ವೈದ್ಯರ ನಡೆ ಹಳ್ಳಿಗಳ ಕಡೆ: ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಸರಕಾರದ ಕ್ರಮ! ತಕ್ಷಣ ಪರೀಕ್ಷೆ-ಚಿಕಿತ್ಸೆ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್‌ ಪರೀಕ್ಷೆ ಮಾಡಲು 'ವೈದ್ಯರ ನಡೆ ಹಳ್ಳಿಗಳ ಕಡೆ' ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರಕಾರ ಮಾರ್ಗಸೂಚಿ ಪ್ರಕಟಿಸಿದೆ. ಪ್ರತಿ ಹಳ್ಳಿಗೆ ತೆರಳಿ ಜನರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಈ ಕಾರ್ಯಕ್ರಮದ ಬಗ್ಗೆ ಕಂದಾಯ ಸಚಿವ ಆರ್‌. ಅಶೋಕ್‌ ಮಾಹಿತಿ ನೀಡಿದ್ದರು. ಅದರ ಅನುಸಾರ ಈ ಯೋಜನೆ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಭಾನುವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕೋವಿಡ್‌ ಸೋಂಕಿನ ಪ್ರಸರಣದ ಸರಪಳಿ ತುಂಡರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆಯೂ ಅರೆ ನಗರ, ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಜನರು ಪರೀಕ್ಷೆಗೆ ಒಳಗಾಗಲು ಮುಂದಾಗುತ್ತಿಲ್ಲ. ಹಳ್ಳಿಗಳ ಸನಿಹದಲ್ಲಿ ಪರೀಕ್ಷಾ ಕೇಂದ್ರಗಳೂ ಇಲ್ಲ. ಇದರಿಂದಾಗಿ ಸೋಂಕು ಹೆಚ್ಚುತ್ತಿದೆ. ಹಾಗಾವಿ ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ತಂಡ ಪ್ರತಿ ಮನೆಗೆ ಭೇಟಿ ನೀಡಿ ಸೋಂಕಿನ ಲಕ್ಷಣವಿರುವವರನ್ನು ಗುರುತಿಸಿರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸಬೇಕು. ಇದಕ್ಕಾಗಿ 'ಸೋಂಕಿತರು ಎಲ್ಲಿರುವರೋ ಅಲ್ಲೇ ಅವರನ್ನು ಗುರುತಿಸುವುದು' ಎಂಬ ನೀತಿ ಅನುಸರಿಸಬೇಕು ಎಂದು ಈ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳು, ಬಿಎಸ್‌ಸಿ ನರ್ಸಿಂಗ್‌, ಬಿಡಿಎಸ್‌, ಎಂಡಿಎಸ್‌, ಆಯುಷ್‌ ಪದವೀಧರ ವೈದ್ಯರ ಸೇವೆಯನ್ನು ನಿಯೋಜನೆ ಮೇರೆಗೆ ಪಡೆದು ಈ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಬೇಕು. ಕೋವಿಡ್‌ ಪರೀಕ್ಷೆ, ಔಷಧ ಕಿಟ್‌ ವಿತರಣೆ ಮಾಡಬೇಕಿರುವ ಹಿನ್ನಲೆಯಲ್ಲಿ ಸಂಚಾರಿ ಕ್ಲಿನಿಕ್‌ ಸೌಲಭ್ಯ ಕಲ್ಪಿಸಬೇಕು. ಈ ಕಾರ್ಯಕ್ರಮ ಜಾರಿಗೆ ಜಿಲ್ಲಾಡಳಿತಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ನಿರ್ದೇಶನ ನೀಡಲಾಗಿದೆ. ಮಾರ್ಗಸೂಚಿಯ ಸಾರವೇನು? - ಸೋಂಕಿನ ಲಕ್ಷಣವಿದ್ದರೆ ಸ್ಥಳದಲ್ಲಿಯೇ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ - ಪಾಸಿಟಿವ್‌ ಬಂದರೆ ಟ್ರಯಾಜಿಂಗ್‌ ಮಾಡಿ ಆಸ್ಪತ್ರೆಗೆ ದಾಖಲಾಗಬೇಕೆ? ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕೇ? ಮನೆ ಆರೈಕೆಯಲ್ಲಿರಬೇಕೇ ಎಂಬುದನ್ನು ಸೂಚಿಸಿ ವ್ಯವಸ್ಥೆ. -ಪಾಸಿಟಿವ್‌ ಬಂದವರ ಸಂಪರ್ಕಿತರನ್ನೂ ಪರೀಕ್ಷೆಗೆ ಒಳಪಡಿಸುವುದು. -ಮನೆ ಆರೈಕೆಗೆ ಸಮರ್ಪಕ ವ್ಯವಸ್ಥೆಯಿಲ್ಲದಿದ್ದರೆ ಅಂಥವರಿಗೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ. - ಸ್ಥಳೀಯ ಆಶಾ ಕಾರ್ಯಕರ್ತೆಯರು ಪಿಪಿಇ ಕಿಟ್‌, ಎನ್‌95 ಮಾಸ್ಕ್‌ ಧರಿಸಿ ಆಯಾ ಹಳ್ಳಿಯಲ್ಲಿ ರೋಗ ಲಕ್ಷಣ ಉಳ್ಳವರನ್ನು ಗುರುತಿಸಿ ಸಂಚಾರಿ ಕ್ಲಿನಿಕ್‌ ತಂಡಕ್ಕೆ ಶಿಫಾರಸು ಮಾಡುವುದು. -ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಆಂಬ್ಯುಲೆನ್ಸ್‌ ಸಜ್ಜು.


from India & World News in Kannada | VK Polls https://ift.tt/3fAXgGa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...