ಹೊಸದಿಲ್ಲಿ: ಬಯೋ-ಬಬಲ್ನಲ್ಲಿಯೂ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಆಟಗಾರರನ್ನು ಮಾರಣಾಂತಿಕ ಸೋಂಕಿನ ಅಪಾಯದಿಂದ ತಪ್ಪಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ() 14ನೇ ಐಪಿಎಲ್ ಟೂರ್ನಿಯ ಮುಂದಿನ ಪಂದ್ಯಗಳನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸುತ್ತಿದೆ. ಅಂದುಕೊಂಡ ಯೋಜನೆಯಂತೆ ಎಲ್ಲವೂ ನಡೆದರೆ ಮುಂದಿನ ವಾರ ಆರಂಭದಿಂದಲೇ ಪಂದ್ಯಗಳನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಯೇ ಆಯೋಜಿಸಲಾಗುತ್ತದೆ. ಅಲ್ಲದೆ, ಡಬಲ್ ಹೆಡರ್ ಪಂದ್ಯಗಳಿಗೆ ಮರು ವೇಳಾಪಟ್ಟಿ ಬಿಡುಗಡೆ ಮಾಡಬಹುದು. ಇನ್ನು ಮೇ.30 ರಂದು ನಡೆಯಬೇಕಿರುವ ಫೈನಲ್ ಹಣಾಹಣಿಯನ್ನು ಜೂನ್ ಮೊದಲ ವಾರಕ್ಕೆ ಮುಂದಕ್ಕೆ ಹಾಕಬಹುದು. ಮುಂಬೈನಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸುವುದು ಬಿಸಿಸಿಐ ತುಂಬಾ ಕಷ್ಟವಿದೆ. ಏಕೆಂದರೆ, ಎಲ್ಲಾ ಎಂಟು ತಂಡಗಳಿಗೂ ಹೋಟೆಲ್ ವ್ಯವಸ್ಥೆ, ಪ್ರಯಾಣ, ಬಯೋ-ಬಬಲ್ ವಾತಾವರಣ ನಿರ್ಮಿಸುವುದು ಇದೆಲ್ಲವೂ ಸುಲಭವಲ್ಲ. ಮ್ಯಾಚ್ ಫಿಟ್ನೆಸ್ ಹಾಗೂ ಪಂದ್ಯಕ್ಕೆ ತಯಾರಿ ನಡೆಸಲು ತಂಡಗಳಿಗೆ ಅಂಗಳಗಳನ್ನು ನೀಡುವುದು ಕಷ್ಟದ ಕೆಲಸ. ವಾಂಖೆಡೆ, ಡಿವೈ ಪಾಟೀಲ್, ಬ್ರಬೌರ್ನ್ ಈ ಮೂರು ಗ್ರೌಂಡ್ಗಳಲ್ಲಿ ಮೊದಲ ಅವಧಿಯಲ್ಲಿ ತಂಡಗಳು ತಯಾರಿ ನಡೆಸಿದ್ದವು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಬಾರಿ 10 ಪಂದ್ಯಗಳನ್ನು ಆಡಿಸಲಾಗಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಹಾಗೂ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ತಂಡಗಳ ತರಬೇತಿ ಪ್ರಕ್ರಿಯೆಗಳು ನಡೆದಿದ್ದವು. ಕೋವಿಡ್-19 ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಮುಂಬೈನಲ್ಲಿ ಎಲ್ಲಾ ಎಂಟು ತಂಡಗಳಿಗೆ ಹೋಟೆಲ್ಗಳನ್ನು ಹುಡುಕುತ್ತಿದ್ದು, ಟೂರ್ನಿಗೆ ಸೂಕ್ತವಾದ ಬಯೋ-ಬಬಲ್ ವಾತಾವರಣ ನಿರ್ಮಿಸಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲನೆಗೆ ಮುಂದಾಗಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಬಿಸಿಸಿಐ ಅಥವಾ ಐಪಿಎಲ್ ಅಧಿಕಾರಿಗಳು ಲಭ್ಯವಾಗುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದೆ. ಮುಂಬೈಗೆ ಎಲ್ಲಾ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಯಾವುದೇ ಫ್ರಾಂಚೈಸಿಗಳಿಗೂ ಇನ್ನೂ ಮಾಹಿತಿ ಇಲ್ಲ. ಆದರೆ, ಈ ಯೋಜನೆ ಸಕಾರವಾದರೆ ಎಲ್ಲರಿಗೂ ಅಚ್ಚರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ವಾರದಿಂದ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ವೇಳಾಪಟ್ಟಿಯಂತೆ ಬೆಂಗಳೂರು ಹಾಗೂ ಕೋಲ್ಕತಾದಲ್ಲಿ ಆಯೋಜಿಸಲಾಗಿದೆ. ಆದರೆ, ಕೊರೊನಾ ವೈರಸ್ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಯೋ-ಬಬಲ್ನಲ್ಲಿ ಹೊಸದಾಗಿ ಪ್ರಕರಣಗಳು ಬಂದಿರುವ ಹಿನ್ನೆಲೆಯಲ್ಲಿ ತಂಡಗಳ ಪ್ರಯಾಣದ ಬಗ್ಗೆ ಫ್ರಾಂಚೈಸಿಗಳು ಹಾಗೂ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಸ್ 2021ರ ಐಪಿಎಲ್ ಟೂರ್ನಿಯ ವೇಳಾಪಟ್ಟಿಯಂತೆ ಫೈನಲ್ ಹಣಾಹಣಿ ಮುಗಿಯದೇ ಇದ್ದರೆ, ಜೂನ್ 18 ರಿಂದ 22ರ ವರೆಗೆ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಇಂಗ್ಲೆಂಡ್ನ ಸೌತಾಮ್ಟನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ, ಇತ್ತೀಚೆಗೆ ಯುಕೆ ಸರ್ಕಾರ ಭಾರತದಿಂದ ಬರುವ ಪ್ರಯಾಣಿಕರನ್ನು ನಿರ್ಬಂಧಿಸಿದೆ. ಪ್ರಸ್ರುತ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಆಟಗಾರರಿಗೆ ಕ್ವಾರಂಟೈನ್ ವಿನಾಯಿತಿ ನೀಡುವ ಬಗ್ಗೆ ಐಸಿಸಿ ಹಾಗೂ ಇಸಿಬಿ ಬ್ರಿಟೀಷ್ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಐಪಿಎಲ್ ಟೂರ್ನಿ ಮುಂಬೈಗೆ ಸ್ಥಳಾಂತರವಾದರೆ, ಇಂಗ್ಲೆಂಡ್ಗೆ ತೆರಳಲು ಭಾರತ ಹಾಗೂ ನ್ಯೂಜಿಲೆಂಡ್ ಆಟಗಾರರಿಗೆ ಲಾಭವಾಗಲಿದೆ ಎಂಬುದನ್ನು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33g5ygZ