ಹೊಸದಿಲ್ಲಿ: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ಐವರು ಕ್ರೀಡಾಪುಟಗಳ ಮೇಲೆ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ () ತಲಾ ನಾಲ್ಕು ವರ್ಷಗಳ ನಿಷೇಧವನ್ನು ಹೇರಿದೆ. ನಾಡಾ ಪರೀಕ್ಷೆಯಲ್ಲಿ ಕತುಲು, ಪೂರ್ಣಿಮಾ ಪಾಂಡೆ, ಧರಮ್ ರಾಜ್ ಯಾದವ್, ಸಂಜೀತ್ ಮತ್ತು ಗುರ್ಮೈಲ್ ಉದ್ದೀಪನ ಮದ್ದು ಸೇವಿಸಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ನಾಡಾ ತಲಾ ನಾಲ್ಕು ವರ್ಷಗಳ ನಿಷೇಧವನ್ನು ವಿಧಿಸಿದೆ. 2010ರಲ್ಲಿ 69 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ವೇಟ್ಲಿಫ್ಟರ್ ರವಿ ಕುಮಾರ್ ಮೇಲೆ ನಾಲ್ಕು ವರ್ಷಗಳ ನಿಷೇಧವನ್ನು ಹೇರಲಾಗಿದೆ. ರವಿ ಕುಮಾರ್ 2014ನೇ ಇಸವಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ 77 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದಿದ್ದರು. 2016ರ ಜೂನಿಯರ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಗೆದ್ದಿರುವ ಪೂರ್ನಿಯಾ ಪಾಂಡೆ, ಫೆಡರೇಷನ್ ಕಪ್ ಚಾಂಪಿಯನ್ ಡಿಸ್ಕಸ್ ಎಸೆತಗಾರ ಧರಮ್ ರಾಜ್ ಯಾದವ್, 100 ಹಾಗೂ 200 ಮೀಟರ್ ಓಟಗಾರ ಸಂಜೀತ್ ಮತ್ತು ವೇಟ್ಲಿಫ್ಟರ್ ಗುರ್ಮೈಲ್ ಸಿಂಗ್ ಮೇಲೆಯೂ ತಲಾ ನಾಲ್ಕು ವರ್ಷಗಳ ನಿಷೇಧವನ್ನು ಹೇರಲಾಗಿದೆ. ಮೂತ್ರ ಮಾದರಿ ಪರೀಕ್ಷೆಯಲ್ಲಿ ರವಿ ಕುಮಾರ್ ನಿಷೇಧಿತ ಮದ್ದು ಸೇವಿಸಿರುವುದು ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲೇ ಫೆಬ್ರವರಿ ತಿಂಗಳಲ್ಲಿ ವಿಶಾಖಪಟ್ಟಣದಲ್ಲಿ ನಡೆದ 71ನೇ ಪುರುಷ ಹಾಗೂ 34ನೇ ಮಹಿಳಾ ಹಿರಿಯ ರಾಷ್ಟ್ರೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ರವಿ ಕುಮಾರ್ ಹಾಗೂ ಪೂರ್ಣಿಮಾರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಒಟ್ಟಿನಲ್ಲಿ 2020 ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇನ್ನು ಒಂಬತ್ತು ತಿಂಗಳುಗಳಷ್ಟು ಮಾತ್ರ ಬಾಕಿ ಉಳಿದಿರುವಾಗ ಭಾರತೀಯ ಕ್ರೀಡೆಯು ಭಾರಿ ಮುಜುಗರಕ್ಕೊಳಗಾಗಿದೆ. ಇನ್ನೊಂದೆಡೆ ಪ್ರಯೋಗಾಲಯಗಳ ಪರೀಕ್ಷಾ ವಿಧಾನಗಳನ್ನು ಪಾಲಿಸದಿರುವ ರಾಷ್ಟ್ರೀಯ ಉದ್ದೀಪನ ಪರೀಕ್ಷಾ ಪ್ರಯೋಗಾಲಯ (ಎನ್ಡಿಟಿಎಲ್) ವಿರುದ್ದ ವಿಶ್ವ ಉದ್ದೀಪನ ನಿಗ್ರಹ ಘಟಕವು (ವಾಡಾ) ಮುಂದಿನ ವರ್ಷ ಫೆಬ್ರವರಿ 20ರ ವರೆಗೆ ನಿಷೇಧವನ್ನು ಹೇರಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JOrs1C