ಕೋವಿಡ್‌-19 : ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್‌ ಆಸ್ಪತ್ರೆಗೆ ದಾಖಲು!

ಹೊಸದಿಲ್ಲಿ: ಕಳೆದ ಮಾರ್ಚ್‌ 27ರಂದು ಕೋವಿಡ್‌-19 ಪಾಸಿಟಿವ್‌ ಬಂದಿದ್ದರಿಂದ ಒಂದು ವಾರದಿಂದ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ ಮಾಸ್ಟರ್ ಬ್ಲಾಸ್ಟರ್‌ ಇದೀಗ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. "ನಿಮ್ಮ ಅಭಿನಂದನೆ ಹಾಗೂ ಹಾರೈಕೆಗೆ ತುಂಬಾ ಧನ್ಯವಾದ. ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ವೈದ್ಯರ ಸಲಹೆಯ ಮೇರೆಗೆ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮನೆಗೆ ಮರಳುತ್ತೇನೆಂಬ ವಿಶ್ವಾಸವಿದೆ. ಪ್ರತಿಯೊಬ್ಬರು ಜಾಗರೂಕರಾಗಿರಿ ಹಾಗೂ ಸುರಕ್ಷಿತವಾಗಿರಿ. 2011ರ ಐಸಿಸಿ ವಿಶ್ವಕಪ್‌ ಗೆಲುವಿನ 10ನೇ ವಾರ್ಷಿಕೋತ್ಸವಕ್ಕೆ ತಂಡದ ಸಹ ಆಟಗಾರರಿಗೆ ಅಭಿನಂದನೆ," ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ. ಕಳೆದ ಮಾರ್ಚ್‌ 27 ರಂದು ಸಚಿನ್‌ ತೆಂಡೂಲ್ಕರ್‌ ಹಾಗೂ ಯೂಸಫ್‌ ಪಠಾಣ್‌ ಇಬ್ಬರಿಗೂ ಒಂದೇ ದಿನ ಕೋವಿಡ್‌-19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರಿಬ್ಬರೂ ತಮ್ಮ-ತಮ್ಮ ಮನೆಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಆದರೆ, ಸಚಿನ್‌ ತೆಂಡೂಲ್ಕರ್ ಶುಕ್ರವಾರ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. "ಕೋವಿಡ್‌-19 ಪರೀಕ್ಷೆಗೆ ಒಳಗಾಗಿದ್ದ ನನಗೆ ಸೋಂಕು ತಗುಲಿರುವುದು ಸ್ಪಷ್ಟವಾಗಿದ್ದು, ಮನೆಯಲ್ಲಿನ ಇನ್ನುಳಿದ ಕುಟುಂಬದ ಸದಸ್ಯರ ವರದಿ ನೆಗೆಟಿವ್‌ ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದು, ಎಲ್ಲಾ ರೀತಿಯ ಸೂಚನೆ ಹಾಗೂ ನಿಯಮಗಳನ್ನು ಅನುಸರಿಸುತ್ತಿದ್ದೇನೆ," ಎಂದು ತೆಂಡೂಲ್ಕರ್‌ ಕಳೆದ ಒಂದು ವಾರದ ಹಿಂದೆ‌ ಟ್ವೀಟ್‌ ಮಾಡಿದ್ದರು. ಕೋವಿಡ್‌-19 ಸೋಂಕಿನ ಸಮಯದಲ್ಲಿ ಇಡೀ ದೇಶಾದ್ಯಂತ ಶ್ರಮಿಸುತ್ತಿರುವ ವೈದ್ಯ ಸಮುದಾಯಕ್ಕೆ ಇದೇ ವೇಳೆ ತಂಡದ ಮಾಜಿ ನಾಯಕ ಧನ್ಯವಾದ ಅರ್ಪಿಸಿದ್ದರು. "ನನಗೆ ಹಾಗೂ ಸೋಂಕು ತಗುಲಿರುವ ಇತರರಿಗೆ ನೆರವು ನೀಡುತ್ತಿರುವ ದೇಶದ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ," ಎಂದು ಟ್ವೀಟ್‌ನಲ್ಲಿ ಹೇಳಿದ್ದರು. ಸಚಿನ್‌ ತೆಂಡೂಲ್ಕರ್‌ ನಾಯಕತ್ವದ ಭಾರತ ಲೆಜೆಂಡ್ಸ್‌ ತಂಡ ಇತ್ತೀಚೆಗೆ ಮುಕ್ತಾಯವಾಗಿದ್ದ ರೋಡ್‌ ಸೇಫ್ಟಿ ವಿಶ್ವ ಸರಣಿ ಫೈನಲ್‌ ಹಣಾಹಣಿಯಲ್ಲಿ ಶ್ರೀಲಂಕಾ ಲೆಜೆಂಡ್ಸ್‌ ತಂಡವನ್ನು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಈ ತಂಡದಲ್ಲಿ ಕೂಡ ಇದ್ದರು. ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ವಿರೇಂದ್ರ ಸೆಹ್ವಾಗ್‌, ಯುವರಾಜ್‌ ಸಿಂಗ್‌, ಬ್ರಿಯಾನ್‌ ಲಾರಾ, ಕೆವಿನ್‌ ಪೀಟರ್ಸನ್‌, ಸನತ್‌ ಜಯಸೂರ್ಯ, ತಿಲಕರತ್ನೆ ದಿಲ್ಷಾನ್‌, ಜಾಂಟಿ ರೋಡ್ಸ್‌ ಸೇರಿದಂತೆ ವಿಶ್ವದಾದ್ಯಂತ ಹಲವು ದಿಗ್ಗಜರು ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ 7 ಪಂದ್ಯಗಳಾಡಿದ್ದ ಸಚಿನ್‌ ತೆಂಡೂಲ್ಕರ್‌ 223 ರನ್‌ ಗಳಿಸಿ 2021ರ ಆವೃತ್ತಿಯಲ್ಲಿ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಟೆಸ್ಟ್ ಹಾಗೂ ಓಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಸಚಿನ್‌ ತೆಂಡೂಲ್ಕರ್‌ ಹೊಂದಿದ್ದಾರೆ. ಅವರು 200 ಟೆಸ್ಟ್ ಪಂದ್ಯಗಳಿಂದ 15921 ಹಾಗೂ 463 ಓಡಿಐ ಪಂದ್ಯಗಳಿಂದ 18426 ರನ್‌ ಗಳಿಸಿದ್ದಾರೆ. 200 ಟೆಸ್ಟ್ ಪಂದ್ಯಗಳಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದೆ. ಅವರು ಟೆಸ್ಟ್‌ನಲ್ಲಿ 51 ಹಾಗೂ ಓಡಿಐ ಪಂದ್ಯಗಳಲ್ಲಿ 49 ಸೇರಿದಂತೆ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cGyAM6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...