ಏಕದಿನದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಸಲಹೆ ನೀಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

ಮುಂಬಯಿ: ಚೊಚ್ಚಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜನೆಗೆ ಭಾರತ ಸಜ್ಜಾಗಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವೆ ಕೋಲ್ಕೊತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ಡೇ-ನೈಟ್ ಪಂದ್ಯ ಆಯೋಜನೆಯಲ್ಲಿ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮಧ್ಯೆ ಮಾಜಿ ಕ್ರಿಕೆಟ್ ಐಕಾನ್ , ಏಕದಿನದಲ್ಲೂ ಕ್ರಾಂತಿಕಾರಿ ಬದಲಾವಣೆಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ, ಟೆಸ್ಟ್ ತರಹನೇ ಏಕದಿನಲ್ಲೂ ತಲಾ 25 ಓವರ್‌ಗಳ ನಾಲ್ಕು ಇನ್ನಿಂಗ್ಸ್‌ಗಳನ್ನು ಆಡಲು ಪ್ರಸ್ತಾಪ ಮಾಡಿದ್ದಾರೆ. ಹೆಚ್ಚೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು ಹಾಗೂ ಆದಾಯ ದೃಷ್ಟಿಕೋನದಿಂದಲೂ ಏಕದಿನವನ್ನು ತಲಾ 25 ಓವರ್‌ಗಳ ನಾಲ್ಕು ಇನ್ನಿಂಗ್ಸ್‌ಗಳಾಗಿ ವಿಂಗಡಿಸುವುದು ಹೆಚ್ಚು ಸೂಕ್ತವೆನಿಸಲಿದೆ ಎಂದು ಸಲಹೆ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್ ಉಳಿಗಾಲಕ್ಕಾಗಿ ಮಹತ್ವದ ಸಲಹೆ ಮಾಡಿದ್ದಾರೆ. ಏಕದಿನದಲ್ಲಿ ಸೂಚಿಸಿರುವ ಬದಲಾವಣೆಗಳೇನು? ಏಕದಿನವನ್ನು ತಲಾ 25 ಓವರ್‌ಗಳ ನಾಲ್ಕು ಇನ್ನಿಂಗ್ಸ್‌ಗಳಾಗಿ ವಿಂಗಡಿಸಬೇಕು. ಪ್ರತಿ ಇನ್ನಿಂಗ್ಸ್ ಬಳಿಕ ತಲಾ 15 ನಿಮಿಷಗಳ ವಿರಾಮ ನಿಗದಿಪಡಿಸಬೇಕು. ಉದಾ: 'ಎ' ಮತ್ತು 'ಬಿ' ತಂಡಗಳ ಮಧ್ಯೆ ಪಂದ್ಯ ನಡೆಯುತ್ತಿರುತ್ತದೆ. ಎ ತಂಡವು ಟಾಸ್ ಗೆದ್ದು 25 ಓವರ್‌ಗಳ ಬ್ಯಾಟಿಂಗ್ ಪೂರ್ಣಗೊಳಿಸಲಿದೆ. ತದಾ ಬಳಿಕ ಬಿ ತಂಡವು 25 ಓವರ್‌ಗಳ ಬ್ಯಾಟಿಂಗ್ ಮಾಡಲಿದೆ. ಅಲ್ಲಿಂದ ಬಳಿಕ ಎ ತಂಡವು 26ನೇ ಓವರ್‌ನಿಂದ (ಹಿಂದಿನ ಸ್ಕೋರ್‌ನಿಂದ) ಬ್ಯಾಟಿಂಗ್ ಮುಂದುವರಿಸಲಿದೆ. ಅಂತಿಮ 25 ಓವರ್‌ಗಳಲ್ಲಿ ಬಿ ತಂಡವು ಗುರಿಯನ್ನು ಹಿಂಬಾಲಿಸಲಿದೆ. ಹಾಗೊಂದು ವೇಳೆ ಎ ತಂಡವು 25 ಓವರ್‌ನೊಳಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡರೆ ಬಿ ತಂಡವು ಗುರಿಯನ್ನು ಬೆನ್ನಟ್ಟಲು 50 ಓವರ್‌ಗಳ‌ನ್ನು (ತಲಾ 25 ಓವರ್) ಪಡೆಯಲಿದೆ. ಈ ಬದಲಾವಣೆಯಿಂದ ಲಾಭವೇನು? ಟಾಸ್, ಇಬ್ಬನಿ ಫಾಕ್ಟರ್ ತಪ್ಪಿಸಬಹುದು: ಹೊನಳು ಬೆಳಕಿನ ಏಕದಿನ ಪಂದ್ಯದಲ್ಲಿ ಮಂಜು ಗೇಮ್ ಚೇಂಜರ್ ಆಗಿ ಪರಿಣಮಿಸುತ್ತದೆ. ಈಗಿನ ಪರಿಸ್ಥಿತಿ ಪ್ರಕಾರ ಟಾಸ್ ಗೆದ್ದ ತಂಡಕ್ಕೆ ಅವಕಾಶ ಹೆಚ್ಚಿರುತ್ತದೆ. ಎರಡನೇಯದಾಗಿ ಬೌಲಿಂಗ್ ಮಾಡುವ ತಂಡವು ಮಂಜಿನ ತೊಂದರೆಯನ್ನು ಅನುಭವಿಸುತ್ತದೆ. ಆದರೆ ಏಕದಿನವನ್ನು ನಾಲ್ಕು ಇನ್ನಿಂಗ್ಸ್‌ಗಳಾಗಿ ವಿಂಗಡಿಸುವುದರೊಂದಿಗೆ ಇತ್ತಂಡಗಳು ಬೆಳಕಿನಡಿಯಲ್ಲಿ ಬೌಲಿಂಗ್ ಮಾಡಬೇಕಾಗುತ್ತದೆ. ಇದರಿಂದ ಟಾಸ್ ಹಾಗೂ ಇಬ್ಬರಿ ಫಾಕ್ಟರ್‌ಗಳನ್ನು ತಪ್ಪಿಸಬಹುದಾಗಿದೆ. ಮಳೆಯಿಂದ ಪಂದ್ಯ ರದ್ದಾಗುವುದನ್ನು ತಪ್ಪಿಸಬಹುದು: ಇತ್ತಂಡಗಳು 25 ಓವರ್‌ಗಳ ಎರಡು ಇನ್ನಿಂಗ್ಸ್‌ಗಳು ಆಡುವುದಾದರೆ ಪಂದ್ಯಕ್ಕೆ ತಡವಾಗಿ ಬರುವ ಮಳೆಯ ಕಾಟವನ್ನು ತಪ್ಪಿಸಬಹುದಾಗಿದೆ. ಅಲ್ಲದೆ ಮಳೆ ಬಂದರೂ ಇತ್ತಂಡಗಳಿಗೂ ಮತ್ತೆ ಗೇಮ್ ಪ್ಲ್ಯಾನ್ ಮಾಡಲು ಅವಕಾಶವಿರುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮ್ಮಲ್ಲಿ ಯಾರಿಗೂ ಡಕ್ವರ್ತ್ ಲೂವಿಸ್ ನಿಯಮ ಅರ್ಥವಾಗುತ್ತಿಲ್ಲ. ಮಳೆಯಿಂದಾಗಿ ಪಂದ್ಯ ರದ್ದಾಗುವ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿದೆ ಎಂದು ಸಚಿನ್ ತಿಳಿಸಿದ್ದಾರೆ. ಪವರ್‌ಪ್ಲೇಯಿಂದ ಹೆಚ್ಚಿನ ರೋಚಕತೆ: 25 ಓವರ್‌ಗಳ ಕ್ರಿಕೆಟ್‌ನಲ್ಲಿ ಮೊದಲೈದು ಓವರ್‌ಗಳು ಕಡ್ಡಾಯ ಪವರ್‌ಪ್ಲೇ ಆಗಿರಬೇಕು. ಉಳಿದ ಐದು ಓವರ್‌ಗಳನ್ನು ಬ್ಯಾಟಿಂಗ್ (3 ಓವರ್) ಹಾಗೂ ಬೌಲಿಂಗ್ (2 ಓವರ್) ಎಂಬ ಎರಡು ಪವರ್ ಪ್ಲೇಗಳಾಗಿ ವಿಂಗಡಿಸಬೇಕು. ಇದನ್ನು ತಂಡಗಳು ತಮಗೆ ಬೇಕಾದಂತೆ ಬಳಕೆ ಮಾಡುವ ಅವಕಾಶವಿರುತ್ತದೆ. ಎಲ್ಲ 25 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಇದು ಆವರ್ತನೆಯಾಗಲಿದ್ದು, ಪಂದ್ಯಕ್ಕೆ ಹೆಚ್ಚಿನ ರೋಚಕತೆ ಸಿಗಲಿದೆ. ಈಗಿನ 50 ಓವರ್‌ಗಳ ನಿಮಯದ ಪ್ರಕಾರ ಮೊದಲ 10 ಓವರ್‌ಗಳು ಕಡ್ಡಾಯ ಪವರ್‌ಪ್ಲೇ ಆಗಿದೆ. ಈ ಕಡ್ಡಾಯ ಪವರ್ ಪ್ಲೇ ತೆಗೆದುಕೊಳ್ಳದೇ ತಂಡಗಳಿಗೆ ಅನ್ಯ ದಾರಿಯಿರುವುದಿಲ್ಲ. ಪ್ರಸಾರಕರು ಹೆಚ್ಚು ಸಂತುಷ್ಟ: ಈ ಹೊಸ ನಿಮಯ ಆಳವಡಿಕೆಯಾದ್ದಲ್ಲಿ ಪ್ರಸಾರಕರು ಹೆಚ್ಚು ಸಂತುಷ್ಟಿಗೊಳ್ಳಲಿದ್ದಾರೆ ಎಂದು ಸಚಿನ್ ಅಭಿಪ್ರಾಯಪಡುತ್ತಾರೆ. 15 ನಿಮಿಷಗಳ ಮೂರು ಬ್ರೇಕ್ ನೀಡುವ ಮೂಲಕ ಈಗಿರುವ 45 ನಿಮಿಷಗಳ ಏಕಕಾಲದ ವಿರಾಮದವನ್ನು ತಪ್ಪಿಸಬಹುದಾಗಿದೆ. ಇದು ಹೆಚ್ಚಿನ ಆದಾಯ ಸಂಗ್ರಹಿಸಲು ನೆರವಾಗಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32hybHz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...