ಚಿಕ್ಕಮಗಳೂರು: ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಲಿತ ಯುವಕನಿಗೆ ಬೇರೊಬ್ಬ ಯುವಕನ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್ಐ ಅರ್ಜುನ್ ಹೊನಕೇರಿ ಎಂಬಾತನನ್ನು ಸೇವೆಯಿಂದ ಅಮಾನತು ಮಾಡಿ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಪಶ್ಚಿಮ ವಲಯ ಐಜಿಪಿ ಭಾನುವಾರ ಪಿಎಸ್ಐ ಅವರನ್ನು ಅಮಾನತು ಮಾಡಿದ್ದು, ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿದ್ದಾರೆ. ಆರೋಪ ಕೇಳಿ ಬರುತ್ತಿದ್ದಂತೆ ಪಿಎಸ್ಐ ಅರ್ಜುನ್ನನ್ನು ಒಒಡಿ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಶನಿವಾರ ಅರ್ಜುನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಇಲಾಖಾ ಶಿಸ್ತು ಕ್ರಮಕ್ಕಾಗಿ ಪ್ರಾಥಮಿಕ ತನಿಖೆಯನ್ನು ಪುತ್ತೂರು ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ. ಮಹಿಳೆ ನಾಪತ್ತೆ ಪ್ರಕರಣದಲ್ಲಿ ಮೂಡಿಗೆರೆ ತಾಲೂಕು ಕಿರುಗುಂದದ ಕೆ.ಎಲ್.ಪುನೀತ್ನನ್ನು ಮೇ 10ರಂದು ಠಾಣೆಗೆ ಕರೆತಂದಿದ್ದು, ತಲೆ ಕೆಳಗೆ ಮಾಡಿ ಕಟ್ಟಿಹಾಕಿ ಹಲ್ಲೆ ನಡೆಸಿದ್ದಲ್ಲದೆ, ಕಳ್ಳತನ ಆರೋಪಿ ಚೇತನ್ ಎಂಬುವನಿಂದ ಮುಖಕ್ಕೆ ಮೂತ್ರ ಮಾಡಿಸಿ ಕುಡಿಸಿದ ಆರೋಪ ಪಿಎಸ್ಐ ಮೇಲಿದೆ.
from India & World News in Kannada | VK Polls https://ift.tt/3fe1owV