: ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಹವ್ಯಾಸ ರೂಢಿಸಿಕೊಂಡಿದ್ದ ಯುವಕನೊಬ್ಬನಿಗೆ ಅದೇ ಹವ್ಯಾಸ ಪ್ರಾಣಕ್ಕೆ ಎರವಾದ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ನೇಜಿಕಾರ್ ಎಂಬಲ್ಲಿ ಶನಿವಾರ ನಡೆದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಕಾಲೊನಿ ನಿವಾಸಿ ಎಂ. ಆರ್. ಮುಸ್ತಫಾ ಆಲಿಯಾಸ್ ಸ್ನೇಕ್ ಮುಸ್ತಾ ಎಂಬವರೇ ಹಾವು ಕಚ್ಚಿ ಮೃತಪಟ್ಟ ಯುವಕ. ವೃತ್ತಿಯಲ್ಲಿ ಆಟೋ ಚಾಲಕರಾದ ಇವರು, ಹಾವು ಹಿಡಿಯುವ ಹವ್ಯಾಸ ಬೆಳೆಸಿಕೊಂಡಿದ್ದು, ಅದೆಷ್ಟೋ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು. ದುರಂತವೆಂದರೆ ಇವರ ಈ ಹವ್ಯಾಸವೇ ಪ್ರಾಣಕ್ಕೆ ಮುಳುವಾಗಿದೆ. ಕೋಳಿ ಗೂಡಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ನಾಗರ ಹಾವನ್ನು ರಕ್ಷಿಸಲು ಅವರು ಯತ್ನಿಸುತ್ತಿದ್ದಾಗ ಆ ಹಾವು ಮುಸ್ತಫಾ ಅವರ ಎರಡೂ ಕೈಗಳಿಗೆ ಕಚ್ಚಿದ್ದು ತೀವ್ರ ಅಸ್ವಸ್ಥಗೊಂಡ ಮುಸ್ತಫಾ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ನೇಜಿಕಾರಿನ ಮನೆಯೊಂದಕ್ಕೆ ನಾಗರಹಾವು ಬಂದ ಮಾಹಿತಿ ಸಿಕ್ಕ ತಕ್ಷಣ ಸ್ನೇಕ್ ಮುಸ್ತಾ ಅಲ್ಲಿಗೆ ತೆರಳಿದ್ದರು. ಹೋಗಿ ನೋಡಿದಾಗ ಹಾವು ಮನೆಯ ಬಳಿ ಕೋಳಿ ಗೂಡಿನಲ್ಲಿತ್ತು. ಕಬ್ಬಿಣದ ಸರಳುಗಳಿಂದ ಮಾಡಿದ ಆಯತಾಕಾರದ ಬೋನಿನಂಥ ಗೂಡು ಇದಾಗಿತ್ತು. ಹಾವನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಹಾವು ಇನ್ನಷ್ಟು ಒಳಕ್ಕೆ ಇಳಿದಿದ್ದು, ಗೂಡಿನಿಂದ ಹೊರ ಬರಲು ಯತ್ನಿಸಿದಾಗ ಬಲೆಯಲ್ಲಿ ಹಾವಿನ ಹೆಡೆಯ ಭಾಗ ಸಿಕ್ಕಿ ಹಾಕಿಕೊಂಡಿತು. ಕತ್ತರಿಯಿಂದ ಅದನ್ನು ಕೊಯ್ಯುತ್ತಾ ನಿಧಾನವಾಗಿ ಬಿಡಿಸುತ್ತಿದ್ದಾಗ ಹಠಾತ್ತನೆ ಮುಸ್ತಾ ಅವರ ಹಿಡಿತ ಸಡಿಲಗೊಂಡ ಕಾರಣ ತಕ್ಷಣ ಹಾವು ಅವರ ಮುಂಗೈಗೆ ಕಚ್ಚಿತು. ಕೈ ಕೊಡವಿಕೊಳ್ಳುತ್ತಿದ್ದಂತೆ ಇನ್ನೊಂದು ಕೈಗೂ ಕಚ್ಚಿತು. ತಕ್ಷಣ ಅವರನ್ನು ವಾಹನದಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಪ್ರಾಣ ಪಕ್ಚಿ ಹಾರಿ ಹೋಗಿತ್ತು. ನಾಗರ ಹಾವನ್ನು ಅವರು ಸಲೀಸಾಗಿ ಹಿಡಿಯುವುದರಲ್ಲಿದ್ದರು. ಅಷ್ಟರಲ್ಲಿ ಅದು ಗೂಡಿನ ಆಳಕ್ಕೆ ನುಸುಳಿ ಹೋಯಿತು. ಮಾತ್ರವಲ್ಲದೆ ಬಲೆಯಲ್ಲಿ ಸಿಲುಕಿ ಒದ್ದಾಡಿತು. ಈ ಸಂದರ್ಭ ಮುಸ್ತಾ ಅವರಿಗೆ ಯಾರ ನೆರವೂ ಸಿಗಲಿಲ್ಲ. ಒಂದು ಕೈಯ್ಯಲ್ಲಿ ಹಾವಿನ ಹೆಡೆಯನ್ನು ಅಮುಕಿ ಹಿಡಿದುಕೊಂಡು ಮತ್ತೊಂದು ಕೈಯ್ಯಲ್ಲಿ ಸರಿಗೆಯನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರೇ ಹೊರತು ಯಾರೂ ಕೂಡಾ ಸಹಾಯಕ್ಕೆ ಬರಲಿಲ್ಲ. ಕೆಲವರಂತೂ ಈ ದೃಶ್ಯ ನೋಡುತ್ತಾ ನಗುತ್ತಾ ಕಮೆಂಟ್ ಮಾಡುತ್ತಿರುವುದು ಕೇಳುತ್ತಿದೆ. ವಿಷಪೂರಿತ ಹಾವನ್ನು ಹಿಡಿಯುವುದು ಅತ್ಯಂತ ಅಪಾಯಕಾರಿ ಕೆಲಸವಾದರೂ ಅದನ್ನು ನಿರ್ವಹಿಸುತ್ತಿದ್ದ ಒಬ್ಬ ತರುಣನ ರಿಸ್ಕೀ ಕೆಲಸವನ್ನು ಇತರರು ಸರಳವಾಗಿ ಪರಿಗಣಿಸಿದ್ದರೆಂಬುದು ವೀಡಿಯೋ ನೋಡುವಾಗ ಗೊತ್ತಾಗುತ್ತಿದೆ. ಪರೋಪಕಾರಕ್ಕಾಗಿ ಹಾವು ಹಿಡಿದು ದೂರ ಬಿಟ್ಟು ಬರುತ್ತಿದ್ದ ತರುಣ, ರಿಕ್ಷಾದಲ್ಲಿ ದುಡಿದು ಬದುಕು ಕಟ್ಟುತ್ತಿದ್ದ ತರುಣ ಅದೇ ತನ್ನ ಪರೋಪಕಾರ ಹವ್ಯಾಸದಲ್ಲೇ ಪ್ರಾಣ ಬಿಟ್ಟಿರುವುದು ಮಾನವ ಹೃದಯವನ್ನೇ ಕಲಕುವಂತೆ ಮಾಡಿದೆ. ಮಹಮ್ಮದ್ ಮುಸ್ತಾಫಾ ಪ್ರಾಣಿ ಪ್ರಿಯರಾಗಿದ್ದು, ಪಾರಿವಾಳ, ಲವ್ ಬಡ್ಸ್೯ , ಆಡು, ಕೋಳಿ ಸಾಕುತ್ತಿದ್ದರು. ವಿಷದ ಹಾವುಗಳನ್ನು ಬರಿಗೈಯ್ಯಲ್ಲೆ ಹಿಡಿದು ಅರಣ್ಯಕ್ಕೆ ಬಿಡುತ್ತಿದ್ದರು. ಇಷ್ಟರಲ್ಲೆ ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಯಾರಾದರೂ ಅಪಘಾತಗೊಂಡು ರಸ್ತೆಯಲ್ಲಿ ಬಿದ್ದಿದ್ದರೆ ತನ್ನ ರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸುತ್ತಿದ್ದರು. ಪ್ರತಿಫಲಾಪೇಕ್ಷೆ ಇಲ್ಲದೆ ಈ ಕೆಲಸ ಮಾಡುತ್ತಿದ್ದರು. ಸಣ್ಣ ಪ್ರಾಯದಲ್ಲೇ ಇಂಥ ಪರೋಪಕಾರಿ ಯುವಕನ ದುರ್ಮರಣ ಉಂಟಾಗಿದ್ದು, ನಾಗರಿಕ ಸಮಾಜ ಮಮ್ಮಲ ಮರುಗುತ್ತಿದೆ. ಊರಿನ ತುಂಬ ಜನ ಇದೇ ವಿಷಯ ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ, ಸ್ನೇಕ್ ಮುಸ್ತಾನ ಪ್ರಾಣಕ್ಕೆ ಕಾರಣವಾದ , ಅವರ ಬದುಕಿನ ಕೊನೆಯ ಸ್ನೇಕ್ ಆಪರೇಶನ್ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
from India & World News in Kannada | VK Polls https://ift.tt/3ereohd