ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲನೇ ಹಣಾಹಣಿಯಲ್ಲಿ ಅವರಿಗೆ ಸಿಂಗಲ್ ರನ್ ಓಡಲು ನಿರಾಕರಿಸಿದ ಬಗ್ಗೆ ಮೌನ ಮುರಿದ ರಾಜಸ್ಥಾನ್ ರಾಯಲ್ಸ್ ನೂತನ ನಾಯಕ ಸಂಜು ಸ್ಯಾಮ್ಸನ್ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು. ಏಪ್ರಿಲ್ 12 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬೃಹತ್ ಮೊತ್ತ ಹಿಂಬಾಲಿಸಿದ್ದ ರಾಜಸ್ಥಾನ್ ರಾಯಲ್ಸ್ ಪರ 119 ರನ್ ಗಳಿಸಿದ್ದರು. ಆದರೆ, ಕೊನೆಯ ಓವರ್ನಲ್ಲಿ ಎರಡು ಎಸೆತಗಳಿಗೆ 5 ರನ್ ಅಗತ್ಯವಿತ್ತು. ಈ ವೇಳೆ ಸಿಕ್ಸರ್ಗೆ ಪ್ರಯತ್ನಿಸಿದ ಸಂಜು ವಿಫಲರಾದರು. ಆದರೆ, ಒಂದು ರನ್ ಸುಲಭವಾಗಿ ಪಡೆಯಬಹುದಿತ್ತು. ಆದರೆ, ಸಿಂಗಲ್ ತೆಗೆದುಕೊಳ್ಳುವ ಕ್ರಿಸ್ ಮಾರಿಸ್ ಅವರ ನಿರ್ಧಾರವನ್ನು ಸಂಜು ತಿರಸ್ಕರಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಪ್ರಯತ್ನದಲ್ಲಿ ಆರ್ಆರ್ ನಾಯಕ ಕ್ಯಾಚ್ ನೀಡಿದರು. ಆದರೆ, ಗುರವಾರ ಇದೇ ಅಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 158 ರನ್ ಗುರಿ ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ಪರ ಕ್ರಿಸ್ ಮಾರಿಸ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದರು. ನಿರ್ಣಾಯಕ ಪ್ರದರ್ಶನ ತೋರಿ 62 ರನ್ ಗಳಿಸಿ ಡೇವಿಡ್ ಮಿಲ್ಲರ್ ಔಟ್ ಆದ ಬಳಿಕ ತಂಡದ ಜವಾಬ್ದಾರಿ ಹೊತ್ತ ಕ್ರಿಸ್ ಮಾರಿಸ್, ಕೇವಲ 18 ಎಸೆತಗಳಲ್ಲಿ 36* ರನ್ ಸಿಡಿಸಿ ರಾಜಸ್ಥಾನ್ ರಾಯಲ್ಸ್ಗೆ ಗೆಲುವು ತಂದುಕೊಟ್ಟರು. ತಮ್ಮದೇ ದೇಶದ ಕಗಿಸೊ ರಬಾಡ ಅವರಿಗೆ 19ನೇ ಓವರ್ನಲ್ಲಿ ಎರಡು ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದ ಕ್ರಿಸ್ ಮಾರಿಸ್ ನಂತರ ಕೊನೆಯ ಓವರ್ನಲ್ಲಿ ಟಾಮ್ ಕರ್ರನ್ ಇನ್ನೆರಡು ಸಿಕ್ಸರ್ಗಳನ್ನು ಬಾರಿಸಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಇನ್ನು ಎರಡು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು. ಆ ಮೂಲಕ ರಾಜಸ್ಥಾನ್ 2021ರ ಆವೃತ್ತಿಯಲ್ಲಿ ಪಾಯಿಂಟ್ಸ್ ಟೇಬಲ್ನಲ್ಲಿ ತಮ್ಮ ಖಾತೆ ತೆರೆಯಿತು. ಮಾರಿಸ್ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, ಕಳೆದ ಪಂದ್ಯದಲ್ಲಿ ಸಿಂಗಲ್ ಪಡೆಯಲು ನಿರಾಕರಿಸಿದ ಘಟನೆಯನ್ನು ಸ್ಮರಿಸಿಕೊಂಡರು ಹಾಗೂ ಆ ರೀತಿಯ ಅವಕಾಶ 100 ಬಾರಿ ಬಂದರೂ ನಾನು ಸಿಂಗಲ್ ರನ್ ಪಡೆಯಲು ನಿರಾಕರಿಸುತ್ತೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. "ನಾನು ಯಾವಾಗಲೂ ಹಿಂದಕ್ಕೆ ಕುಳಿತುಕೊಂಡು ಪಂದ್ಯದ ಬಗ್ಗೆ ವಿಮರ್ಶೆ ಮಾಡುತ್ತೇನೆ, ಆ ತರಹದ ಪಂದ್ಯ ನನಗೆ 100 ಬಾರಿ ಬಂದರೂ ನಾನೆಂದಿಗೂ ಸಿಂಗಲ್ ರನ್ ಪಡೆಯುವುದಿಲ್ಲ," ಎಂದು ಸ್ಯಾಮ್ಸನ್ ಸ್ಪಷ್ಟಪಡಿಸಿದರು. 10ನೇ ಓವರ್ನಲ್ಲಿ 42 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ರನ್ ಚೇಸ್ ಮಾಡಲಿದೆ ಎಂಬುದನ್ನು ಸಂಜು ಸ್ಯಾಮ್ಸನ್ ನಂಬಿರಲಿಲ್ಲ. ಕ್ರಿಸ್ ವೋಕ್ಸ್ ಹಾಗೂ ಕಗಿಸೊ ರಬಾಡ ಜೋಡಿ, ಆರಂಭಿಕರಾದ ಜಾಸ್ ಬಟ್ಲರ್(2) ಹಾಗೂ ಮನನ್ ವೋಹ್ರಾ(9) ಅವರನ್ನು ಬಹುಬೇಗ ವಿಕೆಟ್ ಪಡೆದಿದ್ದರು. ನಾಯಕ ಸಂಜು ಸ್ಯಾಮ್ಸನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ 42 ಎಸೆತಗಳಲ್ಲಿ 62 ರನ್ ಚೆಚ್ಚಿದರು. ಇವರಿಗೆ ಕೆಲಕಾಲ ಸಾಥ್ ನೀಡಿದ್ದ ರಾಹುಲ್ ತೇವಾಟಿಯಾ 17 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಬೌಲಿಂಗ್ನಲ್ಲಿ 3 ವಿಕೆಟ್ ಕಿತ್ತಿದ್ದ ಜಯದೇವ್ ಉನದ್ಕಟ್ ಬ್ಯಾಟಿಂಗ್ನಲ್ಲಿ 7 ಎಸೆತಗಳಿಗೆ 11 ರನ್ ಗಳಿಸಿ ಔಟ್ ಆದರು . "ಪ್ರಾಮಾಣಿಕವಾಗಿ ಹೇಳಬೇಕೆಂದರೆ 40 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ನಾವು ಸಂಕಷ್ಟಕ್ಕೆ ಸಿಲುಕಿದ್ದೆವು. ಆದರೆ, ಮಿಲ್ಲರ್ ಹಾಗೂ ಮಾರಿಸ್ ನಮಗೆ ಗೆಲುವು ತಂದುಕೊಟ್ಟರು. ನಿಜಕ್ಕೂ ಇದು ಕಷ್ಟದ ಕೆಲಸ," ಎಂದು ಸಹ ಆಟಗಾರರನ್ನು ಸಂಜು ಸ್ಯಾಮ್ಸನ್ ಗುಣಗಾನ ಮಾಡಿದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ 2 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರಿತು. ಏಪ್ರಿಲ್ 19ರಂದು ಇದೇ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಂಜು ಸ್ಯಾಮ್ಸನ್ ಪಡೆ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tp9GXs