ಮುಂಬಯಿ: ಮಹಾರಾಷ್ಟ್ರದಲ್ಲಿ ಉದ್ಭವಿಸಿರುವ ಸರಕಾರ ರಚನೆ ಬಿಕ್ಕಟ್ಟಿಗೆ ಬುಧವಾರ ಹೊಸ ತಿರುವು ಸಿಕ್ಕಿದೆ. ನಾಯಕ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಭೇಟಿ ಬಳಿಕ ಇದೊಂದು ಸೌಜನ್ಯದ ಭೇಟಿ ಎಂದಷ್ಟೇ ಸಂಜಯ್ ರಾವತ್ ಮಾಧ್ಯಮಗಳಿಗೆ ಹೇಳಿದ್ದರೂ, 'ಇದು ಅದಲ್ಲ' ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಧಿಕಾರ ಹಂಚಿಕೊಳ್ಳುವ ವಿಚಾರದಲ್ಲಿ ಮತ್ತು ಶಿವಸೇನೆ ತಮ್ಮ ಪಟ್ಟನ್ನು ಚೂರೇ ಚೂರೇ ಸಡಿಲ ಮಾಡದಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 24ರಂದು ಫಲಿತಾಂಶ ಘೋಷಣೆಯಾಗಿದ್ದರೂ ರಾಜ್ಯದಲ್ಲಿನ್ನೂ ಸರಕಾರ ರಚನೆಯಾಗಿಲ್ಲ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸ್ಥಾನಗಳು ಅಗತ್ಯವಾಗಿದ್ದು ಬಿಜೆಪಿ 105, ಶಿವಸೇನೆ 56, ಎನ್ಸಿಪಿ 54, ಕಾಂಗ್ರೆಸ್ 44 ಹಾಗೂ ಇತರರು 29 ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷಗಳಿಗೆ ಹಂಚಿಕೊಳ್ಳುವ ಹಾಗೂ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಗೆ ಬಿಜೆಪಿ ಲಿಖಿತ ಒಪ್ಪಿಗೆ ನೀಡಬೇಕು ಎಂಬುದಾಗಿ ಈ ಹಿಂದೆ ಸಂಜಯ್ ರಾವತ್ ಹೇಳಿದ್ದರು. ಇದಲ್ಲದೆ ಮಾಹಾರಾಷ್ಟ್ರಕ್ಕೆ ಶಿವಸೇನೆಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಹಾಗೂ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂಬುದಾಗಿ ರಾವತ್ ತಿಳಿಸಿದ್ದರು. ಕಾಂಗ್ರೆಸ್ ಮತ್ತು ಎನ್ಸಿಪಿಯಿಂದ ಬೆಂಬಲ ಸಿಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದರು. ಆದರೆ ಇದಕ್ಕೆ ಎನ್ಸಿಪಿ ಕಠಿಣ ಷರತ್ತನ್ನು ಮುಂದಿಟ್ಟಿದೆ. ಬಿಜೆಪಿ ಜೊತೆ ಸಂಬಂಧ ಕಡಿದುಕೊಂಡಿರುವುದಾಗಿ ಶಿವಸೇನೆ ಹೇಳಿದರೆ ಮಾತ್ರ ರಾಜಕೀಯ ಪರ್ಯಾಯದ ಬಗ್ಗೆ ಆಲೋಚನೆ ಮಾಡಲು ಸಾಧ್ಯ ಎಂಬುದಾಗಿ ಎನ್ಸಿಪಿ ಮಂಗಳವಾರ ಸ್ಪಷ್ಟಪಡಿಸಿದೆ. ಕೇಂದ್ರ ಸಂಪುಟದಲ್ಲಿರುವ ಏಕೈಕ ಶಿವಸೇನೆ ಸಚಿವ ಅರವಿಂದ ಸಾವಂತ್ ರಾಜೀನಾಮೆ ನೀಡಿದ ಬಳಿಕವಷ್ಟೇ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಜೊತೆ ಚರ್ಚೆ ಮುಂದುವರಿಸಬಹುದು ಎಂಬುದಾಗಿ ಎನ್ಸಿಪಿ ಕಡ್ಡಿ ಮುರಿದಂತೆ ಹೇಳಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾವತ್ ಮತ್ತು ಪವಾರ್ ಬುಧವಾರ ಭೇಟಿಯಾಗಿದ್ದಾರೆ. ಭೇಟಿ ನಂತರ ಮಾತನಾಡಿರುವ , “ನನಗೆ ಹೇಳಲೂ ಏನೂ ಇಲ್ಲ. ಬಿಜೆಪಿ ಮತ್ತು ಶಿವಸೇನೆ ಜನಾದೇಶ ಪಡೆದುಕೊಂಡಿವೆ. ಹಾಗಾಗಿ ಆದಷ್ಟು ಬೇಗ ಅವರೇ ಸರಕಾರ ರಚಿಸಬೇಕು. ನಮ್ಮ ಜನಾದೇಶ ಏನಿದ್ದರೂ ವಿರೋಧ ಪಕ್ಷದ ಕೆಲಸ ನಿರ್ವಹಿಸುವುದು,” ಎಂದಿದ್ದಾರೆ. ಶಿವಸೇನೆ - ಎನ್ಸಿಪಿ ಸರಕಾರ ರಚನೆಯ ಪ್ರಶ್ನೆ ಎಲ್ಲಿದೆ? ಎಂಬುದಾಗಿ ಅವರು ಪ್ರಶ್ನಿಸಿದ್ದು, “ಅವರಿಬ್ಬರೂ (ಬಿಜೆಪಿ-ಎನ್ಸಿಪಿ) ಕಳೆದ 25 ವರ್ಷಗಳಿಂದ ಒಟ್ಟಾಗಿದ್ದಾರೆ. ಇವತ್ತು ಅಥವಾ ನಾಳೆ ಅವರು ಮತ್ತೆ ಒಟ್ಟಾಗುತ್ತಾರೆ,” ಎಂದಿದ್ದಾರೆ. ಇರುವುದು ಒಂದೇ ಆಯ್ಕೆ. ಬಿಜೆಪಿ ಮತ್ತು ಶಿವಸೇನೆ ಸರಕಾರ ರಚನೆ ಮಾಡಬೇಕು. ರಾಷ್ಟ್ರಪತಿ ಆಳ್ವಿಕೆಯನ್ನು ತಪ್ಪಿಸಲು ಇದು ಬಿಟ್ಟು ಬೇರೆ ಆಯ್ಕೆ ಇಲ್ಲ ಎಂಬುದಾಗಿ ಪವಾರ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅವರು ಮುಂಬರಲಿರುವ ರಾಜ್ಯಸಭಾ ಕಲಾಪದ ಬಗ್ಗೆ ಚರ್ಚಿಸಲು ರಾವತ್ ಮನೆಗೆ ಬಂದಿದ್ದಾಗಿ ಭೇಟಿಗೆ ತೇಪೆ ಹಚ್ಚಿದ್ದಾರೆ. ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ಯಾವ ತಿರುವನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
from India & World News in Kannada | VK Polls https://ift.tt/2PPf3Ov