'ಭಾರತ ಪ್ರತಿನಿಧಿಸುವ ಸಾಮರ್ಥ್ಯ ಈತನಲ್ಲಿದೆ' ಆರ್‌ಸಿಬಿ ಆಟಗಾರನನ್ನು ಶ್ಲಾಘಿಸಿದ ಸನ್ನಿ!

ಮುಂಬೈ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರೆ "ನನಗೆ ಆಶ್ಚರ್ಯವಾಗುವುದಿಲ್ಲ" ಎಂದು ಬ್ಯಾಟಿಂಗ್‌ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 52 ಎಸೆತಗಳಿಗೆ ಅಜೇಯ 101 ರನ್‌ ಗಳಿಸಿದ ದೇವದತ್‌ ಪಡಿಕ್ಕಲ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ 10 ವಿಕೆಟ್‌ಗಳ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು. ಆ ಮೂಲಕ ಎಲ್ಲರ ಗಮನವನ್ನು ಕರ್ನಾಟಕ ಬ್ಯಾಟ್ಸ್‌ಮನ್‌ ಸೆಳೆದಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಫ್ರಾಂಚೈಸಿ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಪಡಿಕ್ಕಲ್‌, ಚೊಚ್ಚಲ ಆವೃತ್ತಿಯಲ್ಲಿಯೇ 400ಕ್ಕೂ ಹೆಚ್ಚಿನ ರನ್‌ಗಳನ್ನು ಸಿಡಿಸಿದ್ದರು. ಅಲ್ಲದೆ, ಕಳೆದ ಹಲವು ವರ್ಷಗಳಿಂದ ಕರ್ನಾಟಕ ಪರ ದೇಶಿ ಕ್ರಿಕೆಟ್‌ನಲ್ಲಿ ಎಲ್ಲಾ ಮಾದರಿಯಲ್ಲಿಯೂ ರನ್‌ ಹೊಳೆ ಹರಿಸುತ್ತಿದ್ದಾರೆ. ಇದನ್ನು ಗಮನಿಸಿರುವ ಭಾರತ ತಂಡದ ಮಾಜಿ ನಾಯಕ , ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಎಲ್ಲಾ ಸಾಮರ್ಥ್ಯ ಹಾಗೂ ಕೌಶಲ 20ರ ಪ್ರಾಯದ ಆಟಗಾರ ಪಡಿಕ್ಕಲ್‌ಗೆ ಇದೆ ಎಂಬುದನ್ನು ತಿಳಿಸಿದ್ದಾರೆ. "ಮೂರೂ ಸ್ವರೂಪದ ಎಲ್ಲಾ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ದೇವದತ್‌ ಪಡಿಕ್ಕಲ್‌ ಪ್ರನಿಧಿಸಿದರೆ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಅವರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಸಾಮರ್ಥ್ಯವಿದೆ. ಪ್ರಥಮ ದರ್ಜೆ ಕ್ರಿಕೆಟ್‌ ಹಾಗೂ ರಣಜಿ ಟ್ರೋಫಿಯಲ್ಲಿ ಅವರು ರನ್‌ ಹೊಳೆಯನ್ನೇ ಹರಿಸಿದ್ದಾರೆ ಹಾಗೂ ದೊಡ್ಡ ಶತಕಗಳು ಅವರ ಖಾತೆಯಲ್ಲಿದೆ," ಎಂದರು. "ಇನ್ನು, 50 ಓವರ್‌ಗಳ ಸ್ವರೂಪಕ್ಕೆ ಬಂದರೆ, ಇದರಲ್ಲೂ ಅವರು ಬಹಳಷ್ಟು ರನ್‌ ಗಳಿಸಿದ್ದಾರೆ ಹಾಗೂ ಶತಕಗಳ ಮೇಲೆ ಶತಕಗಳನ್ನು ಸಿಡಿಸಿದ್ದಾರೆ. ಟಿ20 ಮಾದರಿಯ ದೇಶಿ ಕ್ರಿಕೆಟ್‌ನಲ್ಲಿಯೂ ಅವರು ಸಿಕ್ಕಾಪಟ್ಟೆ ರನ್‌ಗಳನ್ನು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರೆ ನನಗೆ ಅಚ್ಚರಿಯಾಗುವುದಿಲ್ಲ," ಎಂದು ಗವಾಸ್ಕರ್ ಯುವ ಆಟಗಾರನ ಪರ ಬ್ಯಾಟ್‌ ಬೀಸಿದರು. ಕರ್ನಾಟಕ ರಾಜ್ಯ ಈಗಾಗಲೇ ಹಲವಾರು ಸ್ಟಾರ್‌ ದಿಗ್ಗಜರನ್ನು ಭಾರತೀಯ ಕ್ರಿಕೆಟ್‌ಗೆ ಪರಿಚಯಿಸಿದೆ. ಇದೀಗ, ದೇವದತ್‌ ಪಡಿಕ್ಕಲ್‌ ಅವರಂಥ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಅನ್ನು ಟೀಮ್‌ ಇಂಡಿಯಾಗೆ ನೀಡಲಿದೆ ಎಂದು ಹೇಳಿದರು. ಈ ಹಿಂದೆ ಗುಂಡಪ್ಪ ವಿಶ್ವನಾಥ್‌, ರಾಹುಲ್‌ ದ್ರಾವಿಡ್‌, ಕೆ.ಎಲ್‌ ರಾಹುಲ್ ಅವರಂಥ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳನ್ನು ಕರ್ನಾಟಕ ಟೀಮ್‌ ಇಂಡಿಯಾಗೆ ನೀಡಿದೆ. ಇದೀಗ ದೇವದತ್‌ ಪಡಿಕ್ಕಲ್‌ ಅವರನ್ನು ನೀಡಲು ಸಜ್ಜಾಗುತ್ತಿದೆ ಎಂದರು. "ಭಾರತೀಯ ಕ್ರಿಕೆಟ್‌ಗೆ ಕರ್ನಾಟಕ ಭಯಾನಕ ಬ್ಯಾಟ್ಸ್‌ಮನ್‌ ಲೈನ್‌ ಅಪ್‌ ಅನ್ನು ನೀಡಿದೆ. ಜಿ ವಿಶ್ವನಾಥ್‌, ರಾಹುಲ್‌ ದ್ರಾವಿಡ್‌, ಕೆ.ಎಲ್‌ ರಾಹುಲ್‌ ಅವರನ್ನು ನೀಡಿದೆ. ಅಲ್ಲದೆ, ಮಯಾಂಕ್‌ ಅಗರ್ವಾಲ್‌ ಹಾಗೂ ವಿರೇಂದ್ರ ಸೆಹ್ವಾಗ್‌ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ್ದ ಕರುಣ್‌ ನಾಯರ್‌ ಅವರನ್ನು ಕರುನಾಡು ನೀಡಿದೆ. ಈ ರೀತಿ ಕರ್ನಾಟಕ ತಂಡದಲ್ಲಿ ಭಯಾನಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇದೀಗ ಈ ಗುಂಪಿಗೆ ಸಿಡಿಲ ಮರಿ ದೇವದತ್‌ ಪಡಿಕ್ಕಲ್‌ ಸೇರ್ಪಡೆಯಾಗುವ ಸನಿಹದಲ್ಲಿದ್ದಾರೆ," ಎಂದು ಸುನೀಲ್‌ ಗವಾಸ್ಕರ್ ಆರ್‌ಸಿಬಿ ಆಟಗಾರನನ್ನು ಶ್ಲಾಘಿಸಿದರು. 2021ರ ಆವೃತ್ತಿಯ ಐಪಿಎಲ್‌ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳನ್ನು ಸತತವಾಗಿ ಗೆದ್ದಿರುವ ಆರ್‌ಸಿಬಿ ಬಹುಬೇಗ ಪ್ಲೇಆಫ್ಸ್ ತಲುಪುವ ನೆಚ್ಚಿನ ತಂಡವಾಗಿದೆ. ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಮೂರು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ejeDuk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...