ಬೆಂಗಳೂರು: ಇಲಾಖೆ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಆರೋಪಿಸಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಹಾಗೂ ವರಿಷ್ಠರಿಗೆ ಬರೆದ ಪತ್ರ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪತ್ರ ಸೃಷ್ಟಿಸಿದ ಬಿರುಗಾಳಿಯ ಬೆನ್ನಲ್ಲೇ ಕೆಲ ಸಚಿವರು ಹಾಗೂ ಶಾಸಕರ ಗುಂಪು ಯಡಿಯೂರಪ್ಪ ಬೆಂಬಲಕ್ಕೆ ನಿಂತಿದೆ. ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಮೂಲ ಬಿಜೆಪಿಗರ ಮೌನ ಸಾಕಷ್ಟು ಕುತೂಹಲಕ್ಕೆ ಗ್ರಾಸವಾಗಿದೆ. ಯಡಿಯೂರಪ್ಪ ಅವರ ಬೆಂಬಲಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವು ಶಾಸಕರು ನಿಂತಿದ್ದಾರೆ. ಅಷ್ಟೇ ಅಲ್ಲ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಕೆ. ಸುಧಾಕರ್, ಬಿ.ಸಿ ಪಾಟೀಲ್ ಸೇರಿದಂತೆ ಆಪ್ತ ವಲಯದ ಸಚಿವರು ಬಹಿರಂಗವಾಗಿಯೇ ಈಶ್ವರಪ್ಪ ನಡೆಯನ್ನು ಖಂಡಿಸಿದ್ದಾರೆ. ಆದರೆ ಡಿಸಿಎಂ ಲಕ್ಷ್ಮಣ ಸವದಿ, ಡಾ. ಅಶ್ವತ್ಥ ನಾರಾಯಣ ಸೇರಿದಂತೆ ಮೂಲ ಬಿಜೆಪಿಗರ ಮೌನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೆ.ಎಸ್ ಈಶ್ವರಪ್ಪಗೆ ಪರೋಕ್ಷ ಬೆಂಬಲ ನೀಡಿದ್ರಾ ಮೂಲ ಬಿಜೆಪಿಗರು! ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದವ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಶಾಸಕರ ಸಭೆಯಲ್ಲೂ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಬಿಎಸ್ವೈ ಆಪ್ತ ಸಚಿವರು ಪತ್ರಿಕಾಗೋಷ್ಠಿಯಲ್ಲೇ ಖಂಡಿಸಿದ್ದರು. ಇದಾದ ಬಳಿಕ ಆಂತರಿಕವಾಗಿ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಕಾರ್ಯವೈಖರಿಯ ಬಗ್ಗೆ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗುತ್ತಾ ಬಂದಿತ್ತು. ಆದರೂ ಬಹಿರಂಗವಾಗಿ ಯಾರೂ ಹೇಳಿಕೆ ಕೊಡುವ ಧೈರ್ಯ ಮಾಡಿಲ್ಲ. ಆದ್ರೆ ಇದೀಗ ಕೆ.ಎಸ್ ಈಶ್ವರಪ್ಪ ಅವರು ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿಎಂ ಬಿಡುಗಡೆ ಮಾಡಿರುವ ಅನುದಾನವನ್ನು ತಡೆ ಹಿಡಿದಿದ್ದಾರೆ. ಇಬ್ಬರು ನಾಯಕರ ನಡುವಿನ ಬಹಿರಂಗ ಸಮರ ಪಕ್ಷಕ್ಕೂ ಮುಜುಗರ ತಂದೊಡ್ಡುತ್ತಿದೆ. ಇದೇ ಸಂದರ್ಭದಲ್ಲಿ ಕೆಲವು ಮುಖಂಡರು ಪರೋಕ್ಷವಾಗಿ ಈಶ್ವರಪ್ಪ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ. ಫೋನ್ ಕರೆ ಮಾಡಿ ಬೆಂಬಲವನ್ನು ಸೂಚಿಸಿದವರೂ ಇದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಸದ್ಯ ಬಹಿರಂಗವಾಗಿ ಕಿತ್ತಾಟ ಮುಂದುವರಿಯದಂತೆ ಸಂಧಾನ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದು ಎಷ್ಟರ ಮಟ್ಟಿಗೆ ಫಲಪ್ರದ ಆಗುತ್ತದೆ ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/3sMmZ3L