ಬೆಂಗಳೂರು: ಜನರು ಗುಂಪು ಸೇರುವುದರಿಂದಲೇ ಕೋವಿಡ್ ಹರಡುತ್ತಿರುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ರಾತ್ರೋರಾತ್ರಿ ವೈದ್ಯರನ್ನು, ಆರೋಗ್ಯ ಕಾರ್ಯಕರ್ತರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜನ ಗುಂಪು ಸೇರಬಾರದು, ಗುಂಪು ಸೇರೋದ್ರಿಂದಲೇ ಕೋವಿಡ್ ಹರಡುತ್ತಿದೆ ಎಂದಿದ್ದಾರೆ. ಕ್ಲೋಸ್ಡ್ ಸರ್ಕ್ಯೂಟ್ನಲ್ಲಿ ಗುಂಪಿದ್ದರೆ ಗಾಳಿ ಮೂಲಕವೂ ವೈರಸ್ ಹರಡುತ್ತದೆ ಎಂದ ಅವರು, ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಬೆಂಗಳೂರಿಗೆ ಪ್ರತ್ಯೇಕ ನಿಯಮ ತರುತ್ತೇವೆ. ಕೋವಿಡ್ ಹೆಚ್ಚಿರುವ ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮವನ್ನು ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು. ಕೋವಿಡ್ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಸಭೆಯಲ್ಲಿ ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ವಿರೋಧ ಪಕ್ಷಗಳು ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕು. ಈ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪ ಮಾಡೋದು ಸರಿಯಲ್ಲ ಎಂದರು. ಕೋವಿಡ್ ಸೋಂಕು ಡ್ರಾಪ್ಲೆಟ್ಗಳ ಮೂಲಕವೂ ಹರಡುತ್ತಿದೆ, ಇದಕ್ಕೆ ಕಡಿವಾಣ ಹಾಕಬೇಕು. ಕಠಿಣ ನಿಯಮಗಳನ್ನು ಜಾರಿ ಮಾಡುವ ಅವಶ್ಯಕತೆ ಇದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. ರಾಜ್ಯದಲ್ಲಿ ಕೋವಿಡ್ ತೀವ್ರ ರೀತಿಯಲ್ಲಿ ಹರಡುತ್ತಿದ್ದು ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಮಂಗಳವಾರ ರಾಜ್ಯಪಾಲ ವಜೂಭಾಯಿ ವಾಲಾ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
from India & World News in Kannada | VK Polls https://ift.tt/2QIqaLB