ಬಿ. ಲೋಕೇಶ್ ಚಳ್ಳಕೆರೆ: ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು, ವಿದ್ಯುತ್ ಸಂಪರ್ಕ ಹಾಗೂ ಬೀದಿದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ಬೆಸ್ಕಾಂಗೆ ಬಾಕಿ ಬೆಳೆಯುತ್ತಲೇ ಇದ್ದು, ತಾಲೂಕಿನ 40 ಗ್ರಾಪಂಗಳಿಂದ ಬರೋಬ್ಬರಿ 4.77 ಕೋಟಿ ರೂ. ಪಾವತಿಯಾಗಬೇಕಿದೆ. ಆದರೆ, ಸಾರ್ವಜನಿಕರು ಎರಡ್ಮೂರು ತಿಂಗಳು ಕರೆಂಟ್ ಬಿಲ್ ಕಟ್ಟದಿದ್ದರೆ ಬೆಸ್ಕಾಂ ಸಿಬ್ಬಂದಿ ಎರಡು ತಿಂಗಳು ನೋಡಿ ಮನೆಯ ಸಂಪರ್ಕವನ್ನೇ ತೆಗೆಯುತ್ತಾರೆ. ಆದರೆ, ಗ್ರಾಪಂಗಳು ವರ್ಷ ಕಳೆದರೂ ಹಣ ಪಾವತಿ ಮಾಡದೆ ಕೋಟಿಗಟ್ಟಲೇ ಬಾಕಿ ಉಳಿಸಿಕೊಂಡಿವೆ. ಇಲ್ಲಿ ಸಾರ್ವಜನಿಕರಿಗೊಂದು ನ್ಯಾಯವೇ, ಪಂಚಾಯಿತಿಗಳಿಗೊಂದು ನ್ಯಾಯವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ವಿದ್ಯುತ್ ಬಾಕಿ ಪಾವತಿಸಿ ಎಂದು ಪದೆ ಪದೇ ಬೆಸ್ಕಾಂ ಎಲ್ಲ ಗ್ರಾಪಂಗಳಿಗೆ ನೋಟಿಸ್ ನೀಡುತ್ತಿದೆ. ಆದರೂ ಪಂಚಾಯಿತಿಗಳು ಸಕಾಲದಲ್ಲಿ ಚುಕ್ತಾ ಮಾಡುತ್ತಿಲ್ಲ. ಇದನ್ನು ಮನಗಂಡ ಸರಕಾರ ಹಣಕಾಸು ಯೋಜನೆಯಲ್ಲಿ ಪಂಚಾಯಿತಿಗಳಿಗೆ ಬರುವ ಅನುದಾನದಲ್ಲಿ ಶೇ.25ರಷ್ಟು ವಿದ್ಯುತ್ ಬಿಲ್ ಪಾವತಿಸಬೇಕೆಂದು ಪ್ರತ್ಯೇಕವಾಗಿ ಎಸ್ಕ್ರೀ ಖಾತೆಯನ್ನು ಎಸ್ಬಿಐನಲ್ಲಿ ತೆರೆದು ಪಾವತಿಸುವ ಯೋಜನೆ ಜಾರಿಗೊಳಿಸಿತ್ತು. ಇತ್ತ ಕೇಂದ್ರ ಸರಕಾರ ನೀಡುವ ಹಣಕಾಸು ಯೋಜನೆಯ ಪೂರ್ತಿ ಅನುದಾನವನ್ನು ಗ್ರಾಪಂಗಳಿಗೆ ಬಿಡುಗಡೆ ಮಾಡಿ ಅಲ್ಲಿಂದ ಬಳಕೆ ಮಾಡಿಕೊಳ್ಳಬೇಕು. ಪ್ರತ್ಯೇಕ ಖಾತೆಗೆ ಹಣ ವರ್ಗಾಯಿತ್ತಿಲ್ಲ ಎಂಬ ಸೂಚನೆಯಿಂದ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಿಂದ ಒಂದೊಂದು ಗ್ರಾಪಂಗಳಿಗೆ 45ರಿಂದ 70 ಲಕ್ಷ ರೂ.ವರೆಗೆ ಬರುವ ಅನುದಾನದಲ್ಲಿ ಶೇ.25ರಷ್ಟು ವಿದ್ಯುತ್ಗೆ ಮೀಸಲು ಇರಿಸಿ, ಉಳಿದ ಶೇ.75ರಷ್ಟು ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ ಖರ್ಚು ಮಾಡಬೇಕು. ಆದರೆ, ಬೆಸ್ಕಾಂಗೆ ಪಾವತಿಸುವ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುವುದು ಮತ್ತು ಕರೆಂಟ್ ಬಳಕೆ ಸರಿಯಾದ ನಿರ್ವಹಣೆ ಇಲ್ಲದೆ ಬಾಕಿ ಮೊತ್ತ ವಿದ್ಯುತ್ ಮೀಟರ್ನಂತೆ ಏರುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿವ ನೀರು ಪೂರೈಕೆ ವಿದ್ಯುತ್ ಸಂಪರ್ಕ ಪಡೆದು ಬೋರ್ವೆಲ್ ಬತ್ತಿದ ಮೇಲೂ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕೆಂಬ ಪತ್ರ ಪಂಚಾಯಿತಿಗಳಿಂದ ಬೆಸ್ಕಾಂಗೆ ಹೋಗುವುದಿಲ್ಲ. ರಾತ್ರಿಹೊತ್ತು ಮಾತ್ರ ಬೀದಿ ದೀಪ ಉರಿಯಬೇಕು ಎಂಬ ಸ್ವಯಂಚಾಲಿತ ಸೋಲಾರ್ ನಿಯಂತ್ರಣ ವ್ಯವಸ್ಥೆ ಹಲವು ಗ್ರಾಪಂಗಳಲ್ಲಿ ಸುಸ್ಥಿತಿಯಲ್ಲಿ ಇಲ್ಲ. ಇದೆಲ್ಲದರ ನಡುವೆ ಬೆಸ್ಕಾಂ ಕೂಡ ಗ್ರಾಪಂ ಬಿಲ್ ವಸೂಲಾತಿಗೆ ಅಷ್ಟೇನೂ ಅವಸರ ತೋರುವುದಿಲ್ಲ.
from India & World News in Kannada | VK Polls https://ift.tt/3sHfNF8