ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ನಿರೀಕ್ಷೆ ಮಾಡಿದ್ದ ಇಬ್ಬನಿ ಚೇಸಿಂಗ್ನಲ್ಲಿ ಪ್ರಭಾವ ಬೀರಲಿಲ್ಲ. ಆದರೆ, ಪಿಚ್ ಸಂಪೂರ್ಣ ಸ್ಪಿನ್ಗೆ ಸ್ನೇಹಿಯಾಗಿತ್ತು ಎಂದು ನಾಯಕ ಹೇಳಿದರು. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದಿದ್ದ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 45 ರನ್ಗಳಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಬೀಗಿತು. ಆ ಮೂಲಕ 4 ಅಂಕಗಳೊಂದಿಗೆ ಸಿಎಸ್ಕೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೇರಿತು. ಇದಕ್ಕೂ ಮುನ್ನ 189 ರನ್ ಚೇಸಿಂಗ್ ಆರಂಭಿಸಿದ್ದ ರಾಜಸ್ಥಾನ್ ರಾಯಲ್ಸ್ ಒಂದು ಹಂತದಲ್ಲಿ 11 ಓವರ್ಗಳಿಗೆ 2 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿ ಕಠಿಣ ಪೈಪೋಟಿ ನೀಡುತ್ತಿತ್ತು. ಆದರೆ, ರವೀಂದ್ರ ಜಡೇಜಾ ಹಾಗೂ ಮೊಯಿನ್ ಅಲಿ ಸ್ಪಿನ್ ಮೋಡಿಯಿಂದ ಪಂದ್ಯದ ದಿಕ್ಕು ಸಂಪೂರ್ಣವಾಗಿ ಸಿಎಸ್ಕೆ ಪರ ತಿರುಗಿತು. 49 ರನ್ ಗಳಿಸಿ ಆಡುತ್ತಿದ್ದ ಜೋಸ್ ಬಟ್ಲರ್ 12ನೇ ಓವರ್ ಮೊದಲನೇ ಎಸೆತದಲ್ಲಿ ಜಡೇಜಾಗೆ ಕ್ಲೀನ್ ಬೌಲ್ಡ್ ಆದರು ಹಾಗೂ ಇದೇ ಓವರ್ನಲ್ಲಿ ಶಿವಮ್ ದುಬೇ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಇದರ ಮುಂದಿನ ಓವರ್ನಲ್ಲಿ ಮೊಯಿನ್ ಅಲಿ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿದರು. ನಂತರ 15ನೇ ಓವರ್ನಲ್ಲಿ ರಿಯಾಮ್ ಪರಾಗ್ ಹಾಗೂ ಕ್ರಿಸ್ ಮಾರಿಸ್ ಅವರನ್ನೂ ಪೆವಿಲಿಯನ್ ಹಾದಿ ತೋರಿಸಿದರು. ರಾಜಸ್ಥಾನ್21 ಎಸೆತಗಳಲ್ಲಿ 8 ರನ್ ಗಳಿಸಿ 5 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. 45 ರನ್ಗಳ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, ಎರಡನೇ ಇನಿಂಗ್ಸ್ನಲ್ಲಿ ನಾವು ನಿರೀಕ್ಷೆ ಮಾಡಿದಂತೆ ಇಬ್ಬನಿ ಪಂದ್ಯದ ಮೇಲೆ ಪ್ರಭಾವ ಬೀರಲಿಲ್ಲ. ಹಾಗಾಗಿ ಇಲ್ಲಿನ ವಿಕೆಟ್ ಸ್ಪಿನ್ಗೆ ಸಂಪೂರ್ಣ ಸಹಕಾರಿಯಾಗಿತ್ತು. ಇದು ನಮ್ ತಂಡಕ್ಕೆ ಅಚ್ಚರಿ ಉಂಟು ಮಾಡಿತು ಎಂದು ಹೇಳಿದರು. "ನಾವು ಟರ್ನಿಂಗ್ ಬಗ್ಗೆ ನಿರೀಕ್ಷೆ ಮಾಡಿರಲಿಲ್ಲ. ಇಬ್ಬನಿ ಬರಲಿಲ್ಲ ಹಾಗೂ ಬಾಲ್ ಇನ್ನೂ ತಿರುಗುತ್ತಲೇ ಇತ್ತು. ಹಾಗಾಗಿ ಇದನ್ನೂ ನೋಡುವುದು ನಮಗೆ ಶಾಕಿಂಗ್ ಆಗಿತ್ತು," ಎಂದು ಸಂಜು ಸ್ಯಾಮ್ಸನ್ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ತಿಳಿಸಿದರು. "ಚೇಸ್ ಮಾಡಲು ಇದು ಉತ್ತಮ ಮೊತ್ತವಾಗಿತ್ತು. ಆದರೆ ನಾವು ಮಧ್ಯಮ ಓವರ್ಗಳಲ್ಲಿ ನಾವು ತುಂಬಾ ವಿಕೆಟ್ಗಳನ್ನು ಕಳೆದುಕೊಂಡೆವು. ಇದಕ್ಕೂ ಮುನ್ನ ನಮ್ಮ ಬೌಲರ್ಗಳು ಅತ್ಯುತ್ತಮ ಬೌಲಿಂಗ್ ಮಾಡಿದ್ದರು. ಆದರೂ ಸಿಎಸ್ಕೆ ಬ್ಯಾಟಿಂಗ್ ಡೆಪ್ತ್ನಿಂದ ಕೂಡಿತ್ತು. 10 ರಿಂದ 15 ರನ್ ನಾವು ಹೆಚ್ಚುವರಿಯಾಗಿ ಅವರಿಗೆ ನೀಡಿದ್ದೇವೆ," ಎಂದು ಹೇಳಿದರು. "ಉತ್ತಮ ಹಿಡಿತವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಟಿ20 ಸ್ವರೂಪವು ಹೆಚ್ಚಿನ ಅಪಾಯದ ದರದಲ್ಲಿ ಸ್ಕೋರ್ ಮಾಡಲು ನಮ್ಮನ್ನು ಒತ್ತಾಯಿಸುತ್ತದೆ. ಆದ್ದರಿಂದ, ಆಗಾಗ್ಗೆ ಬ್ಯಾಟ್ಸ್ಮನ್ಗಳು ಔಟ್ ಆಗಿ ಹೊರಬರುವುದು ತುಂಬಾ ಸಾಮಾನ್ಯವಾಗುತ್ತದೆ," ಎಂದರು. "ನಾನು ಮೂಲಭೂತ ವಿಷಯಗಳಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಮಧ್ಯೆದಲ್ಲಿ ಸ್ವಲ್ಪ ಸಮಯವನ್ನು ನೀಡುತ್ತಿದ್ದೇನೆ. ಅವರು (ಚೇತನ್ ಸಕಾರಿಯಾ) ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ ಆದರೆ, ಸಾಕಷ್ಟು ಸಕಾರಾತ್ಮಕ ಅಂಶಗಳಿವೆ," ಎಂದು ಸಂಜು ಸ್ಯಾಮ್ಸನ್ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3sxA7ZQ