ಬೆಂಗಳೂರು: ಸಕಾಲಕ್ಕೆ ಆಕ್ಸಿಜನ್ ಸಿಗದೆ ಸಚಿವ ಸುರೇಶ್‌ಕುಮಾರ್‌ ಆಪ್ತ ಸಹಾಯಕ ರಮೇಶ್‌ ಸಾವು, ಕಣ್ಣೀರಿನ ಕತೆ ಹಲವು!

ಬೆಂಗಳೂರು: ಆಕ್ಸಿಜನ್‌ ಕೊರತೆ ಇಲ್ಲ ಎಂದು ರಾಜ್ಯ ಸರಕಾರ ಎಷ್ಟೇ ಘಂಟಾಘೋಷವಾಗಿ ಹೇಳಿದರೂ ಆಸ್ಪತ್ರೆಗಳಲ್ಲಿ ಪ್ರಾಣವಾಯು ಕೊರತೆಯಿಂದಾಗಿ ಅಸು ನೀಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸೋಮವಾರ ಚಿಕ್ಕಮಗಳೂರಿನಲ್ಲಿ ಕ್ಯಾಬ್‌ ಚಾಲಕ ಹಾಗೂ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರ ಎಂಬುವವರಿಗೆ ಸಕಾಲಕ್ಕೆ ಆಕ್ಸಿಜನ್‌ ಸಿಗದೇ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣಗಳು ಕೊರೊನಾ ಸೋಂಕು, ಆಕ್ಸಿಜನ್‌ ಕೊರತೆ, ಆಸ್ಪತ್ರೆಗಳ ಅಸಹಕಾರದ ಪರಮಾವಧಿಯನ್ನು ಬಿಚ್ಚಿಟ್ಟಿದೆ. ಉಸಿರು ಚೆಲ್ಲಿದ ಸಚಿವರ ಆಪ್ತ ರಮೇಶ್‌ ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರ ಆಪ್ತ ಸಹಾಯಕ ಎಚ್‌.ಜಿ.ರಮೇಶ್‌ (53) ಸೋಮವಾರ ಕೋವಿಡ್‌-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಇತ್ತೀಚೆಗೆ ಕೋವಿಡ್‌ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ರಮೇಶ್‌ ಅವರಿಗೆ ಉಸಿರಾಟಕ್ಕೆ ಸಮಸ್ಯೆ ಉಂಟಾಗಿತ್ತು. ಸೂಕ್ತ ಸಮಯಕ್ಕೆ ಆಮ್ಲಜನಕ ಸಿಗದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಾಜ್ಯ ಸರಕಾರ ಆಕ್ಸಿಜನ್‌ ಕೊರತೆ ಇಲ್ಲಎಂದು ಹೇಳುತ್ತಿದ್ದರೂ ವಾಸ್ತವ ಬೇರೆಯದ್ದೇ ಆಗಿದೆ. ಸಚಿವರ ಆಪ್ತ ಸಹಾಯಕರಿಗೇ ಸೂಕ್ತ ಸಮಯಕ್ಕೆ ಆಕ್ಸಿಜನ್‌ ಸಿಗಲಿಲ್ಲ ಎಂದರೆ ಜನಸಾಮಾನ್ಯರ ಪಾಡೇನು? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ. ರಮೇಶ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಚಿವ ಸುರೇಶ್‌ಕುಮಾರ್‌, ''ನನ್ನ ಕ್ಷೇತ್ರದ ಹಲವಾರು ಮಂದಿ ರೋಗಿಗಳನ್ನು ನಗರದ ನಾನಾ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ದಾಖಲಿಸಲು, ಶುಶ್ರೂಷೆ ಪಡೆಯಲು ಸದಾ ನೆರವಾಗುತ್ತಿದ್ದ ರಮೇಶ್‌ ಅವರಿಗೆ ಇತ್ತೀಚೆಗೆ ಕೊರೋನಾ ಸೋಂಕು ತಗಲಿತ್ತು. ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಳ್ಳಲಾರಂಭಿಸಿದ್ದ ಅವರೊಂದಿಗೆ ಭಾನುವಾರ ಸಂಜೆ ದೂರವಾಣಿ ಮೂಲಕ ಮಾತನಾಡಿದ್ದೆ,'' ಎಂದು ಕಂಬನಿ ಮಿಡಿದಿದ್ದಾರೆ. ಕೈ ಮುಗಿದು ಬೇಡಿದರು ಸಿಕ್ಕಿಲ್ಲ ಬೆಡ್‌, ಆಕ್ಸಿಜನ್‌ ಚಿಕ್ಕಮಗಳೂರು: ಎರಡು ದಿನಗಳ ಕಾಲ ಸತತವಾಗಿ ಬೆಂಗಳೂರಿನ ಆಸ್ಪತ್ರೆಗಳ ಮೆಟ್ಟಿಲು ಹತ್ತಿಳಿದು ಆಕ್ಸಿಜನ್‌ ನೀಡುವಂತೆ ಕೈಮುಗಿದು ಬೇಡಿದರೂ ಪ್ರಯೋಜನವಾಗದೆ ಕ್ಯಾಬ್‌ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕು ಹೊಸಕೆರೆ ಗ್ರಾಮದ ಜಗದೀಶ್‌ (38) ಚಿಕಿತ್ಸೆ ಸಿಗದೆ ಸಾವಪ್ಪಿದ ದುರ್ದೈವಿ. ತೀವ್ರ ಉಸಿರಾಟದ ತೊಂದರೆಗೆ ಸಿಲುಕಿದ್ದ ಜಗದೀಶ್‌ ಅವರಿಗೆ ಚಿಕಿತ್ಸೆ ಕೊಡಿಸಲು ಪತ್ನಿ ಹಾಗೂ ಮಗಳು ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಆಸ್ಪತ್ರೆಯ ವೈದ್ಯರು ಸ್ಪಂದಿಸಲಿಲ್ಲ. ಕಣ್ಣೆದುರೇ ಜಗದೀಶ್‌ ಅವರನ್ನು ಕಳೆದುಕೊಂಡ ಪತ್ನಿ ಮತ್ತು ಮಗಳ ರೋದನ ಮುಗಿಲು ಮುಟ್ಟಿದೆ. ಬೆಂಗಳೂರಿನಲ್ಲಿ ಕ್ಯಾಬ್‌ ಚಾಲಕರಾಗಿದ್ದ ಜಗದೀಶ್‌ಗೆ ಎರಡು ದಿನಗಳಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆತಂದಾಗ ಕೋವಿಡ್‌ ವರದಿ ಇಲ್ಲದೆ ಚಿಕಿತ್ಸೆ ಕೊಡುವುದಿಲ್ಲಎಂದು ಹೇಳಲಾಗಿದೆ. ಬೇರೆ ಬೇರೆ ಆಸ್ಪತ್ರೆಗೆ ಕರೆದೊಯ್ದರೂ ಎಲ್ಲರಿಂದಲೂ ಒಂದೇ ಉತ್ತರ ಬಂದಿದೆ. ಗಂಡನಿಗೆ ಆಕ್ಸಿಜನ್‌ ಕೊಡಿ ಎಂದು ಗೋಗರೆದರೂ ವೈದ್ಯರು ಸ್ಪಂದಿಸಲಿಲ್ಲ. ಭಾನುವಾರ ಉಸಿರಾಟದ ತೊಂದರೆ ತೀವ್ರಗೊಂಡಿದ್ದು, ಪತ್ನಿ ಅನಿತಾ ಹಾಗೂ ಜಗದೀಶ್‌ ಮಗಳು ಚಿಕಿತ್ಸೆ ಕೊಡುವಂತೆ ವೈದ್ಯರ ಬಳಿ ಅಂಗಲಾಚಿದ್ದಾರೆ. ಆದರೆ, ಕೋವಿಡ್‌ ವರದಿ ಇಲ್ಲದ ಕಾರಣ ಯಾರೊಬ್ಬರೂ ಜಗದೀಶ್‌ ಅವರನ್ನು ಮುಟ್ಟಿ ಚಿಕಿತ್ಸೆ ಕೊಡಲಿಲ್ಲ. ಕಣ್ಣೆದುರೇ ಜಗದೀಶ್‌ ಮೃತಪಟ್ಟಿದ್ದಾರೆ.


from India & World News in Kannada | VK Polls https://ift.tt/3edW7DP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...