ಮುಂಬಯಿ: ದೇಶದಲ್ಲಿ ಅದರಲ್ಲೂ ಮಹಾರಾಷ್ಟ್ರದಲ್ಲಿ ಕೋವಿಡ್ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ವೈದ್ಯರು, ದಾದಿಯರು ತುಂಬಾ ಒತ್ತಡ ಅನುಭವಿಸುತ್ತಿದ್ದಾರೆ. ''ಸೋಂಕು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ನಿರ್ಲಕ್ಷ್ಯ ತೋರಬೇಡಿ. ದಯವಿಟ್ಟು ಎಲ್ಲರೂ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ...'' ಎಂದು ಮುಂಬಯಿ ವೈದ್ಯರೊಬ್ಬರು ಕಣ್ಣೀರು ಹಾಕುತ್ತಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ''ನಿಮಗೆ ಸೋಂಕು ತಗುಲಿಲ್ಲ ಎಂದ ಮಾತ್ರಕ್ಕೆ ಸೂಪರ್ ಹೀರೊ ಎಂದು ಭಾವಿಸಬೇಡಿ. 35 ವರ್ಷದವರೂ ಸೋಂಕು ತಗುಲಿ ವೆಂಟಿಲೇಟ್ ಮೇಲೆ ಚಿಕಿತ್ಸೆ ಪಡೆಯುತ್ತಿರುವ ದಾರುಣ ಸ್ಥಿತಿಯನ್ನು ನಾನು ನೋಡುತ್ತಿದ್ದೇನೆ. ನಾವು ಕೂಡ ಅಸಹಾಯಕರಾಗಿದ್ದೇವೆ. ಇಂತಹ ಬಿಕ್ಕಟ್ಟು ಬರುತ್ತದೆ ಎಂದುಕೊಂಡಿರಲಿಲ್ಲ. ದಯವಿಟ್ಟು ಸೋಂಕಿನ ಬಗ್ಗೆ ಅಸಡ್ಡೆ ಬೇಡ. ದಯಮಾಡಿ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದನ್ನು ಜೀವನದ ಭಾಗವಾಗಿಸಿಕೊಳ್ಳಿ,'' ಎಂದು ಸಾಂಕ್ರಾಮಿಕ ರೋಗಗಳ ತಜ್ಞೆ ಡಾ.ತೃಪ್ತಿ ಗಿಲಾಡಿ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೋವಿಡ್ ಸೋಂಕು ತಗುಲಿದ ಮಾತ್ರಕ್ಕೆ ಎಲ್ಲರೂ ಆಸ್ಪತ್ರೆಗೆ ಬಂದು ದಾಖಲಾಗಬೇಡಿ. ಇಲ್ಲಿ ಐಸಿಯು, ವೆಂಟಿಲೇಟರ್ ಬೆಡ್ಗಳ ಕೊರತೆ ಇದೆ. ಆಕ್ಸಿಜನ್ ಕೊರತೆಯೂ ಸಾಕಷ್ಟಿದೆ. ಸೌಮ್ಯ ಸ್ವರೂಪದ ರೋಗ ಲಕ್ಷಣಗಳಿದ್ದರೆ ಮನೆಯಲ್ಲೇ ಇದ್ದುಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಸಾಧ್ಯವಾದಷ್ಟು ಮನೆಯಲ್ಲೇ ಇರಿ. ಹೊರಹೋಗುವಾಗ ಅಗತ್ಯ ಎದುರಾದಲ್ಲಿ ತಪ್ಪದೇ ಮಾಸ್ಕ್ ಅನ್ನು ಮೂಗು ಮುಚ್ಚಿಕೊಳ್ಳುವಂತೆ ಪೂರ್ಣವಾಗಿ ಧರಿಸಿ. ಮನೆಗೆ ವಾಪಸ್ ಬರುವವರೆಗೂ ಅದನ್ನು ತೆಗೆಯಬೇಡಿ. ಸೋಂಕನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬೇಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಲಸಿಕೆ ಬಗೆಗಿನ ಅಪನಂಬಿಕೆ ಬದಿಗಿರಿಸಿ, ದಯವಿಟ್ಟು ಹಾಕಿಸಿಕೊಳ್ಳಿ, ಎಂದು ಸಲಹೆ ನೀಡಿದ್ದಾರೆ.
from India & World News in Kannada | VK Polls https://ift.tt/3axhoqX