ಮುಂಬಯಿ: ಶಿವಸೇನೆ ಜತೆ ಸೇರಿ ಸರಕಾರ ರಚಿಸುವುದಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಸ್ಪಷ್ಟವಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಯನ್ನು ಹೊರಗಿಟ್ಟು ತಾನೇ ಹೊಸ ಸರಕಾರ ರಚಿಸುವ ಶಿವಸೇನೆಗೆ ಹೊಡೆತ ಬಿದ್ದಿದೆ. ಈ ನಡುವೆ, ಬಿಜೆಪಿ ಗುರುವಾರ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದು, ಶಿವಸೇನೆ ಬೆಂಬಲ ನೀಡುವ ನಿರೀಕ್ಷೆ ಇದೆ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ಚರ್ಚಿಸಿದ ಬಳಿಕ ಪವಾರ್ ಪ್ರಕಟಿಸಿದ ಈ ನಿರ್ಧಾರದ ಹಿಂದೆ ಕರ್ನಾಟಕದ ವಿದ್ಯಮಾನದಿಂದ ಕಲಿತ ಪಾಠದ ಪ್ರಭಾವವಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ 2017ರ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ ಕಾಂಗ್ರೆಸ್ ಸ್ವಯಂಪ್ರೇರಿತವಾಗಿ ಜೆಡಿಎಸ್ನ್ನು ಬೆಂಬಲಿಸಿ ಸರಕಾರ ರಚಿಸಿತ್ತು. ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರಿಂದ ಭಾರಿ ಹೊಡೆತ ಅನುಭವಿಸಿತ್ತು. ಮಾತ್ರವಲ್ಲ, ಮೈತ್ರಿ ಸರಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಸಿಡಿದೆದ್ದು, ಸರಕಾರವೇ ಪತನವಾಯಿತು. ಇಲ್ಲೂ ಹೀಗೇ ಆಗಬಹುದು ಎಂಬ ಭೀತಿ ಕಾಂಗ್ರೆಸ್-ಎನ್ಸಿಪಿಯ ನಿಲುವು ಬದಲಾವಣೆಗೆ ಕಾರಣ ಎನ್ನಲಾಗಿದೆ. ಶರದ್ ಪವಾರ್ ಅವರು ಆರಂಭದಲ್ಲಿ 'ನಾವು ಪ್ರತಿಪಕ್ಷದಲ್ಲೇ ಕೂರುತ್ತೇವೆ,' ಎಂದು ಹೇಳಿದರೂ ಬಳಿಕ ಶಿವಸೇನೆಯ ಕುರಿತು ಸ್ವಲ್ಪ ಮೃದು ಧೋರಣೆ ತಳೆದಿದ್ದರು. ಆದರೆ, ಸೋನಿಯಾ ಗಾಂಧಿ ಜತೆ ಚರ್ಚಿಸಿದ ಬಳಿಕ ಸ್ಪಷ್ಟ ನಿಲುವಿಗೆ ಬಂದರು. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಅವಕಾಶವೊಂದು ತಾನಾಗಿ ಎದುರಿಗೆ ಬಂದಿದ್ದರೂ ಪವಾರ್-ಸೋನಿಯಾ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕರ್ನಾಟಕ ಕಲಿಸಿದ ಪಾಠವೇನು?1. ಕಾಂಗ್ರೆಸ್-ಜೆಡಿಎಸ್ ಸೇರಿ ಸರಕಾರ ರಚಿಸಿದರೂ ತಳಹಂತದ ಕಾರ್ಯಕರ್ತರು ಸಮನ್ವಯ ಸಾಧ್ಯವಾಗಲೇ ಇಲ್ಲ. 2. ಲೋಕಭಾ ಚುನಾವಣೆಯಲ್ಲಿ ಮೈತ್ರಿಯ ಕಾರಣದಿಂದಾಗಿಯೇ ಕಾಂಗ್ರೆಸ್ ಹಲವು ಸ್ಥಾನಗಳನ್ನು ಕಳೆದುಕೊಂಡಿತು. 3. 14 ಜನ ಶಾಸಕರು ಮೈತ್ರಿ ವಿರುದ್ಧ ಸಿಟ್ಟಿಗೆದ್ದು ರಾಜೀನಾಮೆ ನೀಡಿದ್ದರಿಂದ ಸರಕಾರವೇ ಉರುಳಿತು. 4. ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ಗಳ ಶಾಸಕರನ್ನು ಸೆಳೆದುಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ. 5. ಪ್ರಬಲ ಹಿಂದುತ್ವ ಪ್ರತಿಪಾದಿಸುವ ಶಿವಸೇನೆ ಜತೆ ಸೇರಿದರೆ ಕರ್ನಾಟಕದಂತೆ ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿ. 6. ಶಿವಸೇನೆ ನಡೆಸುತ್ತಿರುವುದು ವ್ಯಾವಹಾರಿಕ ರಾಜಕಾರಣ, ಅದಕ್ಕೆ ಬಲಿಯಾದರೆ ಜನ ತಿರಸ್ಕರಿಸುವ ಭಯ. 7. ಶಿವಸೇನೆ ಜತೆ ರಚಿಸಿದ ಸರಕಾರ ಉರುಳಿ ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿಗೆ ಪೂರ್ಣಬಹುಮತ ಸಿಗುವ ಸಾಧ್ಯತೆ.
from India & World News in Kannada | VK Polls https://ift.tt/34DvmlG