ಹೊಸದಿಲ್ಲಿ: ನಗರದ ಶಾಹೀನ್ ಬಾಗ್ನಲ್ಲಿ ಧರಣಿ ನಿರತರೊಂದಿಗೆ ಸತತ 4ನೇ ದಿನ ಮಾತುಕತೆಗೆ ಮುಂದಾದ ಸುಪ್ರೀಂ ಕೋರ್ಟ್ನ ಸಂಧಾನಕಾರರ ಎದುರು ಪ್ರತಿಭಟನಾಕಾರರು ಏಳು ಷರತ್ತುಗಳನ್ನು ಇಟ್ಟಿದ್ದಾರೆ. ಶನಿವಾರ ಬೆಳಗ್ಗೆ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರು ತಲುಪಿ ಪ್ರತಿಭಟನಾ ಸ್ಥಳ ಬದಲಿಸುವ ಬಗ್ಗೆ ಮತ್ತೆ ಮನವೊಲಿಸಲು ಯತ್ನಿಸಿದರು. ಆಗ ಪ್ರತಿಭಟನಾಕಾರರು ತಮಗೆ 24 ಗಂಟೆ ಭದ್ರತೆ ನೀಡಿ, ವಿವಿ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಿರಿ ಎಂಬುದೂ ಸೇರಿದಂತೆ ಸಪ್ತ ಷರತ್ತುಗಳ ಪಟ್ಟಿ ಇರಿಸಿದರು. ಸಂಚಾರಕ್ಕೆ ಮುಕ್ತ: ನೋಯ್ಡಾದೊಂದಿಗೆ ರಾಷ್ಟ್ರ ರಾಜಧಾನಿಯನ್ನು ಸಂಪರ್ಕಿಸುವ ಕಳಿಂದಿ ಕುಂಜ್ ರಸ್ತೆಯನ್ನು ಶನಿವಾರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ರೋಡ್ ನಂ.9 (ಓಖ್ಲಾರಸ್ತೆ)ಅನ್ನು ಪ್ರತಿಭಟನಾಕಾರರೇ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಆದರೆ ಕೆಲವು ಪ್ರತಿಭಟನಾಕಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಧರಣಿ ಕುಳಿತಿರುವ ರಸ್ತೆಯ ಪರ್ಯಾಯ ಮಾರ್ಗ ಇದಾಗಿದೆ. ಕಳಿಂದಿ ಕುಂಜ್ ರಸ್ತೆಯಲ್ಲಿನ ಬ್ಯಾರಿಕೇಡ್ಗಳನ್ನು ತೆಗೆದರೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಪ್ರತಿಭಟನಾಕಾರರೇ ಸಂಧಾನಕಾರರಿಗೆ ಶುಕ್ರವಾರ ಸಲಹೆ ನೀಡಿದ್ದರು. ಶುಕ್ರವಾರ ರಾತ್ರಿ ಕೆಲಕಾಲ ಕಳಿಂದಿ ಕುಂಜ್ ರಸ್ತೆ ನಿರ್ಬಂಧವನ್ನು ಪೊಲೀಸರು ಸಡಿಲಗೊಳಿಸಿದ್ದರಾದರೂ ನಂತರ ಪ್ರತಿಭಟನಾಕಾರರ ಸುರಕ್ಷತೆ ನೆಪವೊಡ್ಡಿ ಮತ್ತೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ಇದು ಸಂಧಾನಕಾರರಿಗೂ ಅಸಮಾಧಾನ ಮೂಡಿಸಿತ್ತು. ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಶಾಹೀನ್ ಬಾಗ್ನಲ್ಲಿ ಮಹಿಳಾ ಪ್ರತಿಭಟನಾಕಾರರು ಡಿ.15 ರಿಂದ ನೋಯ್ಡಾಗೆ ಸಂಪರ್ಕಿಸುವ ರಾಷ್ಟ್ರ ರಾಜಧಾನಿಯ ಪ್ರಮುಖ ರಸ್ತೆಗಳನ್ನು ತಡೆದು ಧರಣಿ ನಡೆಸುತ್ತಿದ್ದಾರೆ.
from India & World News in Kannada | VK Polls https://ift.tt/2un5jTl