ಮಹೇಶ್ ವಿಜಾಪುರ : ಇಲ್ಲಿಯವರೆಗೆ ಬೆಡ್, ಆಕ್ಸಿಜನ್, ರೆಮ್ಡಿಸಿವಿರ್ ಚುಚ್ಚು ಮದ್ದು ಕೊರತೆ ಕೇಳಿ ಬರುತ್ತಿತ್ತು. ಈಗ ಸಾಮಾನ್ಯ ಕಾಯಿಲೆಗಳಿಗೆ ಔಷಧಗಳ ಕೊರತೆಯೂ ಕಾಡಲಾರಂಭಿಸಿದೆ. ಹೌದು.. ಕೊರೊನಾ ಸೋಂಕು ಹಳ್ಳಿ ಹಳ್ಳಿಗೂ ವಿಸ್ತರಣೆಗೊಂಡಿದೆ. ಗ್ರಾಮೀಣ ಪ್ರದೇಶಗಳ ಬಹುತೇಕ ಮನೆಗಳಲ್ಲೂ ಸೋಂಕು ಲಕ್ಷಣ ಹೊಂದಿದವರು ಸಿಗುತ್ತಿದ್ದಾರೆ. ಅಂಥವರಿಗೆ ತಕ್ಷಣಕ್ಕೆ ಬೇಕಾದ ಔಷಧಗಳು ಜಿಲ್ಲೆಯ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ. ಐದು ದಿನಕ್ಕೆ ಕೊಡಬೇಕಾದ ಔಷಧವನ್ನು ಎರಡು ದಿನಗಳಿಗೆ ಮಾತ್ರ ನೀಡಲಾಗುತ್ತಿದೆ. ಈ ಅವ್ಯವಸ್ಥೆ ಸೋಂಕು ತಡೆಗಟ್ಟಲು ನಡೆಸಲಾಗುತ್ತಿರುವ ಹೋರಾಟಕ್ಕೆ ಮತ್ತೊಂದು ಅಡ್ಡಿಯಾಗಿ ಪರಿಣಮಿಸಿದೆ. ಕೊರತೆ: ಹಳ್ಳಿಗಳಲ್ಲೂ ಸೋಂಕಿನ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಜನರು ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಅದರಲ್ಲಿ ಕೆಲವರು ಕೋವಿಡ್ ಪರೀಕ್ಷೆಗಾಗಿ ಬರುತ್ತಿದ್ದರೆ ಕೆಲವರು ಶೀತ, ಕೆಮ್ಮು, ಜ್ವರದ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೆಟ್ಟಿಲು ಹತ್ತುತ್ತಿದ್ದಾರೆ. ಹೀಗೆ ಬಂದವರಿಗೆ ಕೊಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ಔಷಧಗಳ ಸಂಗ್ರಹವೇ ಇಲ್ಲ. ಕೋವಿಡ್ ಎರಡನೇ ಅಲೆಯ ಆರಂಭದಲ್ಲಿ ಸೋಂಕಿತರಿಗೆ ಕನಿಷ್ಠ ಐದು ದಿನಗಳವರೆಗೆ ಸಾಕಾಗುವಷ್ಟು ಔಷಧಗಳ ಕಿಟ್ ತಯಾರಿಸಿದ್ದ ಸರಕಾರಿ ಆಸ್ಪತ್ರೆಗಳಲ್ಲಿ, ಈಗ ಕನಿಷ್ಠ ಎರಡು ದಿನಕ್ಕೆ ನೀಡಲು ಬೇಕಾಗುವಷ್ಟೂ ಮಾತ್ರೆಗಳಿಲ್ಲ. ಪ್ಯಾರಾಸಿಟೆಮಾಲ್ ಕೂಡ ಇಲ್ಲದ ಕೆಲ ಆಸ್ಪತ್ರೆಗಳಿಗೆ ದಾನಿಗಳು ಮಾತ್ರೆ ಪೂರೈಕೆ ಮಾಡಿದ ನಿದರ್ಶನಗಳೂ ಜಿಲ್ಲೆಯಲ್ಲಿವೆ. ಮಾತ್ರೆಗೆ ಕತ್ತರಿ: ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊಡುತ್ತಿದ್ದ ಪ್ಯಾರಾಸಿಟೆಮಾಲ್ ಮಾತ್ರೆಗಳಿಗೂ ಈಗ ಕತ್ತರಿ ಹಾಕಲಾಗಿದೆ. ಕೊರೊನಾ ಲಕ್ಷಣಗಳ ಕಾರಣದಿಂದ ಕೋವಿಡ್ ಪರೀಕ್ಷೆಗೆ ಬಂದವರಿಗೆ ಮುನ್ನೆಚ್ಚರಿಕೆಯಾಗಿ ವಿತರಣೆ ಮಾಡಲೂ ಮಾತ್ರೆಗಳಿಲ್ಲ. ಹಾಗಾಗಿ ವರದಿ ಬರುವ ವೇಳೆಗೆ ಸೋಂಕು ಇನ್ನಷ್ಟು ಉಲ್ಬಣಿಸುತ್ತಿರುವ ಚಿತ್ರಣ ಹಳ್ಳಿಗಳಲ್ಲಿ ಕಾಣಿಸುತ್ತಿದೆ. '15 ದಿನಗಳ ಹಿಂದೆಯೇ ಔಷಧಗಳ ಬೇಡಿಕೆ ಪಟ್ಟಿ ಕಳುಹಿಸಿಕೊಟ್ಟಿದ್ದರೂ 40 ಸಾವಿರ ಜನಸಂಖ್ಯೆ ವ್ಯಾಪ್ತಿ ಹೊಂದಿರುವ ಬೈಲಹೊಂಗಲ ತಾಲೂಕಿನ ನೇಗಿನಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈವರೆಗೂ ಔಷಧ ಪೂರೈಕೆಯಾಗಿಲ್ಲ' ಎನ್ನುತ್ತಾರೆ ಸ್ಥಳೀಯರು. 