸೋಂಕು ಹಬ್ಬುತ್ತಿರುವುದು ಗಾಳಿಯ ಮೂಲಕ ಪ್ರಸರಣಕ್ಕೆ ನಿದರ್ಶನವಾಗಿದೆ. 4. ಮನೆಗಳಲ್ಲಿ ಸಂಚಾರ (ವೆಂಟಿಲೇಷನ್) ಕಡಿಮೆ ಇದ್ದರೆ ಸೋಂಕು ಹರಡಿರುವುದು ದೃಢಪಟ್ಟಿದೆ. 5. ಸೀನು, ಕೆಮ್ಮು ಇದ್ದರೂ ಅದರ ಕಣಗಳು ಗಾಳಿಯಲ್ಲಿಹರಡದಂತೆ ಪಿಪಿಇ ಕಿಟ್ ಧರಿಸಿದ ವ್ಯಕ್ತಿಗಳಿಂದ ಸೋಂಕು ಹರಡಿದ್ದು ಎಲ್ಲಿಯೂ ದೃಢಪಟ್ಟಿಲ್ಲ. 6. ಕೊರೊನಾ ಸೋಂಕಿತರು ಇದ್ದ ಕೊಠಡಿಯಲ್ಲಿಗಾಳಿಯಲ್ಲಿಯೂ ಕೊರೊನಾ ಸೋಂಕಿನ ಕಣಗಳು ಕಂಡುಬಂದಿರುವುದು ಗಾಳಿಯಿಂದಲೂ ಸೋಂಕು ಪ್ರಸರಣವಾಗುತ್ತದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. 7. ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಏರ್ ಫಿಲ್ಟರ್ಗಳಲ್ಲಿಯೂ ಸೋಂಕು ಇರುವುದು ಅಧ್ಯಯನದ ವೇಳೆ ದೃಡಪಟ್ಟಿದೆ. 8. ಜಾನುನಾರುಗಳ ಮೇಲೆ ಪ್ರಯೋಗ ನಡೆಸಿದ ಸಂದರ್ಭದಲ್ಲಿಯೂ ಗಾಳಿಯಿಂದ ಸೋಂಕು ಹರಡುವುದು ಸಾಬೀತಾಗಿದೆ. 9. ಸೋಂಕಿತ ವ್ಯಕ್ತಿಯ ಸನಿಹದಲ್ಲಿದ್ದು, ಯಾವುದೇ ಸ್ಪರ್ಶ ಮಾಡದೇ ಇರುವ ವ್ಯಕ್ತಿಗಳಿಗೂ ಸೋಂಕು ತಗುಲಿದೆ. 10. ಗಾಳಿಯಿಂದ ಸೋಂಕು ಹರಡುವುದಿಲ್ಲ ಎಂದು ಖಚಿತವಾಗಿ ಹೇಳುವುದಕ್ಕೆ ಇದುವರೆಗೆ ಯಾವುದೇ ಆಧಾರ ಲಭ್ಯವಾಗಿಲ್ಲ! ಜೂನ್ ವೇಳೆಗೆ ನಿತ್ಯ 2,320 ಸಾವು ದೇಶದಲ್ಲಿಜೂನ್ ಮೊದಲ ವಾರದ ವೇಳೆಗೆ ಕೊರೊನಾದಿಂದ ಸಂಭವಿಸುವ ದೈನಂದಿನ ಸಾವುಗಳ ಸಂಖ್ಯೆ 2,320 ಎಂದು ಲ್ಯಾನ್ಸೆಟ್ನ 'ಭಾರತೀಯ ಕಾರ್ಯಪಡೆ' ಎಚ್ಚರಿಸಿದೆ. ''ಸೋಂಕಿತರ ಸಂಖ್ಯೆ ಜಾಸ್ತಿಯಾದಂತೆ ಸಾವಿನ ಪ್ರಮಾಣವೂ ಗಣನೀಯವಾಗಿ ಹೆಚ್ಚಲಿದೆ. ಸರಾಸರಿ 1,750ರ ಆಸುಪಾಸು ಇರುವ ಸಾವಿನ ಸಂಖ್ಯೆ ಜೂನ್ ವೇಳೆಗೆ ದಿಢೀರ್ ಏರಿಕೆ ಕಾಣಲಿದೆ. ಹೆಚ್ಚಿನ ಪ್ರಕರಣಗಳು ಲಕ್ಷ್ಮಣರಹಿತ ಅಥವಾ ಸೌಮ್ಯ ಸ್ವರೂಪದ ಲಕ್ಷಣ ಹೊಂದಿರುವಂತಾಗಿವೆ,'' ಎಂದು ಕಾರ್ಯಪಡೆಯ ವರದಿ ತಿಳಿಸಿದೆ. ''ಒಳಾಂಗಣ ಸಭಾಂಗಣಗಳಲ್ಲಿಹತ್ತು ಜನಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರದಂತೆ ನಿರ್ಬಂಧ ವಿಧಿಸಬೇಕು. ಮುಂದಿನ ಎರಡು ತಿಂಗಳ ಕಾಲ ಎಲ್ಲಬಗೆಯ ಹೊರಾಂಗಣ ಕಾರ್ಯಕ್ರಮಗಳು ಮಾತ್ರವಲ್ಲದೆ ಒಳಾಂಗಣ ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು,'' ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಈಗ ಎರಡನೇ ಅಲೆ ತೀವ್ರಗೊಳ್ಳಲು ಚುನಾವಣೆ, ಕುಂಭಮೇಳದಂತಹ ಬೃಹತ್ ಕಾರ್ಯಕ್ರಮಗಳು ಸಹ ಕಾರಣವಾಗಿವೆ ಎಂದೂ ವರದಿ ತಿಳಿಸಿದೆ.
from India & World News in Kannada | VK Polls https://ift.tt/3tzrDTm