'ಸತತ 15 ದಿನಗಳಿಂದ ಜಿಲ್ಲಾ ವೈದ್ಯಾಧಿಕಾರಿ, ಸಿಇಒ, ಡಿಸಿ, ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಬೆನ್ನು ಬಿದ್ದ ಮೇಲೆ ದೊಡವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧ ಪೂರೈಕೆಯಾಗಿದೆ' ಎನ್ನುತ್ತಾರೆ ಜಿಪಂ ಸದಸ್ಯ ಶಂಕರ ಮಾಡಲಗಿ. ಅಸಹಾಯಕ ಸಹಾಯಕಿಯರು: ಆರೋಗ್ಯದ ವಿಷಯದಲ್ಲಿ ಪ್ರತಿಯೊಬ್ಬ ಸಾಮಾನ್ಯ ಜನರ ಜತೆಗೆ ನೇರ ಸಂಪರ್ಕ ಹೊಂದಿರುವ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಕೂಡ ಈಗ ಔಷಧ ಕೊರತೆಯಿಂದ ಅಸಹಾಯಕರಾಗಿದ್ದಾರೆ. ಮನೆ ಮನೆ ಭೇಟಿ ಮೂಲಕ ಜನರ ಆರೋಗ್ಯ ಗಮನಿಸುತ್ತಿರುವ ಈ ಸಹಾಯಕಿಯರಿಗೆ ಸಾಕಷ್ಟು ಪ್ರಮಾಣದ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಅಂಥವರ ಕೈಗೆ ಈಗ 10 ಮಾತ್ರೆಗಳ ಒಂದೊಂದೇ ಸ್ಟ್ರಿಪ್ ನೀಡಲಾಗುತ್ತಿದೆ. ತಮ್ಮ ಕುಟುಂಬದ ಸದಸ್ಯರು ಅನಾರೋಗ್ಯಕ್ಕೀಡಾದರೂ ಕೊಡಲು ಮಾತ್ರೆ ಸಿಗುತ್ತಿಲ್ಲ ಎನ್ನುವ ಅಸಮಾಧಾನ ಸಹಾಯಕಿಯರಲ್ಲಿದೆ. 'ಫೋಟೊ' ಕಿಟ್ ಹಂಚಿಕೆ: ಜಿಲ್ಲೆಯ ಕೆಲ ಶಾಸಕರು ತಮ್ಮ ಭಾವಚಿತ್ರ ಹೊಂದಿರುವ ಮಾತ್ರೆಗಳ ಕಿಟ್ಗಳನ್ನು ತಮ್ಮ ಕಾರ್ಯಕರ್ತರ ಮೂಲಕ ಮನೆ ಮನೆಗೂ ಹಂಚುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರನ್ನೂ ಕಿಟ್ ತಲುಪಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭಾವಚಿತ್ರ ಹೊಂದಿರುವ ಔಷಧಗಳ ಕಿಟ್ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾದರೂ ಶಾಸಕರು, ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಸರಕಾರಿ ಆಸ್ಪತ್ರೆಗಳಲ್ಲಿನ ಔಷಧ ಕೊರತೆಗೂ ಪರಿಹಾರ ಕಂಡುಕೊಳ್ಳಬಹುದಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ. 'ಔಷಧವೂ ಇಲ್ಲ, ಕೋವಿಡ್ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೋಟೊ ಹಾಕಿಕೊಂಡು ಕಾರ್ಯಕರ್ತರ ಮೂಲಕ ಔಷಧ ನೀಡುತ್ತಿರುವ ಶಾಸಕರಿಗೆ ನಿಜವಾದ ಕಳಕಳಿ ಇದ್ದರೆ ಸರಕಾರಿ ಆಸ್ಪತ್ರೆಗಳಿಗೆ ಬರಬೇಕಾದ ಔಷಧ ಬಿಡುಗಡೆಗೆ ಪ್ರಯತ್ನಿಸಲಿ' ಎನ್ನುತ್ತಾರೆ, ಸಾಮಾಜಿಕ ಕಾರ್ಯಕರ್ತ ಹಬೀಬ ಶಿಲ್ಲೇದಾರ. 'ಟೆಂಡರ್ ಸಮಸ್ಯೆಯಿಂದ ಔಷಧ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಈಗ ತುರ್ತು ಟೆಂಡರ್ ಮೂಲಕ ಔಷಧ ಸರಬರಾಜಿಗೆ ಆದೇಶ ನೀಡಲಾಗಿದೆ. ಎರಡು ದಿನಗಳಲ್ಲಿ ಎಲ್ಲ ಕಡೆಗೂ ಔಷಧ ಪೂರೈಕೆಯಾಗಲಿದೆ' ಎಂದು ಉತ್ತರ ಕರ್ನಾಟಕ ಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಆಯುಕ್ತ ಡಾ.ಅಪ್ಪಾಸಾಹೇಬ ನರಟ್ಟಿ ಮಾಹಿತಿ ನೀಡಿದ್ಧಾರೆ.
from India & World News in Kannada | VK Polls https://ift.tt/3vn6sVt